ಸಾರಾಂಶ
ತಾಲೂಕಿನ ಬೇಲೂರ-ಜಾಲಿಹಾಳ ಗ್ರಾಮದಲ್ಲಿ ಶ್ರೀಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ಸಂಭ್ರಮದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಬಾದಾಮಿ
ತಾಲೂಕಿನ ಬೇಲೂರ-ಜಾಲಿಹಾಳ ಗ್ರಾಮದಲ್ಲಿ ಶ್ರೀಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ಸಂಭ್ರಮದಿಂದ ಜರುಗಿತು.ರಥೋತ್ಸವ ಸಂದರ್ಭದಲ್ಲಿ ಸೇರಿದ್ದ ಭಕ್ತರು ಅನ್ನದಾನೇಶ್ವರ ಮಹಾರಾಜ ಕೀ ಜೈ ಎಂದು ಘೋಷಣೆ ಕೂಗುವ ಮೂಲಕ ರಥ ಎಳೆದು ಭಕ್ತಿ ಭಾವ ಮೆರೆದರು.
ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಜರುಗಿತು. ರಥೋತ್ಸವದಲ್ಲಿ ಜಾಲಿಹಾಳ ಗ್ರಾಮದ ಭಕ್ತರಿಂದ ತೇರಿನ ಹಗ್ಗದ ಸೇವೆ, ಹೊಳೆಹಡಗಲಿ ಗ್ರಾಮದಿಂದ ಕಳಸ ಸೇವೆಯ ಜೊತೆಗೆ ಭಕ್ತರು ಹೂವು ಹಣ್ಣು ಅರ್ಪಿಸಿ ಭಕ್ತ ಭಾವ ಮೆರೆದರು. ಡಾಣಕಶಿರೂರ ಭಕ್ತರಿಂದ ಪಲ್ಲಕ್ಕಿ ಸೇವೆ(ಅಂದೋಲಿಕ ಮಹೋತ್ಸವ) ಅಡ್ಡ ಪಲ್ಲಕ್ಕಿ ಉತ್ಸವ ಜರುಗಿತು.ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಗ್ರಾಮಗಳಿಂದ ವಿವಿಧ ಮಂಗಳ ವಾದ್ಯಗಳನ್ನು ನುಡಿಸುತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಸಿ ಭಕ್ತರಿಂದ ಪೂಜೆಗೊಂಡು ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಬೇಲೂರ ಶ್ರೀಅನ್ನದಾನೇಶ್ವರ ಶಾಖಾ ಮಠದ ಶ್ರೀ ಮ.ನಿ.ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಶ್ರೀ ಮದ್ವೀರಶೈವ ಶಿವಯೋಗಮಂದಿರ ಸಂಸ್ಥೆ ಉಪಾಧ್ಯಕ್ಷ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು, ನೇರಡಗುಂಬ ಪಶ್ವಿಮಾದ್ರಿ ಸಂಸ್ಥಾಮಠ ಮ.ನಿ.ಪ್ರ ಪಂಚಮಸಿದ್ದಲಿಂಗೇಶ ಮಹಾಸ್ವಾಮಿಗಳು, ಒಳ ಬಳ್ಳಾರಿ ಬಸವಲಿಂಗ ಮಹಾಸ್ವಾಮಿಗಳು, ನಿಡಗುಂದಿಕೊಪ್ಪ ಚನ್ನಬಸವ ಸ್ವಾಮಿಗಳು, ಖೇಳಗಿ ಸಂಸ್ಥಾನಮಠ ಶಿವಲಿಂಗ ಸ್ವಾಮಿಗಳು, ನಾಗಲಾಪುರ ನಿರಂಜನ ಪ್ರಭು ಸ್ವಾಮಿಗಳು, ಗುಳೇದಗುಡ್ಡ ಕಾಡಸಿದ್ದೇಶ್ವರ ಸ್ವಾಮಿಗಳು, ಕೊಟ್ಟೂರು ದೇಶಿಕರು, ಬನವಾಶಿ ಶಿವಲಿಂಗ ಸೇಶಿಕರು, ಸಂಗನಾಳ ವಿಶ್ವೇಶ್ವರ ದೇಶಿಕರು, ಬೂದಗುಂಪಾ ವಿಜಯಪ್ರಭು ದೇಶಿಕರು ಸೇರಿದಂತೆ ವಿವಿಧ ಮಠಗಳ ಹರಗುರು ಚರ ಮೂರ್ತಿಗಳು ಭಾಗವಹಿಸಿದ್ದರು.ಶಾಸಕ ಭೀಮಸೇನ ಚಿಮ್ಮನಕಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಸಿದ್ದಲಿಂಗೇಶ ಟೆಂಗಿನಕಾಯಿ, ಮಲ್ಲಣ್ಣ ಯಲಿಗಾರ, ಸಿದ್ದನಗೌಡ ಪಾಟೀಲ, ಬಸವರಾಜ ಗೊನ್ನಾಗರ, ಶಿವಪ್ಪ ಹೊರಕೇರಿ, ಶರಣಗೌಡ ಪಾಟೀಲ ಸೇರಿದಂತೆ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದರು. ಸೆ.21 ರಂದು ಶನಿವಾರ ಕಳಸಾರೋಹಣ ನಡೆಯುವುದು.