ಸಾರಾಂಶ
ಹಿಂದೂ ಧರ್ಮದ ಪವಿತ್ರ ಹಬ್ಬವಾದ ಮಹಾಶಿವರಾತ್ರಿಯನ್ನು ಕಲ್ಪತರು ನಾಡು ತಿಪಟೂರು ತಾಲೂಕಿನಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ತಾಲೂಕಿನ ದೇಗುಲಗಳಲ್ಲಿ ಮೊಳಗಿದ ಓಂ ನಮ: ಶಿವಾಯ
ಕನ್ನಡಪ್ರಭ ವಾರ್ತೆ ತಿಪಟೂರುಹಿಂದೂ ಧರ್ಮದ ಪವಿತ್ರ ಹಬ್ಬವಾದ ಮಹಾಶಿವರಾತ್ರಿಯನ್ನು ಕಲ್ಪತರು ನಾಡು ತಿಪಟೂರು ತಾಲೂಕಿನಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ನಗರದ ಇತಿಹಾಸ ಪ್ರಸಿದ್ಧ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿರುವ ಶ್ರೀ ಕಲ್ಲೇಶ್ವರ ಸ್ವಾಮಿ, ಶ್ರೀ ಸೋಮೇಶ್ವರ ಸ್ವಾಮಿ, ಶ್ರೀ ಗಂಗಾಧರೇಶ್ವರ ಸ್ವಾಮಿಗೆ ಸಹಸ್ರ ಪುಷ್ಪಾರ್ಚನೆ, ಅಭಿಷೇಕ ನೆರವೇರಿಸಲಾಯಿತು. ಭಕ್ತರು ತಂದಿದ್ದ ಪುಷ್ಪ, ಬಿಲ್ವಪತ್ರೆಯನ್ನು ದೇವರಿಗೆ ಅರ್ಪಿಸುವ ಅವಕಾಶ ಕಲ್ಪಿಸಲಾಗಿತ್ತು. ತಿಪಟೂರು ಗ್ರಾಮದ ದೇವತೆ ಶ್ರೀ ಕೆಂಪಮ್ಮದೇವಿ, ಶ್ರೀ ಕಾಶಿವಿಶ್ವೇಶ್ವರ ಸ್ವಾಮಿ, ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ, ಗುರುಕುಲ ಮಠದ ಶಿವ, ಮಡಿಕೆ ಆಸರದ ರೇಣುಕ ಯಲ್ಲಮ್ಮ, ನಗರದ ಕೆಇಬಿ ರಾಮಮಂದಿರದ ಶಿವ ದೇವಾಲಯ ಸೇರಿದಂತೆ ಇತರೆ ದೇವಸ್ಥಾನಗಳಲ್ಲಿ ಬಿಲ್ವಪತ್ರೆ, ತುಳಸಿ, ಎಕ್ಕ, ಮುತ್ತುಗದ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಅಭಿಷೇಕ ಮಾಡಲಾಯಿತು. ಭಕ್ತರು ಸಾಲು ಗಟ್ಟಿ ನಿಂತು ಶಿವನಾಮ ಜಪಿಸುತ್ತಾ ಬೇಡಿಕೆಗಳನ್ನು ಈಡೇರಿಸುವಂತೆ ವಿನಮ್ರದಿಂದ ಪ್ರಾರ್ಥಿಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು. ಭಕ್ತರು ದೇವಸ್ಥಾನಗಳಲ್ಲಿ ಪಾನಕ, ಫಲಹಾರ, ಮಜ್ಜಿಗೆ ವಿತರಣೆ ಮಾಡುತ್ತಾ ತಮ್ಮ ಹರಕೆಗಳನ್ನು ಈಡೇರಿಸಿಕೊಂಡರು.ಶಿವರಾತ್ರಿಯು ನಗರದಲ್ಲಿಯಲ್ಲದೇ ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಶ್ರೀ ಶಂಕರೇಶ್ವರ ದೇವಾಲಯ, ಬಳ್ಳೆಕಟ್ಟೆ ಶೆಟ್ಟೀಹಳ್ಳಿ ಬೆಟ್ಟದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಶಿವದೇವಸ್ಥಾನಗಳಲ್ಲಿ ವಿಶೇಷ ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಹಾಶಿವರಾತ್ರಿಯನ್ನು ಜನತೆ ಸಡಗರ ಸಂಭ್ರಮದಿಂದ ಆಚರಣೆ ಮಾಡುವ ಮೂಲಕ ಶಿವನ ಭಕ್ತಿಗೆ ಭಾಜನರಾದರು.