ಕಲಬುರಗಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಶಿವರಾಜ್‌ ಪಾಟೀಲ್‌ ಮರು ನೇಮಕ

| Published : Jan 17 2024, 01:48 AM IST

ಕಲಬುರಗಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಶಿವರಾಜ್‌ ಪಾಟೀಲ್‌ ಮರು ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸ್ಥಾನದ ಪಟ್ಟ ಶಿವರಾಜ್ ಪಾಟೀಲ್ ರದ್ದೆವಾಡಗಿ ಅವರಿಗೆ 2ನೇ ಬಾರಿಗೆ ಒಲಿದಿದ್ದರೆ, ಬಿಜೆಪಿ ನಗರ ಅಧ್ಯಕ್ಷರಾಗಿ ಎಂಎಲ್‌ಸಿ ಬಿಜಿ ಪಾಟೀಲರ ಪುತ್ರ ಚಂದ್ರಶೇಖರ್ ಪಾಟೀಲ್ ಅವರನ್ನು ನೇಮಕ ಮಾಡಿ ಆದೇಶ.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಘೋಷಣೆಯಾಗಿರುವ ಜಿಲ್ಲಾ ಹಾಗೂ ನಗರ ಘಟಕಗಳ ಅಧ್ಯಕ್ಷರ ಆಯ್ಕೆಯಲ್ಲಿ ಇಲ್ಲಿನ ಹಾಲಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್‌ ರದ್ದೇವಾಡಗಿಯವರನ್ನೇ ಪುನಃ ಪಕ್ಷ ಜಿಲ್ಲಾಧ್ಯಕ್ಷರೆಂದು ಘೋಷಿಸಿದೆ.

ಇದರೊಂದಿಗೆ ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸ್ಥಾನದ ಪಟ್ಟ ಶಿವರಾಜ್ ಪಾಟೀಲ್ ರದ್ದೆವಾಡಗಿ ಅವರಿಗೆ ಜಾಕ್‌ಪಾಟ್‌ ರೂಪದಲ್ಲಿ ಒಲಿದು ಬಂದಂತಾಗಿದೆ. ಬಿಜೆಪಿ ನಗರ ಅಧ್ಯಕ್ಷರಾಗಿದ್ದ ಸಿದ್ದು ಪಾಟೀಲ್ ಅವರನ್ನು ಕೈಬಿಟ್ಟು, ಆ ಸ್ಥಾನದಲ್ಲಿ ಎಂಎಲ್‌ಸಿ ಬಿಜಿ ಪಾಟೀಲರ ಪುತ್ರ ಚಂದ್ರಶೇಖರ್ ಪಾಟೀಲ್ ಅವರನ್ನು ನೇಮಕ ಮಾಡಿ ಆದೇಶ ಹೊರಬಿದ್ದಿದೆ.

ಇಲ್ಲಿನ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ನಿರೀಕ್ಷೆಯಂತೆ ನಡೆಯದೆ ಅಚ್ಚರಿ ಎಂಬಂತೆ ಘೋಷಣೆಯಾಗಿದೆ ಎಂಬ ಮಾತುಗಳಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಬಿಜೆಪಿ ಪಡೆಯಲಿಲ್ಲ. ಸ್ವತಃ ರದ್ದೇವಾಡಗಿ ಕೂಡಾ ಜೇವರ್ಗಿ ಅಸೆಂಬ್ಲಿ ಕಣಕ್ಕಿಳಿದಿದು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಹೀಗಾಗಿ ರದ್ದೆವಾಡಗಿ ಬದಲಾವಣೆ ಮಾಡುತ್ತಾರೆಂಬ ಮಾತುಗಳು ಕೇಳಿಬರುತ್ತಿದ್ದವು.

ಆದಾಗ್ಯೂ, ಪಕ್ಷದ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡಿದ್ದು ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವುದಕ್ಕಾಗಿ ರದ್ದೆವಾಡಗಿ ಅವರೇ ಮರು ಆಯ್ಕೆಯಾಗಬೇಕೆಂಬ ನಿರ್ಧಾರದ ಹಿನ್ನೆಲೆ ವರಿಷ್ಠರು ಅವರನ್ನೇ ಪಕ್ಷದ ಹುದ್ದೆಯಲ್ಲಿ ಮುಂದುವರೆಸಿದ್ದಾರೆಂದು ಹೇಳಲಾಗುತ್ತಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ್ ಗುತ್ತೇದಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ್, ಬಿಜೆಪಿ ಮುಖಂಡ ಅಶೋಕ್ ಬಗಲಿ, ಶಶಿಧರ ಸುಗೂರ್‌ ಸೇರಿ ಹಲವರ ಹೆಸರುಗಳು ಕೇಳಿ ಬಂದಿದ್ದವು.

ಒಂದು ಹಂತದಲ್ಲಿ ಹರ್ಷಾನಂದ್ ಗುತ್ತೇದಾರ್ ಹೆಸರನ್ನು ಬಹುತೇಕ ಮುಖಂಡರು ಶಿಫಾರಸ್ಸು ಮಾಡಿದ್ದರು. ಸ್ವತಃ: ಶಿವರಾಜ್ ಪಾಟೀಲ್ ರದ್ದೇವಾಡಗಿ ಅವರೇ ಹರ್ಷಾನಂದ್ ಗುತ್ತೇದಾರ್ ತಮ್ಮ ಉತ್ತರಾಧಿಕಾರಿಯಾಗಬೇಕು ಎಂದು ಬಯಸಿದ್ದರು. ಆದಾಗ್ಯೂ, ಹರ್ಷಾನಂದ್ ಗುತ್ತೇದಾರ್ ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳುವ ಮೂಲಕ ತಮ್ಮ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಡಿ ಎಂದು ಬಹಿರಂಗವಾಗಿಯೇ ಕೋರಿದ್ದರು.

ಈ ವೇಳೆ ಬಿಜೆಪಿಯಲ್ಲಿ ಮೊದಲಿನಿಂದಲೂ ಜಿಲ್ಲಾ ಘಟಕದಲ್ಲಿ ಅತ್ಯಂತ ಶಿಸ್ತಿನಿಂದ ಸಂಘಟನೆಗಾಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ್ ಬಗಲಿರನ್ನು ಆಯ್ಕೆ ಮಾಡುವ ಇರಾದೆಯನ್ನು ಕೆಲ ವರಿಷ್ಠರು ಹೊಂದಿದ್ದರು. ಹೀಗಾಗಿ ಅಶೋಕ್ ಬಗಲಿ ಆಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚಿದ್ದವು. ಈ ಮಧ್ಯೆ, ರಾಜ್ಯ ಕಾಂಗ್ರೆಸ್ ಪಕ್ಷದ ದುರಾಡಳಿತ, ದೌರ್ಜನ್ಯದ ವಿರುದ್ಧ ಪ್ರಬಲ ಹೋರಾಟ ಕಟ್ಟುತ್ತಿರುವ ಎಪಿಎಂಸಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿಗೆ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವನ್ನು ಅವರ ಬೆಂಬಲಿಗರು ಹೊಂದಿದ್ದರು. ಅದೇ ರೀತಿ ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ್ ಸಹ ಅಧ್ಯಕ್ಷ ಸ್ಥಾನ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದರು.

ಹಾಗೂ ಹೀಗೂ ಕೊನೆಗೆ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಬಗಲಿ ಇಲ್ಲವೇ ಅವ್ವಣ್ಣ ಮ್ಯಾಕೇರಿ ಅವರಿಬ್ಬರಲ್ಲಿ ಒಬ್ಬರಾಗುವುದು ಖಚಿತ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದವು. ಕೊನೆಗೂ ರದ್ದೆವಾಡಗಿ ಅವರನ್ನೇ ಮುಂದುವರೆಸುವ ಮೂಲಕ ಎಲ್ಲ ವದಂತಿಗಳಿಗೆ ವರಿಷ್ಠರು ತೆರೆ ಎಳೆದಿದ್ದಾರೆ.

ಇನ್ನು ನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ್ ಪಾಟೀಲ್‌ರನ್ನು ಆಯ್ಕೆ ಮಾಡಲಾಗಿದೆ. ಕಳೆದ ಎರಡು ಬಾರಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆದು ಪರಾಭವಗೊಂಡಿದ್ದು, ಅವರನ್ನು ನಗರ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದರೆ ಪಕ್ಷವು ಉತ್ತಮ ಸಂಘಟನೆಯಾಗುತ್ತದೆ ಎಂಬ ನಿರೀಕ್ಷೆ ವರಿಷ್ಠರು ಹೊಂದಿದ್ದಾರೆ.

ನಗರ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಕ್ಷೇತ್ರ ಕಳೆದುಕೊಂಡಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಬಲಪಡಿಸಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತ ಪಡೆಯುವ ದಿಸೆಯಲ್ಲಿ ನೂತನ ಅಧ್ಯಕ್ಷರಿಗೆ ಒಂದು ರೀತಿಯ ಸವಾಲಾಗಿದೆ.