ಮಂಗಳೂರು: ಶ್ರೀಶಾ ಸೌಹಾರ್ದ ಸೊಸೈಟಿ ಪ್ರಾಯೋಜಕತ್ವದಲ್ಲಿ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಅಧಿಕ ಮಾಸದ ಪರ್ವಕಾಲದಲ್ಲಿ ಭಾನುವಾರ ನಗರದ ವಿ.ಟಿ.ರಸ್ತೆಯಲ್ಲಿನ ಕೃಷ್ಣ ಮಂದಿರದಲ್ಲಿ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು.

ಮುಂಬೈ ಮೂಲದ ವಿದುಷಿ ಭಾಗ್ಯಶ್ರೀ ದೇಶಪಾಂಡೆ ಅವರ ಗಾಯನ ಕಿಕ್ಕಿರಿದು ನೆರೆದಿದ್ದ ಶ್ರೋತೃಗಳನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ದಿತು. ಸಂತ ತುಕಾರಾಂ ಕೃತಿಗಳೂ ಸೇರಿದಂತೆ ಅನೇಕ ಸಂತರ ಮರಾಠಿ ಹಾಡುಗಳನ್ನು ಹಾಡಿದರು. ಸಹಕಲಾವಿದರಾಗಿ ತಬ್ಲಾದಲ್ಲಿ ರಾಜೇಶ್ ಭಾಗವತ್, ಹಾರ್ಮೋನಿಯನಲ್ಲಿ ಹೇಮಂತ್ ಭಾಗವತ್, ತಾಳದಲ್ಲಿ ಪಾಂಡುರಂಗ ಭಾಗವತ್ ಸಾತ್ ನೀಡಿದರು.

ಶ್ರೀಶಾ ಸೌಹಾರ್ದ ಸೊಸೈಟಿ ಹಾಗೂ ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಗುರುರಾಜ್ ಮಾತನಾಡಿ, ಹರಿದಾಸರ, ಸಂತರ ಕೃತಿಗಳು ಜೀವನ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಜೀವನ ಮಟ್ಟವನ್ನು ಮೇಲೇರಿಸುತ್ತವೆ. ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಹರಿದಾಸರ ಸಂತರ ಸಂಗೀತದ ಜೊತೆಗೆ ಸಾಹಿತ್ಯವನ್ನೂ ಜನರ ಮನೆ ಮನಗಳಿಗೆ ತಲುಪಿಸುವ ಸದುದ್ದೇಶದಿಂದ ನಿರಂತರವಾಗಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಕಾರ್ಯಗಳಿಗೆ ಬೆನ್ನೆಲುಬಾಗಿ ಆರ್ಥಿಕ ನೆರವನ್ನು ಶ್ರೀಶಾ ಸೌಹಾರ್ದ ಸೊಸೈಟಿ ನೀಡುತ್ತಿದೆ ಎಂದರು.