ಹುಬ್ಬಳ್ಳಿ:
ಇಲ್ಲಿನ ರಾಜನಗರದಲ್ಲಿರುವ ಕೆಎಸ್ಸಿಎ ಮೈದಾನವು ಮಂಗಳವಾರ ರೋಚಕ ಪಂದ್ಯಕ್ಕೆ ಸಾಕ್ಷಿಯಾಯಿತು. ಕೇವಲ ಒಂದು ರನ್ ಮೂಲಕ ಶಿವಮೊಗ್ಗ ಯೋಧಾಸ್ ತಂಡವು ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಜಯ ಸಾಧಿಸಿತು.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಯೋಧಾಸ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 180 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಸುಜಯ ಎಸ್. (ಅಜೇಯ 47) ರನ್ಗಳೊಂದಿಗೆ ತಂಡದ ಪರ ಗರಿಷ್ಠ ಮೊತ್ತ ದಾಖಲಿಸಿದರೆ, ತುಷಾರ್ ಸಿಂಗ್(35) ಹಾಗೂ ಲವನಿತ್ ಸಿಸೋಡಿಯಾ(31) ರನ್ಗಳ ಕೊಡುಗೆ ನೀಡಿದರು. ಗುಲ್ಬರ್ಗಾ ಮಿಸ್ಟಿಕ್ಸ್ ಪರ ಧ್ರುವ ಪ್ರಭಾಕರ್ 16 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು.
ಇತ್ತ 181 ರನ್ಗಳ ಗುರಿ ಬೆನ್ನಟ್ಟಿದ ಗುಲ್ಬರ್ಗಾ ಮಿಸ್ಟಿಕ್ಸ್ ಇನ್ನಿಂಗ್ಸ್ ವೇಳೆ ಮಳೆ ಅಡ್ಡಿಪಡಿಸಿದ್ದರಿಂದ ವಿಜೆಡಿ ನಿಯಮದಂತೆ ಪಂದ್ಯವನ್ನು 12 ಓವರ್ಗಳಿಗೆ ಸೀಮಿತಗೊಳಿಸಿ 128 ರನ್ಗಳ ಪರಿಷ್ಕೃತ ಗುರಿ ನಿಗದಿಗೊಳಿಸಲಾಯಿತು.ಕಠಿಣ ಗುರಿ ಬೆನ್ನಟ್ಟಿದ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಮ್ಯಾಕ್ನೀಲ್ ನೊರೊನ್ಹಾ 20 ಎಸೆತಗಳಲ್ಲಿ 34 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ಗಳು ನಿಯಮಿತವಾಗಿ ಬೀಳುತ್ತಿದ್ದ ಕಾರಣ ತಂಡವು ತೀವ್ರ ಒತ್ತಡಕ್ಕೆ ಸಿಲುಕಿತು. ಅಂತಿಮ ಓವರ್ನಲ್ಲಿ ಗೆಲುವಿಗೆ 26 ರನ್ ಅಗತ್ಯವಿದ್ದಾಗ ಅನುಭವಿ ಬ್ಯಾಟರ್ ಮನಿಷ್ ಪಾಂಡೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 23 ರನ್ ಸಿಡಿಸಿದರು. ಅವರು ಕೇವಲ 13 ಎಸೆತಗಳಲ್ಲಿ 36 ರನ್ (4 ಸಿಕ್ಸರ್, 1 ಬೌಂಡರಿ) ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಗುಲ್ಬರ್ಗಾ ಮಿಸ್ಟಿಕ್ಸ್ 1 ರನ್ನಿಂದ ಸೋಲೊಪ್ಪಿಕೊಂಡಿತು.
ಶಿವಮೊಗ್ಗ ಯೋಧಾಸ್ ಪರ ಯಶವರ್ಧನ್ 24 ರನ್ ನೀಡಿ 2 ವಿಕೆಟ್ ಹಾಗೂ ಅಂಬರೀಶ್ 33 ರನ್ ನೀಡಿ 2 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಸಂಕ್ಷಿಪ್ತ ಸ್ಕೋರ್:
ಶಿವಮೊಗ್ಗ ಯೋಧಾಸ್:
20 ಓವರ್ಗಳಲ್ಲಿ 180/7 (ಸುಜಯ್ ಸತೇರಿ 47*, ತುಷಾರ್ ಸಿಂಗ್ 35, ಲುವನಿತ್ ಸಿಸೋಡಿಯಾ 31, ಯಶೋವರ್ಧನ್ ಪರಂತಾಪ್ 25, ಧ್ರುವ್ ಪ್ರಭಾಕರ್ 2/16)ಗುಲ್ಬರ್ಗಾ ಮಿಸ್ಟಿಕ್ಸ್:
ವಿಜೆಡಿ ಗುರಿ 128 (12 ಓವರ್) ಬೆನ್ನಟ್ಟುವಲ್ಲಿ 1 ರನ್ನಿಂದ ಸೋಲು (ಮ್ಯಾಕ್ನೀಲ್ 34, ಮನಿಷ್ ಪಾಂಡೆ 36*; ಯಶೋವರ್ಧನ್ ಪರಂತಾಪ್ 2/34, ಅಂಬರೀಶ್ ಕೆ. 2/33).