ಕನ್ನಡಪ್ರಭ ವಾರ್ತೆ, ತುಮಕೂರು12ನೇ ಶತಮಾನದ ಶರಣರ ದಾಸೋಹ ಪರಿಕಲ್ಪನೆಗೆ ವಿಶೇಷ ಅರ್ಥ ನೀಡಿದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳು ತಮ್ಮ ಮಠವನ್ನು ಅನ್ನ, ಅಕ್ಷರ, ಆಶ್ರಯ ದಾಸೋಹದ ಪ್ರಯೋಗ ಶಾಲೆಯನ್ನಾಗಿ ಮಾಡಿ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಇಡೀ ಜಗತ್ತೇ ತುಮಕೂರಿನ ಕಡೆಗೆ ತಿರುಗಿ ನೋಡುವಂತೆ ಮಾಡಿದ ಸ್ವಾಮೀಜಿಯವರ ಹೆಸರಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಪೀಠವೊಂದನ್ನು ಸ್ಥಾಪಿಸಿ ಸಂಶೋಧನೆ ನಡೆಯುವಂತಾಗಬೇಕು ಈ ನಿಟ್ಟಿನಲ್ಲಿ ತುಮಕೂರು ವಿಶ್ವವಿದ್ಯಾಲಯ ಕ್ರಮ ವಹಿಸಬೇಕು ಎಂದು ಇತಿಹಾಸ ಸಂಶೋಧಕ ಡಾ. ಡಿ ಎನ್ ಯೋಗೀಶ್ವರಪ್ಪ ಒತ್ತಾಯಿಸಿದರು.ಅವರು ಹೆಗ್ಗೆರೆಯಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಬಡಾವಣೆಯ ನಾಗರೀಕ ವೇದಿಕೆ ಏರ್ಪಡಿಸಿದ್ದ ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾವು ಮಠಾಧ್ಯಕ್ಷರಾದ ಆರಂಭಿಕ ದಿನಗಳಲ್ಲಿ ಬಹಳ ಕಷ್ಟದ ದಿನಗಳನ್ನು ಕಂಡಿದ್ದ ಅವರು ತಮ್ಮ ಪೂಜಾ ನಿಷ್ಠೆಯ ಮೂಲಕ ಭಕ್ತ ಸಮುದಾಯವನ್ನು ಗಳಿಸಿಕೊಂಡು ಆ ಮೂಲಕ ಮಠವನ್ನು ಕಷ್ಟದಿಂದ ಪಾರು ಮಾಡಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಭಿಕ್ಷಾಟನೆಯ ಮೂಲಕ ದವಸ ಧಾನ್ಯಗಳನ್ನು ಸಂಗ್ರಹಿಸಿ ದಾಸೋಹಕ್ಕೆ ಚ್ಯುತಿಯಾಗದಂತೆ ನೋಡಿಕೊಂಡರು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಕೆ.ಎಸ್ ಸಿದ್ಧಲಿಂಗಪ್ಪ ಈ ಜಗತ್ತು ಕಂಡ ಮಹಾನ್ ಸಂತರು ಮಹಾ ತಪಸ್ವಿಗಳು ಈ ಶತಮಾನದ ಜ್ಯೋತಿ ಸ್ವರೂಪರು ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳನ್ನು ಸ್ಥಾಪಿಸಿವುದರ ಮೂಲಕ ಕನ್ನಡ ಪ್ರೇಮವನ್ನು ಮೆರೆದವರು. ನಿತ್ಯ ಹದಿನೆಂಟು ಗಂಟೆಗಳ ಕಾಲ ಕಾಯಕ ಮಾಡುತ್ತಿದ್ದ ಸ್ವಾಮೀಜಿ ಆರಂಭದ ದಿನಗಳಲ್ಲಿ ಉಳುಮೆ ಮಾಡಿದ್ದಾರೆ ಕಲ್ಲು ಹೊಡೆದಿದ್ದಾರೆ ಅಡುಗೆ ಮಾಡಿದ್ದಾರೆ. ಎಲ್ಲ ಕಾಯಕವನ್ನು ಸಮಾನವಾಗಿಯೇ ನೋಡಿದ್ದ ಸ್ವಾಮೀಜಿಯವರು ದಾಸೋಹದ ಮೂಲಕ ದಾಸೋಹ ಚಕ್ರವರ್ತಿ ಎನಿಸಿಕೊಂಡರು ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಜಿ ಸಿದ್ಧರಾಮಯ್ಯ ಮಾತನಾಡಿ ಕೇವಲ ಇಪ್ಪತ್ತು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದ ಸಿದ್ಧಗಂಗಾ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಜಗತ್ತೇ ನಿಬ್ಬೆರಾಗುವಂತೆ ಮಾಡಿದ ಸಾಧನೆ ಪೂಜ್ಯರದು ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಇಟ್ಟುಕೊಂಡಿದ್ದ ಪೂಜ್ಯರು ತಮ್ಮ ಜೀವಿತಾವಧಿಯಲ್ಲಿ ೧೨೫ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಮಾಜವನ್ನು ಸಾಕ್ಷರ ಸಮಾಜವನ್ನಾಗಿ ಮೊದಲು ಪ್ರಯತ್ನಿಸಿದರು ಎಂದರು.ವೇದಿಕೆಯಲ್ಲಿ ತುಮಕೂರು ತಾಲೂಕು ಕ.ಸಾ.ಪ ಅಧ್ಯಕ್ಷ ಚಿಕ್ಕ ಬೆಳ್ಳಾವಿ ಶಿವಕುಮಾರ ಉಪಾಧ್ಯಕ್ಷ ಪ್ರೊ. ಶಶಿಕುಮಾರ ಹಾಜರಿದ್ದರು. ಹೆಗ್ಗೆರೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ವೀರಭದ್ರಸ್ವಾಮಿ ಸ್ವಾಗತಿಸಿದರು ನಾಗರೀಕ ವೇದಿಕೆಯ ಸದಸ್ಯ ಶಿವಕುಮಾರ ವಂದಿಸಿದರು ಹೆಗ್ಗೆರೆಯ ನಾಗರೀಕ ವೇದಿಕೆಯ ಮಹಿಳೆಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಹೆಗ್ಗೆರೆ ಗ್ರಾಮಪಂಚಾಯ್ತಿ ಮಾಜಿ ಸದಸ್ಯರು ಗೆಳೆಯರ ಬಳಗ ಸದಸ್ಯರು ಶಿವಕುಮಾರ ಸ್ವಾಮೀಜಿ ಬಡಾವಣೆ ಸದಸ್ಯರೆಲ್ಲ ಪಾಲ್ಗೊಂಡಿದ್ದರು.