ಸಾರಾಂಶ
ಶಿರಹಟ್ಟಿ: ಈ ಬಾರಿ ಹಿಂಗಾರು ಮಳೆ ತಕ್ಕ ಮಟ್ಟಿಗೆ ಕೈ ಹಿಡಿದಿದ್ದರಿಂದ ಬೆಳಕಿನ ಹಬ್ಬ ದೀಪಾವಳಿಗೆ ಕಳೆ ಬಂದಿದೆ. ಮಾರುಕಟ್ಟೆಯಲ್ಲಿ ಭಾನುವಾರ ಜನರು ಹಬ್ಬಕ್ಕೆ ಬೇಕಾಗುವ ವಸ್ತುಗಳನ್ನು ಸಂಭ್ರಮದಿಂದ ಖರೀದಿಸುತ್ತಿರುವುದು ಕಂಡುಬಂದಿತು.
ಬಟ್ಟೆ, ಬಂಗಾರದ ಆಭರಣ, ಗೃಹೋಪಯೋಗಿ ವಸ್ತುಗಳು ಹೀಗೆ ಹಬ್ಬದ ರಂಗು ಹೆಚ್ಚಿಸುವ ವಸ್ತುಗಳ ಖರೀದಿಗಾಗಿ ಜನ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿರುವುದು ಕಂಡುಬಂದಿತು. ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತಾಪಿ ವರ್ಗ ಕೂಡ ಹಬ್ಬದ ಸಡಗರಕ್ಕೆ ಖರೀದಿಸುತ್ತಿರುವುದು ವಿಶೇಷವಾಗಿತ್ತು.ದೀಪಾವಳಿ ವೇಳೆ ಮಹಾಲಕ್ಷ್ಮಿ ದೇವಿಗೆ ಅಗ್ರಪೂಜೆ ಸಲ್ಲಿಸಲಾಗುತ್ತದೆ. ಮನೆ, ಅಂಗಡಿ, ವ್ಯಾಪಾರದ ಸ್ಥಳ ಹಾಗೂ ಹಣದ ವಹಿವಾಟು ನಡೆಯುವ ಎಲ್ಲೆಡೆ ಪೂಜಾ ಸಮಾರಂಭಗಳು ಅದ್ಧೂರಿಯಿಂದ ನಡೆಯುತ್ತವೆ. ಅದಕ್ಕಾಗಿ ತಳಿರು ತೋರಣಗಳ ಅಲಂಕಾರ ಸಾಮಗ್ರಿ, ಹೂವು- ಹಣ್ಣು, ತಿನಿಸುಗಳ ಖರೀದಿಯು ಚುರುಕಾಗಿದೆ. ಸಾಂಪ್ರದಾಯಿಕ ಹಣತೆಗಳ ಜತೆಗೆ ಬಗೆಬಗೆಯ ಚಿತ್ತಾರದ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.ಡಜನ್ ಹಣತೆಗೆ ₹೪೦ರಿಂದ ₹೬೦ ದರ ನಿಗದಿಪಡಿಸಲಾಗಿದೆ. ವಿವಿಧ ಬಗೆಯ ಆಕಾಶ ಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ರಂಗು ರಂಗಿನ ಆಕಾಶಬುಟ್ಟಿಗಳ ಬೆಲೆ ಕೂಡ ಕೈಸುಡುವಂತಿದೆ. ಗಾತ್ರಕ್ಕೆ ಅನುಗುಣವಾಗಿ ₹೨೫೦ರಿಂದ ₹೫೦೦ರ ವರೆಗೂ ಬೆಲೆ ಇದೆ. ವಿದ್ಯುತ್ ಅಲಂಕಾರಿಕ ದೀಪ, ಪಟಾಕಿ, ಹೂವು ಹಾಗೂ ತರಕಾರಿ ವ್ಯಾಪಾರದ ಭರಾಟೆಯೂ ಜೋರಾಗಿದೆ.ಮನ- ಮನೆಯ ಅಂಧಕಾರ ಅಳಿಸಲು ದೀಪಗಳನ್ನು ಬೆಳಗಲು ಹೊಸ ಹಣತೆ ಬೇಕೆ ಬೇಕು. ಕುಂಬಾರರು ಸಿದ್ಧಪಡಿಸಿದ ಮಣ್ಣಿನ ಹಣತೆಗಳು ಈಗಲೂ ಆಕರ್ಷಕ, ಅವಶ್ಯಕ. ಜನ ತಮ್ಮ ತಮ್ಮ ಆಸಕ್ತಿ- ಅಂತಸ್ತಿಗೆ ತಕ್ಕಂತೆ ಕೊಳ್ಳುತ್ತಿದ್ದಾರೆ.ಹಸಿರು ಪಟಾಕಿ ಬಳಕೆಗೆ ಮನವಿಡಂಬಳ: ಹಸಿರು ಪಟಾಕಿಗಳನ್ನು ಬಿಟ್ಟು ಇತರ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್. ತಿಳಿಸಿದ್ದಾರೆ.125 ಡೆಸಿಬಲ್ಗಳಿಗಿಂತ ಹೆಚ್ಚು ಶಬ್ದ ಉಂಟುಮಾಡುವ ಪಟಾಕಿಗಳ ದಾಸ್ತಾನು, ಮಾರಾಟ ಹಾಗೂ ಉಪಯೋಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯವು ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ.ಸರ್ವೋಚ್ಚ ನ್ಯಾಯಾಲಯ ಹಾಗೂ ಹಸಿರು ನ್ಯಾಯಪೀಠದ ಆದೇಶದಂತೆ ಎಲ್ಲ ಹಸಿರು ಪಟಾಕಿಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂ ಆರ್ ಕೋಡ್ ಇರುವ ಹಸಿರು ಪಟಾಕಿ ಕಡಿಮೆ ಮಾಲಿನ್ಯ ಉಂಟು ಮಾಡುವ ಪಟಾಕಿ ಮಾತ್ರ ಮಾರಾಟ ಮಾಡಬೇಕು.
ನಿಯಮ ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಅದಕ್ಕೆ ಕಾರಣರಾದವರ ಮೇಲೆ ಕಾಯ್ದೆಯನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.