ಸಾರಾಂಶ
ಅರಣ್ಯ ಇಲಾಖೆಯಿಂದ ಆರು ಪಳಗಿದ ಆನೆಗಳ ಸಹಾಯದಿಂದ ಕಾರ್ಯಾಚರಣೆಕನ್ನಡಪ್ರಭ ವಾರ್ತೆ ಕುಂದಾಪುರಕಳೆದ ಎರಡು ದಿನಗಳಿಂದ ಸಿದ್ದಾಪುರ ಆಸುಪಾಸಿನಲ್ಲಿ ಬೀಡು ಬಿಟ್ಟು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಕಾಡಾನೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಗುರುವಾರ ಸಂಜೆ ವೇಳೆಗೆ ಸಿದ್ಧಾಪುರ ಸಮೀಪದ ಹೆನ್ನಾಬೈಲಿನ ಉರಪಾಲ್ ಎಂಬಲ್ಲಿ ಅರವಳಿಕೆ ತಜ್ಞರು ನೀಡಿದ್ದ ಮದ್ದಿಗೆ ಸ್ಪಂದಿಸಿರುವ ಒಂಟಿ ಕಾಡಾನೆ ವಿಶ್ರಾಂತಿಗೆ ಜಾರಿದೆ.ಕಳೆದೆರಡು ದಿನಗಳ ಹಿಂದೆ ಸಂಜೆ ಸುಮಾರಿಗೆ ಶಿವಮೊಗ್ಗ ಜಿಲ್ಲೆಯಿಂದ ಬಾಳೆಬರೆ ಘಾಟಿ ಮಾರ್ಗವಾಗಿ ಸಿದ್ದಾಪುರಕ್ಕೆ ಬಂದಿದ್ದ ಕಾಡಾನೆಯ ಚಲನವಲನಗಳನ್ನು ರೆಡಿಯೋ ಕಾಲರ್ ಹಾಗೂ ಜಿಪಿಎಸ್ ತಂತ್ರಜ್ಞಾನದ ಮೂಲಕ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಯನ್ನು ಸೆರೆ ಹಿಡಿಯಲು ಕಾರ್ಯತಂತ್ರವನ್ನು ರೂಪಿಸಿದ್ದರು. ಕಾರ್ಯಾಚರಣೆಗಾಗಿಯೇ ಶಿವಮೊಗ್ಗದ ಸಕ್ರೆಬೈಲಿನಿಂದ ಆಗಮಿಸಿದ್ದ ಕಾರ್ಯಪಡೆಯ ಮಾರ್ಗದರ್ಶನದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆನೆಯನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆಸಿತು.
ಕಾರ್ಯಾಚರಣೆಯಲ್ಲಿ ಸಕ್ರೆಬೈಲು ಶಿಬಿರದ ಮುರು ಹಾಗೂ ನಾಗರಹೊಳೆ ಮತ್ತಿಗೋಡು ಶಿಬಿರದ ಮೂರು ಆನೆಗಳು ಭಾಗವಹಿಸಿತ್ತು. ಶಿವಮೊಗ್ಗದ ಡಾ.ಎಸ್.ಕಲ್ಲಪ್ಪ, ನಾಗರಹೊಳೆಯ ಡಾ.ರಮೇಶ್ ಹಾಗೂ ಮಂಗಳೂರಿನ ಡಾ.ಯಶಸ್ವಿ ನೇತೃತ್ವದ ಕಾರ್ಯಾಚರಣೆಯ ವೈದ್ಯರ ತಂಡ ಅರವಳಿಕೆ ನೀಡಿತ್ತು.ಸೆರೆ ಹಿಡಿದ ಆನೆಯನ್ನು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗುವುದು.
ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಲನ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಕುದುರೆಮುಖ ಅರಣ್ಯ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು, ಕುಂದಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಕಾಶ್ ಪೂಜಾರಿ, ದಿನೇಶ್, ಸಕ್ರೆಬೈಲು ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ವಿನಯ್ ಜಿ.ಆರ್., ಶಂಕರನಾರಾಯಣ ವಲಯಾರಣ್ಯಾಧಿಕಾರಿ ಜಿ.ವಿ.ನಾಯಕ್, ಜ್ಯೋತಿ, ಶಂಕರನಾರಾಯಣ ಪೊಲೀಸ್ ಠಾಣೆಯ ಎಸ್ಐ ನಾಸೀರ್ ಹುಸೇನ್ ಇದ್ದರು. ಚಿಕ್ಕಮಗಳೂರಿನಿಂದ ಬಂದಿದ್ದ ಎಟಿಎಫ್ ತಂಡದ ಸೇವೆಯನ್ನು ಕೂಡ ಬಳಸಿಕೊಳ್ಳಲಾಗಿತ್ತು. ಹಾಸನದಿಂದ ಅರಣ್ಯ ವಿಭಾಗದಿಂದ ಔಷಧಿಗಳನ್ನು ತರಿಸಿಕೊಳ್ಳಲಾಗಿತ್ತು. ಕಾರ್ಯಾಚರಣೆಯಲ್ಲಿ ಸುಮಾರು ೧೫೦ ಸಿಬ್ಬಂದಿ ಭಾಗಿಯಾಗಿದ್ದರು.ಗುರುವಾರವೂ ಶಾಲೆಗಳಿಗೆ ರಜೆ:ಕಾಡಾನೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಹೊಸಂಗಡಿ, ಸಿದ್ದಾಪುರ ಹಾಗೂ ಕಮಲಶಿಲೆ ಭಾಗದ ಅಂಗನವಾಡಿ ಕೇಂದ್ರ ಹಾಗೂ ಎಸ್ಎಸ್ಎಲ್ಸಿ ವರೆಗಿನ ಶಾಲೆಗಳಿಗೆ ಬುಧವಾರ ಹಾಗೂ ಗುರುವಾರ ರಜೆ ಸಾರಲಾಗಿತ್ತು. ಸಿದ್ದಾಪುರದಲ್ಲಿ ಬುಧವಾರ ನಡೆಯಬೇಕಾಗಿದ್ದ ವಾರದ ಸಂತೆಯನ್ನು ರದ್ದು ಮಾಡಲಾಗಿತ್ತು. ಆನೆ ಇರುವಿಕೆ ಪತ್ತೆಯಾದ ಹೆನ್ನಾಬೈಲು ಹಾಗೂ ಆಸುಪಾಸಿನ ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಆಟೋರಿಕ್ಷಾಗೆ ಧ್ವನಿವರ್ದಕ ಕಟ್ಟಿ ಪ್ರಚಾರಪಡಿಸಲಾಗಿತ್ತು.ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ವೈರಲ್:
ಮಂಗಳವಾರ ಹೆನ್ನಾಬೈಲಿಗೆ ಬಂದ ಬಳಿಕ ದೂರ ಪ್ರಯಾಣ ಮಾಡದ ಕಾಡಾನೆ, ಬುಧವಾರ ರಾತ್ರಿಯೂ ಸ್ಥಳೀಯರಾದ ಜಯ ಶೆಟ್ಟಿ ಎನ್ನುವವರ ತೋಟದ ಸಮೀಪದಲ್ಲಿ ಪತ್ತೆಯಾಗಿತ್ತು. ರಾತ್ರಿಯ ವೇಳೆ ಪರಿಸರದಲ್ಲಿ ಸಂಚಾರ ನಡೆಸಿದ್ದ ಆನೆಯ ನಡಿಗೆ ಮೊಬೈಲ್ ಹಾಗೂ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಕೂಡ ಆಗಿತ್ತು.