ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಹಾಶಿವರಾತ್ರಿಯನ್ನು ರಾಜ್ಯಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ರಾಜ್ಯದ ಪ್ರಮುಖ ಶೈವ ಕ್ಷೇತ್ರಗಳಿಗೆ ಶುಕ್ರವಾರ ಬೆಳಗ್ಗೆಯಿಂದಲೇ ಸರದಿ ಸಾಲಲ್ಲಿ ನಿಂತು ಇಷ್ಟದೇವರ ದರ್ಶನ ಪಡೆದ ಭಕ್ತರು ವಿಶೇಷ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಪತ್ರೆ ಅರ್ಚನೆ, ಮಂಗಳಾರತಿ, ರುದ್ರಾಭಿಷೇಕದ ಮೂಲಕ ಭಕ್ತಿ ಸಮರ್ಪಿಸಿದರು. ಧರ್ಮಸ್ಥಳ ಸೇರಿದಂತೆ ಹಲವು ದೇಗುಲಗಳ ಮುಂದೆ ರಾತ್ರಿಯಿಡೀ ಶಿವ ನಾಮಸ್ಮರಣೆ ಮಾಡಿದರು.
ಉತ್ತರ ಕನ್ನಡದ ಗೋಕರ್ಣ, ಮುರುಡೇಶ್ವರ, ಯಾಣ, ದಾಂಡೇಲಿಯ ಕವಳಾ ಗುಹೆಯ ಈಶ್ವರ, ಹುಬ್ಬಳ್ಳಿಯ ಸಿದ್ದಾರೂಢ ಮಠ, ಹಂಪಿಯ ವಿರೂಪಾಕ್ಷ ದೇಗುಲ, ಬೆಂಗಳೂರಿನ ಗವಿಸಿದ್ದೇಶ್ವರ ಮಠ, ಕಾಡುಮಲ್ಲೇಶ್ವರ ದೇಗುಲ, ಮೈಸೂರಿನ ನಂಜನಗೂಡು, ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಕದ್ರಿ ಮಂಜುನಾಥ ಸ್ವಾಮಿ, ಗೋಕರ್ಣನಾಥ ದೇಗುಲ ಸೇರಿ ರಾಜ್ಯದ ಎಲ್ಲ ಶಿವನ ದೇಗುಲಗಳಲ್ಲಿ ದಿನವಿಡೀ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
ಸಿದ್ದಾರೂಢರ ಮಠದಲ್ಲಿ ಜನಜಾತ್ರೆ: ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಂತು ಜನಸಾಗರವೇ ನೆರೆದಿತ್ತು. ಸುಮಾರು ಲಕ್ಷಾಂತರ ಹೆಚ್ಚು ಭಕ್ತರು ಆಗಮಿಸಿ ಸಿದ್ದಾರೂಢರು ಮತ್ತು ಗುರುನಾಥಾರೂಢರ ಗದ್ದುಗೆಯ ದರ್ಶನ ಪಡೆದರು.
ಶನಿವಾರ ಸಿದ್ದಾರೂಢರ ಜಾತ್ರೆ ನಡೆಯಲಿದ್ದು, ಹೀಗಾಗಿ ಮಠದ ಆವರಣವೆಲ್ಲ ಭಕ್ತರಿಂದಲೇ ತುಂಬಿತ್ತು. ಸಾವಿರಾರು ಜನ ರಾಜ್ಯದ ವಿವಿಧ ಭಾಗಗಳಿಂದ ಪಾದಯಾತ್ರೆ ಮೂಲಕ ಆಗಮಿಸಿದ್ದು, ಭಕ್ತರಿಗೆ ಪಾನಕ, ಮಜ್ಜಿಗೆ, ಹಣ್ಣು, ಲಘು ಉಪಾಹಾರ ಸೇರಿ ಪ್ರಸಾದದ ವ್ಯವಸ್ಥೆಯನ್ನು ಅಲ್ಲಲ್ಲಿ ಕಲ್ಪಿಸಲಾಗಿತ್ತು.
ಶಿವರಾತ್ರಿ ವಿಶೇಷವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ರಾತ್ರಿಯಿಂದ ಮುಂಜಾನೆಯವರೆಗೆ ಭಕ್ತರಿಂದ ಶಿವನಾಮ ಸ್ಮರಣೆ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ನಡೆಯಿತು.
ದೇವರ ದರ್ಶನಕ್ಕಾಗಿ ವಿವಿಧೆಡೆಗಳಲ್ಲಿ ಕಾಲ್ನಡಿಗೆಯಲ್ಲೇ ಭಕ್ತರು ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿದ್ದು, ಮಂಜುನಾಥನ ದರ್ಶನ ಪಡೆದು ಪುನೀತರಾದರು.
40 ಕಿ.ಮೀ. ಬರಿಗಾಲಲ್ಲಿ ನೀರು ತಂದು ಶಿವರಾತ್ರಿ ಆಚರಣೆ
ಚಾಮರಾಜನಗರ: 40 ಕಿ.ಮೀ. ದೂರದಿಂದ ಬರಿಗಾಲಲ್ಲಿ ಕಪಿಲಾ ಜಲವನ್ನು ಹೊತ್ತು ತಂದು ಶಿವಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಆಚರಿಸುವ ಪದ್ಧತಿ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ವಿಶೇಷ.
ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಸಿದ್ದರಾಮೇಶ್ವರ ದೇವಾಲಯವಿದೆ. ಸಂಪ್ರದಾಯದಂತೆ ಶಿವರಾತ್ರಿಯಂದು ಗ್ರಾಮದ ಐದು ಮನೆತನದವರು ಮನೆಗೊಬ್ಬರಂತೆ ಉಪವಾಸವಿದ್ದು ಶಿವರಾತ್ರಿ ದಿನ ಬೆಳಗ್ಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಆನಂಬಳ್ಳಿ ಬಳಿ ಕಪಿಲಾ ನದಿಯಿಂದ ತಾಮ್ರದ ಬಿಂದಿಗೆಗಳಲ್ಲಿ ಬರಿಗಾಲಲ್ಲೇ ನೀರು ಹೊತ್ತು ತಂದು ಸಿದ್ದರಾಮೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ.
ಶಿವ ದೇಗುಲಕ್ಕೆ ಕಾಪ್ಟರ್ ಮೂಲಕ ಪುಷ್ಪವೃಷ್ಟಿ
ದಾವಣಗೆರೆ: ಮಹಾ ಶಿವರಾತ್ರಿ ಅಂಗವಾಗಿ ಶುಕ್ರವಾರ ಇಲ್ಲಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯದ ಶಿವ ಮಂದಿರ ಸೇರಿದಂತೆ ಜಿಲ್ಲಾ ಕೇಂದ್ರದ ವಿವಿಧ ದೇವಸ್ಥಾನಗಳ ಮೇಲೆ ನಾಲ್ಕೈದು ಸುತ್ತು ಹೆಲಿಕಾಫ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.