ಕೆರೆಹಳ್ಳಿಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಕಂಚಿನ ಪುತ್ಥಳಿ ಅನಾವರಣ । 135ನೇ ಜಯಂತ್ಯುತ್ಸವ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಂವಿಧಾನದ ಆಶಯದಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನುಡಿದಂತೆ ನಡೆದುಕೊಂಡರು ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್ ಹೇಳಿದರು.

ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಕಂಚಿನ ಪುತ್ಥಳಿ ಅನಾವರಣ ಮತ್ತು 135ನೇ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಪಂ, ತಾಪಂ, ಜಿಪಂ, ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದು -ಮುಂದು ನೋಡುವ ಈ ಕಾಲಘಟ್ಟದಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಹೇಳಿದ ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮೇರು ವ್ಯಕ್ತಿತ್ವವನ್ನು ಮೆರೆದರು. ಅವರು ಅಂಬೇಡ್ಕರ್‌ ವಾದಿಯಾಗಿದ್ದರು. ಅಂಬೇಡ್ಕರ್‌ ಸಂವಿಧಾನಕ್ಕೆ ಗೌರವ ಕೊಟ್ಟರು ಎಂದರು.


ಅಂಬೇಡ್ಕರ್‌ ಅವರ ಪುತ್ಥಳಿ ಸ್ಥಾಪನೆ ಮಾಡುವ ಜೊತೆಗೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡರೆ ಒಂದು ಸಾರ್ಥಕ ಆಗುತ್ತದೆ ಎಂದರು.

ಸಂವಿಧಾನಕ್ಕಿಂತ ಮತ್ತೊಂದಿಲ್ಲ:

ಕಾರ್ಯಕ್ರಮ ಉದ್ಘಾಟಿಸಿದ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್, ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಒತ್ತು ನೀಡಿದರು. ಅವರ ಆಶಯದಂತೆ ಪ್ರತಿಯೊಬ್ಬರೂ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ದಾರಿ ತೋರಿಸುವನ್ನು ಕೆಲಸ ಮಾಡಬೇಕು ಎಂದರು. ಸಂವಿಧಾನಕ್ಕಿಂತ ದೊಡ್ಡದು ಬೇರೊಂದು ಇಲ್ಲ ಎಂದರು.

ಕೆರೆಹಳ್ಳಿ ಕೆರೆಯನ್ನು ದಿ. ಮಾಜಿ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ತಂದೆ ಧ್ರುವನಾರಾಯಣ ಅವರು ತುಂಬಿಸುವ ಮೂಲಕ ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಹಾಗಾಗಿ ಗುಂಡ್ಲುಪೇಟೆ ಶಾಸಕ ಗಣೇಶ ಪ್ರಸಾದ್ ಅವರ ಕೈ ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ ಎಂದರು.

ಅಂಬೇಡ್ಕರ್‌ಗೆ ಅಗೌರವ ತೋರುವವರು ಉಗ್ರರು:

ಸಾನಿಧ್ಯ ವಹಿಸಿದ ಮೈಸೂರಿನ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಇಡೀ ವಿಶ್ವವೇ ಅಂಬೇಡ್ಕರ್‌ ಅವರತ್ತ ತಿರುಗಿ ನೋಡುತ್ತಿದೆ. ಇಂಥ ಸಂದರ್ಭಗಳಲ್ಲಿ ಕೆರೆಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್‌ ಕಂಚಿನ ಪುತ್ಥಳಿ ಅನಾವರಣ ಮಾಡಿರುವುದು ತುಂಬಾ ಸಂತಸವಾಗಿದೆ. ಅಂಬೇಡ್ಕರ್‌ ಫ್ಲೆಕ್ಸ್, ಪುತ್ಥಳಿ ಹಾಕಬೇಡಿ ಎಂದು ಅವರನ್ನು ಅವಮಾನಿಸುವವರು ಭಯೋತ್ಪಾದಕರು, ದೇಶದ್ರೋಹಿಗಳು ಎಂದರು.

ಅಂಬೇಡ್ಕರ್‌ ಸೇರಿದಂತೆ ರಾಷ್ಟ್ರದ ಮಹಾನಾಯಕರಿಗೆ ಅಪಮಾನ ಮಾಡುವವರು ದೇಶದಲ್ಲಿರಲು ಅರ್ಹರಲ್ಲ. ಹಾಗಾಗಿ ಅಂಥ ಕಿಡಿಗೇಡಿಗಳ ಪೌರತ್ವ ರದ್ದುಪಡಿಸಲು ಹೊಸ ಕಾನೂನು ತರುವಂತೆ ಸರ್ಕಾರಗಳನ್ನು ಒತ್ತಾಯ ಮಾಡುತ್ತೇವೆ ಎಂದರು.

ಅಂಬೇಡ್ಕರ್‌ ಪುತ್ಥಳಿ ಎತ್ತರ ಮಟ್ಟದಲ್ಲಿ ನಿರ್ಮಾಣವಾಗುತ್ತದೆ. ಆದರೆ ಅವರ ವಿಚಾರಗಳು, ಆದರ್ಶಗಳು ಕುಸಿಯುತ್ತಿವೆ. ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನದ ಆಶಯಗಳು ಈಡೇರಬೇಕಾದರೆ ದಲಿತರ ಬೀದಿಯಲ್ಲಿ ಜಡ್ಜ್‌, ಡಿಸಿ, ಎಸ್ಪಿ, ಎಸಿ ಆಗಿ ಕೆಂಪು ಲೈಟ್‌ ಕಾರು ನಿಲ್ಲಬೇಕು. ಆಗ ಅಂಬೇಡ್ಕರ್‌ ಹಾಗೂ ಸಂವಿಧಾನ ಜೀವಂತವಾಗಿರುತ್ತದೆ ಎಂದರು.

ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣ ಸ್ವಾಮಿ ಪಾಪು ಮಾತನಾಡಿ, ಅಂಬೇಡ್ಕರ್‌ ಅವರ ಇಡೀ ವಿಶ್ವದಲ್ಲೇ ಬೆಳಗುತ್ತಿದ್ದಾರೆ. ಅವರಿಗೆ ಕಿಡಿಗೇಡಿಗಳು ಕೆಲವು ಕಡೆಗಳಲ್ಲಿ ಅವಮಾನ ಮಾಡುತ್ತಿದ್ದಾರೆ. ಇದರಿಂದ ಅವರ ವ್ಯಕ್ತಿತ್ವ ಕಡಿಮೆಯಾಗುವುದಿಲ್ಲ. ಗಾಂಧಿವಾದ ಅನುಸರಿಸೋಣ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ನವೀನ್, ಬೊಮ್ಮಾಯ್ಯ, ರೇವಣ್ಣ, ತಾಪಂ ಮಾಜಿ ಸದಸ್ಯ ಎಂ.ಸಿ. ರವಿಕುಮಾರ್‌, ಗ್ರಾಪಂ ಮಾಜಿ ಅಧ್ಯಕ್ಷ ಕೆರೆಹಳ್ಳಿ ರೇವಣ್ಣ, ಗೋಪಾಲ್ ಹೊರೆಯಾಲ, ನಿವೃತ್ತ ಶಿಕ್ಷಕ ಕೆ.ಎಂ. ಮಹದೇವಯ್ಯ, ಗುತ್ತಿಗೆದಾರ ಕೆ. ರೇವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ರಾಜಕುಮಾರ, ಜಿಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಆರ್. ಕೆಂಪರಾಜು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಧುಸೂದನ್, ಗುತ್ತಿಗೆದಾರ ಸುಕುಮಾರ್‌, ಪಿಎಸಿಸಿ ಬ್ಯಾಂಕ್‌ನ ಕಾರ್ಯನಿರ್ವಾಹಕ ಅಧಿಕಾರಿ ಆರ್‌. ರಾಜೇಂದ್ರ ಕುಮಾರ್‌, ಡಾ. ನಾಗೇಶ್, ಅಜಯ್ ಶಂಭು, ಕೆರೆಹಳ್ಳಿ ಮಹಾದೇವಸ್ವಾಮಿ, ಯಜಮಾನ ಗುರುಮಲ್ಲೇಗೌಡ, ಮಲ್ಲೇಶ್, ಸಿದ್ದರಾಜು ನಾಯಕ, ಮಹಾದೇವಸ್ವಾಮಿ, ಮಂಡ್ಯ ಶಿವಣ್ಣ ಯಜಮಾನರಾದ ಶಿವಣ್ಣ, ರಾಮಚಂದ್ರ, ಪಾಪಣ್ಣ, ಬಸವರಾಜು, ಲಿಂಗರಾಜು, ಗುರುಸಿದ್ದಯ್ಯ, ನಾಗರಾಜು, ಮಹದೇವಸ್ವಾಮಿ, ನಾಗರಾಜು, ಶಂಕರ್‌, ರವಿಚಂದ್ರ, ಮಂಜುಪ್ರಸಾದ್, ಅಂಬೇಡ್ಕರ್‌ ಯುವಕರು ಸಂಘದ ಪದಾಧಿಕಾರಿಗಳು ಹಾಜರಿದ್ದರು.

--

24ಸಿಎಚ್ಎನ್‌12

ಚಾಮರಾಜನಗರ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್‌ ಅವರ ಕಂಚಿನ ಪುತ್ಥಳಿ ಅನಾವರಣ ಮತ್ತು 135ನೇ ಜಯಂತ್ಯುತ್ಸವ ಸಮಾರಂಭವನ್ನು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಉದ್ಘಾಟಿಸಿದರು.