ಸಾರಾಂಶ
ಸಿದ್ದಾಪುರ: ಆರೋಗ್ಯ ತಪಾಸಣೆ ಎಲ್ಲರಿಗೂ ಅತ್ಯಗತ್ಯವಾದದ್ದು. ನಿವೃತ್ತ ನೌಕರರಿಗಾಗಿ ನಿವೃತ್ತ ನೌಕರರ ಸಂಘ ಆಯೋಜಿಸಿದ ಆರೋಗ್ಯ ತಪಾಸಣಾ ಕಾರ್ಯ ಅತ್ಯುತ್ತಮ ಕಾರ್ಯಕ್ರಮ. ಹಗಲು, ರಾತ್ರಿ ಶ್ರಮಿಸುವ ಯಕ್ಷಗಾನ ಕಲಾವಿದರಿಗೂ ಆರೋಗ್ಯ ತಪಾಸಣೆ ಅಗತ್ಯವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ, ಪುರಸ್ಕೃತ ಕೇಶವ ಹೆಗಡೆ ಕೊಳಗಿ ತಿಳಿಸಿದರು.ಪಟ್ಟಣದ ಲಯನ್ಸ್ ಬಾಲಭವನದಲ್ಲಿ ತಾಲೂಕು ನಿವೃತ್ತ ನೌಕರರ ಸಂಘ ಆಯೋಜಿಸಿದ್ದ ನಿವೃತ್ತ ನೌಕರರಿಗೆ ಜೀವನ ಪ್ರಮಾಣಪತ್ರ ವಿತರಣೆ, ಆರೋಗ್ಯ ತಪಾಸಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ, ತಮಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಸಿದ್ದಾಪುರ ಯಕ್ಷಗಾನದ ತವರು ನೆಲ. ಅನೇಕ ಅತ್ಯುತ್ತಮ ಯಕ್ಷಗಾನ ಕಲಾವಿದರನ್ನು ರೂಪಿಸಿದ ನೆಲ. ಹಿರಿಯರ ಆಶೀರ್ವಾದ, ಹಿರಿಯ ಭಾಗವತರ, ಕಲಾವಿದರ ಮಾರ್ಗದರ್ಶನದಿಂದ ಕಳೆದ ೪೦ ವರ್ಷಗಳಿಂದ ಭಾಗವತನಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದೇನೆ. ಹುಟ್ಟಿದ ಊರಿನಲ್ಲಿ ದೊರಕುತ್ತಿರುವ ಅಭಿನಂದನೆ ಸಂತೋಷವನ್ನು ಹೆಚ್ಚಿಸಿದೆ ಎಂದರು.ಮುಖ್ಯ ಅತಿಥಿ ರಾಷ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ, ದೇಶ, ವಿದೇಶಗಳಲ್ಲಿ ಪ್ರಸಿದ್ಧಿಯಾದ ಯಕ್ಷಗಾನ ಕನ್ನಡ ನೆಲದ ಆಸ್ತಿ. ವಿವಿಧ ಆಯಾಮಗಳನ್ನು ಹೊಂದಿರುವ ಯಕ್ಷಗಾನದಲ್ಲಿ ಭಾಗವತರಾಗಿ ಪ್ರಸಿದ್ಧರಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಕೇಶವ ಹೆಗಡೆಯವರ ಸಾಧನೆ ಹೆಚ್ಚಿನದು ಎಂದರು.ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ, ಕಲೆ, ನೃತ್ಯ ಸಾಹಿತ್ಯದಲ್ಲಿ ಸಾಧನೆಗೆ ಉಳಿದೆಲ್ಲ ಕ್ಷೇತ್ರಗಳಿಗಿಂತ ಹೆಚ್ಚಿನ ಸಾಧನೆ, ಏಕಾಗ್ರತೆ ಅಗತ್ಯವಾಗಿದೆ. ಸಾಧನೆಯ ಮೂಲಕ ಯಕ್ಷಗಾನ ಭಾಗವತಿಕೆಯಲ್ಲಿ ಪ್ರಸಿದ್ಧರಾದ ಕೇಶವ ಹೆಗಡೆಯವರ ಕೊಡುಗೆ ಮಾದರಿಯಾದದ್ದು. ಜನಾಕರ್ಷಣೆಗೆ ಯಕ್ಷಗಾನ ಸಂಪ್ರದಾಯವನ್ನು ಮುರಿಯದೇ, ಅದರ ಜತೆಗೆ ತನ್ನ ಪ್ರತಿಭೆಯ ಮೂಲಕ ಸಿದ್ಧಿ ಪಡೆದವರು ಎಂದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ನಿವೃತ್ತ ನೌಕರರು ಪ್ರತಿವರ್ಷ ಸಲ್ಲಿಸಬೇಕಾದ ಜೀವನ ಪ್ರಮಾಣಪತ್ರವನ್ನು ಬ್ಯಾಂಕಿಗೆ ಹೋಗಿ ಪಡೆಯುವ ಕಷ್ಟವನ್ನು ಪರಿಹರಿಸಲು ಅಧಿಕಾರಿಗಳೇ ಇಲ್ಲಿಗೆ ಬಂದು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಜತೆಗೆ ನಿವೃತ್ತ ನೌಕರರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದ ಜತೆ ಕೇಶವ ಹೆಗಡೆಯವರನ್ನು ಅಭಿನಂದಿಸುವ ಅವಕಾಶ ದೊರಕಿದೆ ಎಂದರು.ಸಂಕಲ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಬಿ. ಹೊಸೂರು, ಎಸ್ಬಿಐ ಅಸಿಸ್ಟೆಂಟ್ ಮ್ಯಾನೇಜರ್ ಶ್ರೀರಾಮ್ ನಾಯ್ಕ ಮಾತನಾಡಿದರು. ಬ್ಯಾಂಕ್ ಅಧಿಕಾರಿಗಳಾದ ಶಿವಶಂಕರ ಕೋಲಸಿರ್ಸಿ, ಸಿದ್ದಿವಿನಾಯಕ ಶೇಟ್, ಡಾ. ಕಾವ್ಯ, ಸಂಘದ ಉಪಾಧ್ಯಕ್ಷ ಎನ್.ವಿ. ಹೆಗಡೆ ಉಪಸ್ಥಿತರಿದ್ದರು.ಸಂಘದ ಕಾರ್ಯದರ್ಶಿ ವಿ.ಎಸ್. ಶೇಟ್ ನಿರೂಪಿಸಿದರು. ಜಿ.ಎಂ. ಕುಮಟಾಕರ ವಂದಿಸಿದರು. ನಂತರ ನಿವೃತ್ತ ನೌಕರರಿಗೆ ಜೀವನ ಪ್ರಮಾಣಪತ್ರ ವಿತರಣೆ ಹಾಗೂ ಆರೋಗ್ಯ ತಪಾಸಣೆ ಜರುಗಿತು.