ಸಾರಾಂಶ
ಹಿರೇಕೆರೂರು: ಶಿವಯೋಗಿ ಸಿದ್ದರಾಮೇಶ್ವರರು ಅಖಂಡ ಮನುಕುಲದ ಶ್ರೇಯೋಭಿವೃದ್ದಿಗೆ ಶ್ರಮಿಸಿದವರು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.12ನೇ ಶತಮಾನದಲ್ಲಿ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜ ಸುಧಾರಣೆ ಮಾಡಿದ್ದಾರೆ. ಆ ಕಾಲದಲ್ಲೇ ಅನೇಕ ತತ್ವಗಳಿಗೆ ಅಡಿಪಾಯ ಹಾಕಿದ್ದಾರೆ. ಪ್ರತಿಯೊಬ್ಬರು ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ಸಿದ್ದರಾಮೇಶ್ವರರು ಭಕ್ತರನ್ನು ಒಗ್ಗೂಡಿಸಿಕೊಂಡು ಕೆರೆ ನಿರ್ಮಾಣದಂತಹ ಸಮಾಜಮುಖಿ ಕಾರ್ಯ ಮಾಡಿದ್ದಾರೆ ಎಂದರು. ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ಬಿ.ಕೆ. ಬತ್ತಿಕೊಪ್ಪ, ಎಂ.ಬಿ. ಕಾಗಿನೆಲ್ಲಿ, ದುರುಗಪ್ಪ ನೀರಲಗಿ, ಶಿವಾನಂದಪ್ಪ ಬಂಡಿವಡ್ಡರ್, ಪರಮೇಶಪ್ಪ ದೊಡ್ಮನಿ, ರಮೇಶ ಬಂಡಿವಡ್ಡರ್, ಟಿಎಚ್ಒ ಡಾ. ಝಡ್.ಆರ್. ಮಕಾನ್ದಾರ್, ಶಿರಸ್ತೇದಾರ ಎಸ್.ಆರ್. ಆಪಿನಕೊಪ್ಪ, ಎನ್.ಎಸ್. ಸೋನೆ, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರಿದ್ದರು.