ಹೊಳೆನರಸೀಪುರ ಪುರಸಭೆ ಅಧ್ಯಕ್ಷರಾಗಿ ಶ್ರೀಧರ್‌ ಆಯ್ಕೆ

| Published : Aug 21 2024, 12:32 AM IST

ಹೊಳೆನರಸೀಪುರ ಪುರಸಭೆ ಅಧ್ಯಕ್ಷರಾಗಿ ಶ್ರೀಧರ್‌ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಕೆ. ಶ್ರೀಧರ್, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಪುರಸಭೆಯಲ್ಲಿ ೨೨ ಜೆಡಿಎಸ್ ಸದಸ್ಯರಿದ್ದು, ಅದರಲ್ಲಿ ತ್ರಿಲೋಚನಾ ಗೈರು ಹಾಜರಾಗಿದ್ದರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದ ಎಚ್.ಕೆ. ಪ್ರಸನ್ನ ತಡವಾಗಿ ಆಗಮಿಸಿ ಅಧ್ಯಕ್ಷರ ಆಯ್ಕೆ ಘೋಷಣೆ ಆಗುತ್ತಿದ್ದಂತೆ ನೂತನ ಅಧ್ಯಕ್ಷರಿಗೆ ಶುಭವನ್ನೂ ಕೋರದೆ ಹೊರನಡೆದರು. ಮತ್ತೊಬ್ಬ ಆಕಾಂಕ್ಷಿ ಆಗಿದ್ದ ಎ. ಜಗನ್ನಾಥ್ ಉಪಸ್ಥಿತರಿದ್ದು, ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಕೆ. ಶ್ರೀಧರ್, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

೨೦೧೮ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಪುರಸಭೆಯ ೨೩ ಸದಸ್ಯರಲ್ಲಿ ೨೩ ಜೆಡಿಎಸ್ ಸದಸ್ಯರಿದ್ದರು, ನಂತರದಲ್ಲಿ ಒಬ್ಬ ಸದಸ್ಯರು ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸದಸ್ಯರೊಬ್ಬರು ಚುನಾಯಿತರಾದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೀಸಲಾತಿ ಪಟ್ಟಿ ಪ್ರಕಟಗೊಂಡ ನಂತರ ಅತೃಪ್ತ ಸದಸ್ಯರು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ೨೦೨೦ರ ನವೆಂಬರ್‌ನಲ್ಲಿ ೨.೫ ವರ್ಷದ ಮೊದಲ ಅವಧಿಯ ಹೊಸ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿತು. ನವೆಂಬರ್ ೧೮ರಂದು ಪುರಸಭೆ ನೂತನ ಅಧ್ಯಕ್ಷೆಯಾಗಿ ಸಿ.ಜೆ.ವೀಣಾ ಅಧಿಕಾರ ಸ್ವೀಕರಿಸಿದರು ನಂತರದಲ್ಲಿ ಜಿ.ಕೆ.ಸುಧಾನಳಿನಿ ಹಾಗೂ ಎನ್.ಜ್ಯೋತಿ ಅಧ್ಯಕ್ಷೆಯಾಗಿ ಆಡಳಿತ ನಡೆಸಿದರು. ೨೦೨೩ರ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಪುರಸಭಾಧ್ಯಕ್ಷರಾಗಿದ್ದ ಎನ್.ಜ್ಯೋತಿ ಅಧ್ಯಕ್ಷರ ಕೊಠಡಿ ತೆರವುಗೊಳಿಸಿದರು ಮತ್ತು ನಂತರದಲ್ಲಿ ೨.೫ ವರ್ಷದ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಮುಖ್ಯಾಧಿಕಾರಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಆಗಸ್ಟ್ ೨೦೨೪ರಲ್ಲಿ ಸರ್ಕಾರ ಪ್ರಕಟಿಸಿದ ಎರಡನೇ ಅವಧಿಯ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮೀಸಲಾಗಿತ್ತು. ಮೂರನೇ ಬಾರಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಆರ್ಯವ್ಯಶ್ಯ ಜನಾಂಗದ ೧೦ನೇ ವಾರ್ಡಿನ ಸದಸ್ಯ ಕೆ. ಶ್ರೀಧರ್, ಉಪಾಧ್ಯಕ್ಷ ಸ್ಥಾನಕ್ಕೆ ೨೩ನೇ ವಾರ್ಡಿನ ತೆಲುಗು ಬಣಜಿಗರ ಜನಾಂಗದ ಪೂಜೆಕೊಪ್ಪಲಿನ ಸಾವಿತ್ರಮ್ಮ ಮಾತ್ರ ನಾಮಪತ್ರ ಸಿಲ್ಲಿಸಿದ್ದರು. ನಾಮಪತ್ರ ಸಲ್ಲಿಸುವ ಅವಧಿ ಮುಗಿಯುತ್ತಿದ್ದಂತೆ ಚುನಾವಣಾಧಿಕಾರಿ ಯಾಗಿದ್ದ ಕೆ.ಕೆ. ಕೃಷ್ಣಮೂರ್ತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.

ಪುರಸಭೆಯಲ್ಲಿ ೨೨ ಜೆಡಿಎಸ್ ಸದಸ್ಯರಿದ್ದು, ಅದರಲ್ಲಿ ತ್ರಿಲೋಚನಾ ಗೈರು ಹಾಜರಾಗಿದ್ದರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದ ಎಚ್.ಕೆ. ಪ್ರಸನ್ನ ತಡವಾಗಿ ಆಗಮಿಸಿ ಅಧ್ಯಕ್ಷರ ಆಯ್ಕೆ ಘೋಷಣೆ ಆಗುತ್ತಿದ್ದಂತೆ ನೂತನ ಅಧ್ಯಕ್ಷರಿಗೆ ಶುಭವನ್ನೂ ಕೋರದೆ ಹೊರನಡೆದರು. ಮತ್ತೊಬ್ಬ ಆಕಾಂಕ್ಷಿ ಆಗಿದ್ದ ಎ. ಜಗನ್ನಾಥ್ ಉಪಸ್ಥಿತರಿದ್ದು, ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.

ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಶಾಸಕ ಎಚ್.ಡಿ. ರೇವಣ್ಣ, ಆರ್ಯವೈಶ್ಯ ಜನಾಂಗದವರು, ಸ್ನೇಹಿತರು, ಹಿತೈಷಿಗಳು ಕುಟುಂಬ ಸದಸ್ಯರು ಪುರಸಭೆಗೆ ಆಗಮಿಸಿ ಶುಭಕೋರಿದರು.

*ಹೇಳಿಕೆ1

ಶಾಸಕ ರೇವಣ್ಣ ಅವರ ಕೃಪೆಯಿಂದ ಅಧ್ಯಕ್ಷನಾಗಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಪಟ್ಟಣದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪದ ವ್ಯವಸ್ಥೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸಮಸ್ಯೆಗಳಿದ್ದರೆ ಪರಿಹರಿಸುತ್ತೇನೆ. ಶಾಸಕ ಎಚ್.ಡಿ. ರೇವಣ್ಣ ಹಾಗೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಸಹಕರಿಸಿದ ಸದಸ್ಯರಿಗೆ ಧನ್ಯವಾದ ತಿಳಿಸಿದರು.

-ಶ್ರೀಧರ್, ನೂತನ ಅಧ್ಯಕ್ಷ