ಚಿತ್ರದುರ್ಗದಲ್ಲಿ ಭಾನುವಾರ ನಡೆದ ಶಿವಪ್ರಕಾಶ್ ಅವರ ಸ್ಮರಣೋತ್ಸವದಲ್ಲಿ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿದರು.

ಸ್ಮರಣೆ ಕಾರ್ಯಕ್ರಮದಲ್ಲಿ ಮಾದಾರು ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಶ್ಲಾಘನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಗ ವಿಧಾನ ಪರಿಷತ್ ಸದಸ್ಯನಾಗಿದ್ದರೂ ಆತನ ರಾಜಕಾರಣದಲ್ಲಿ ಶಿವಪ್ರಕಾಶ್ ಎಂದಿಗೂ ಮೂಗು ತೂರಿಸುವುದಾಗಲೀ, ಸಲಹೆ ಕೊಡುವುದಾಗಲಿ ಮಾಡಲಿಲ್ಲವೆಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ವಿಪ ಸದಸ್ಯ ಕೆ.ಎಸ್.ನವೀನ್ ಅವರ ತಂದೆ ಕೆ.ಆರ್.ಶಿವಪ್ರಕಾಶ್ ಇತ್ತೀಚೆಗೆ ನಿಧನರಾಗಿದ್ದು ಈ ಸಂಬಂಧ ಭಾನುವಾರ ಏರ್ಪಡಿಸಲಾದ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಅಪ್ಪ, ಅಣ್ಣ, ತಮ್ಮ, ಅಮ್ಮ, ಅಕ್ಕ ಶಾಸಕರಾದರೆ ಇಲ್ಲವೇ ಮಂತ್ರಿಗಳಾದರೆ ಅವರ ಸಂಬಂಧಿಕರು ಹೆಸರೇಳಿಕೊಂಡು ಕೆಲಸ ಮಾಡಿಸಿಕೊಳ್ಳುತ್ತಾರೆ ಆದರೆ ಶಿವಪ್ರಕಾಶ್ ರವರು ತಮ್ಮ ಮಗ ಶಾಸಕರಾದರೂ ಸಹಾ ಅವರ ಹೆಸರನ್ನು ಎಲ್ಲಿಯೂ ಕೂಡ ಬಳಸಲಿಲ್ಲವೆಂದರು. ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಮಹಾಸ್ವಾಮೀಜಿ ಮಾತನಾಡಿ, ಶಿವಪ್ರಕಾಶ್ ರವರು ಮುರುಘಾ ಮಠದೊಂದಿಗೆ ಉತ್ತಮವಾದ ಬಾಂಧವ್ಯ ಹೊಂದಿದ್ದರು, ಆಧಾತ್ಮಿಕ ಚಿಂತನೆ, ಕಾಯಕ ನಿರ್ವಹಣೆ ಹಾಗೂ ಪರೋಪಕಾರದ ವರ್ತನೆಯನ್ನು ಹೊಂದಿದ್ದರು. ಮಠದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಎಂದರು.

ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಶಿವಪ್ರಕಾಶ್ ರವರು ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಿದ್ದಾರೆ. ಅವುಗಳನ್ನು ಮುನ್ನಡೆಸುವ ಕಾರ್ಯವನ್ನು ಈಗ ಅವರ ಕುಟುಂಬದವರು ಮಾಡಬೇಕಿದೆ. ಶ್ರೀಮಠದ ಜೊತೆಯಲ್ಲಿ ಶಿವಪ್ರಕಾಶ್ ರವರ ಉತ್ತಮವಾದ ಒಡನಾಟ ಇತ್ತು, ನವೀನ್ ರವರು ಯುವ ನಾಯಕರಾಗಿ ರಾಜಕೀಯದಲ್ಲಿ ಉತ್ತಮವಾಗಿ ಬೆಳೆಯುತ್ತಿದ್ದಾರೆ, ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.

ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ಮಾತನಾಡಿ, ಹುಟ್ಟಿದ ಮಾನವ ಸಾಯಲೇ ಬೇಕು. ನಾವು ಸತ್ತಾಗ ಜನತೆ ನಮ್ಮನ್ನು ಬೈಯಬಾರದು. ನೆನೆಯುವಂತೆ ಮಾಡಬೇಕಿದೆ. ಶಿವಪ್ರಕಾಶ್ ರವರು ಬದುಕಿದ್ದಾಗ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಸ್ಮರಿಸಿದರು.

ಮಾಜಿ ಸಚಿವ ಎಚ್.ಏಕಾಂತಯ್ಯ ಮಾತನಾಡಿ, ಬಸವಣ್ಣರವರ ವಚನಗಳನ್ನು ಎಲ್ಲರು ಹೇಳುತ್ತಾರೆ. ಆದರೆ ಅದನ್ನು ಅಳವಡಿಸುವಲ್ಲಿ ಮಾತ್ರ ಹಿಂದೆ ಬೀಳುತ್ತಾರೆ. ನುಡಿದಂತೆ ನಡೆಯುವ ಹಾದಿ ನಮ್ಮದಾಗುರಬೇಕಿದೆ. ಆಗ ಮಾತ್ರ ಕಲ್ಯಾಣ ರಾಜ್ಯ ನಿರ್ಮಾಣವಾಗಲು ಸಾಧ್ಯವಿದೆ. ಸಮಾಜವನ್ನು ಒಂದುಗೂಡಿಸುವ ಕಾರ್ಯವಾಗಬೇಕಿದೆ. ಇಂದಿನ ದಿನದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಯಾರು ಮಾತನಾಡುವುದಿಲ್ಲ. ಎಲ್ಲರು ಉಳ್ಳವರ ಪರವಾಗಿಯೇ ಇದ್ದಾರೆ ಎಂದರು.

ಕುಂಚಿಟಿಗ ಸಂಸ್ಥಾನದ ಡಾ.ಶಾಂತವೀರ ಮಹಾ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ. ಕೇತೇಶ್ವರ ಗುರುಪೀಠದ ಶ್ರೀ ಬಸವ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಮನೋಹರ ಮಸ್ಕಿ ಇದ್ದರು. ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ನುಡಿ ನಮನ ಸಲ್ಲಿಸಿದರು. ತೋಟಂಪ್ಪ ಉತ್ತಂಗಿ ಹಾಗೂ ಕೋಕಿಲ ಪ್ರಾರ್ಥಿಸಿದರೆ, ವಿ.ಪ ಸದಸ್ಯ ಕೆ.ಎಸ್.ನವೀನ್ ಸ್ವಾಗತಿಸಿದರು. ನವೀನ್ ಮಸ್ಕಲ್ ವಂದಿಸಿದರು.