ಕನ್ನಡಪ್ರಭ ವಾರ್ತೆ ಬಾಗಲಕೋಟೆಸಚಿವ ಸತೀಶ ಜಾರಕಿಹೊಳಿಯವರು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೂ ಯಾವುದೇ ಅಭ್ಯಂತರವಿಲ್ಲವೆಂದು 36 ಶಾಸಕರ ಸಹಿ ಸಂಗ್ರಹಿಸಿ ನೀಡಿದ್ದರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೊಸ ಬಾಂಬ್‌ ಸಿಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಚಿವ ಸತೀಶ ಜಾರಕಿಹೊಳಿಯವರು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೂ ಯಾವುದೇ ಅಭ್ಯಂತರವಿಲ್ಲವೆಂದು 36 ಶಾಸಕರ ಸಹಿ ಸಂಗ್ರಹಿಸಿ ನೀಡಿದ್ದರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೊಸ ಬಾಂಬ್‌ ಸಿಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿಯವರ ಮೇಲಿನ ಇಡಿ ದಾಳಿಗೆ ಸಿದ್ದರಾಮಯ್ಯನವರ ಶಾಪವೇ ಕಾರಣ ಎಂದು ಲೇವಡಿ ಮಾಡಿದರು.

ಎಂ.ಬಿ.ಪಾಟೀಲ, ಜಮೀರಅಹ್ಮದಖಾನ್ ಹಾಗೂ ಜಾರಕಿಹೊಳಿ ಅವರೇ ಈ ವಿಚಾರವನ್ನು ಕಾಂಗ್ರೆಸ್‌ನವರೇ ಮಾಡಿಸಿದ್ದಾರೆಂದು ಹೇಳಿದ್ದಾರೆ. ಬಿಜೆಪಿಯಲ್ಲಿ ಇಂತಹ ಕೆಲಸ ಮಾಡುವವರು ಯಾರು ಇಲ್ಲ. ಯಾರು ಇದ್ದಾರೆಂದು ಹೇಳಲಿ. ಸತೀಶ ಜಾರಕಿಹೊಳಿಯವರಿಗೆ ಕಾಂಗ್ರೆಸ್‌ನಲ್ಲೇ ದ್ವೇಷವಿದೆ ಎಂದರು.

ರಾಜಣ್ಣರಿಗೂ ಅಪಮಾನವಾಗಿದೆ:

ವಾಲ್ಮೀಕಿ ಸಮುದಾಯದಲ್ಲಿ ಒಬ್ಬ ಒಳ್ಳೆಯ ನಾಯಕ ರೂಪುಗೊಳ್ಳುತ್ತಿದ್ದಾನೆಂಬ ಕಾರಣಕ್ಕೆ ಈ ರೀತಿ ಮಾಡಿದರು. ರಾಜಣ್ಣ ಅವರು ಸಹಕಾರ ಸಚಿವರಾಗಿದ್ದಾಗ ನೇರವಾಗಿ ಮಾತನಾಡಿದರು. ಅವರ ಪರಿಸ್ಥಿತಿ ಏನಾಯಿತು? ರಾಹುಲ್ ಗಾಂಧಿ ಬಗ್ಗೆ ಏನೂ ಮಾತನಾಡದಿದ್ದರೂ ಅವರನ್ನು ಅಪಮಾನಿಸಿದರು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇ ಆಗಿದ್ದರೂ ಅಪಮಾನವನ್ನು ಅಪಮಾನ ಎಂದು ಹೇಳಲೇಬೇಕು. ನಾನು ಕೂಡ ತಪ್ಪನ್ನು ತಪ್ಪು ಎಂದು ಹೇಳಿದ್ದೇನೆ. ಅದಕ್ಕಾಗಿ ನನ್ನನ್ನು ಹೊರಹಾಕಿದ್ದಾರೆ. ಹೊರಹಾಕಲಿ ಬಿಡಿ, ಏನಾಗುತ್ತದೆ ನೋಡೋಣ ಎಂದರು.

ವಿಜಯಪುರಕ್ಕೆ ₹3 ಸಾವಿರ ಕೋಟಿ ಅನುದಾನ:

ವಿಜಯಪುರ ನಗರವು ದೇಶದಲ್ಲೇ ಅತ್ಯಂತ ಸ್ವಚ್ಛ ನಗರಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ಸಿಸಿ ರಸ್ತೆ, ಡ್ರೈನೇಜ್ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿ ಶೇ.99ರಷ್ಟು ಧೂಳನ್ನು ಕಡಿಮೆ ಮಾಡಿದ್ದೇವೆ. ವಿಜಯಪುರ ನಗರಕ್ಕೆ ಒಟ್ಟು ₹3,000 ಕೋಟಿ ಅನುದಾನ ತಂದಿದ್ದೇನೆ. ಹೀಗಾಗಿ ನಗರ ಅಭಿವೃದ್ಧಿಯಾಗಿದೆ ಎಂದರು.

ಟಿ.ನರಸೀಪುರ ಇನ್ಸ್‌ಪೆಕ್ಟರ್ ವಿರುದ್ಧ ಆಕ್ರೋಶ:

ಟಿ.ನರಸೀಪುರದಲ್ಲಿ ಹಿಂದೂಗಳಿಗೆ ಧಮ್ಕಿ ಹಾಕಿದ ಇನ್ಸ್‌ಪೆಕ್ಟರ್ ವಿಚಾರವಾಗಿಯೂ ಯತ್ನಾಳ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರ ಹೇಗಿರುತ್ತದೆಯೋ ಅಧಿಕಾರಿಗಳೂ ಹಾಗೆಯೇ ಇರುತ್ತಾರೆ. ಗೃಹ ಸಚಿವರೂ ಹಾಗೆಯೇ ಇರುತ್ತಾರೆ. ಟಿಪ್ಪು ಸುಲ್ತಾನ್ ಕಟೌಟ್ ಹಾಕಲು ತೊಂದರೆ ಇಲ್ಲ, ಔರಂಗಜೇಬನ ಕಟೌಟ್ ಹಾಕಲು ತೊಂದರೆ ಇಲ್ಲ. ಆದರೆ, ಗಣೇಶೋತ್ಸವದ ಮೂಲಕ ಹಿಂದೂಗಳು ಜಾಗೃತರಾಗಿ ಒಂದಾಗಬೇಕೆಂಬ ಉದ್ದೇಶವಿದೆ ಎಂದರು.

ಬ್ರಿಟಿಷರ ಕಾಲದಲ್ಲೂ ಇಂತಹ ತೊಂದರೆ ಇರಲಿಲ್ಲ. ಪರ್ಮಿಷನ್ ಕೇಳಿರಲಿಲ್ಲ. ಪಾಕಿಸ್ತಾನದಲ್ಲಿ ಮುಸ್ಲಿಂ ಲೀಗ್ ಇರುವಂತೆ ಭಾರತದಲ್ಲಿ ಕಾಂಗ್ರೆಸ್ ಮುಸ್ಲಿಂ ಲೀಗ್ ಆಗಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಪಕ್ಷವಾಗಿದೆ ಎಂದು ಯತ್ನಾಳ್ ಆರೋಪಿಸಿದರು.

ಅಧಿಕಾರಿಗಳದ್ದೇ ತಪ್ಪು ಎಂದು ಹೇಳಲಾಗದು. ಡಿಜಿ-ಐಜಿ ಸೇರಿದಂತೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡುತ್ತಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗಲೂ ಇಂತಹ ಪರಿಸ್ಥಿತಿ ಬಂದಿತ್ತು. ಆಗ ನಾವು ಹೇಳಿ ಸರ್ಕ್ಯುಲರ್ ಹಿಂಪಡೆಯುವಂತೆ ಮಾಡಿದ್ದೆವು ಎಂದರು.

ಹಿಂದೂಗಳು ದೇಶದ ಯಾವುದೇ ಭಾಗದಲ್ಲಿ ಮುಸ್ಲಿಮರ ರಂಜಾನ್ ಅಥವಾ ಈದ್ ಮಿಲಾದ್ ಕಾರ್ಯಕ್ರಮಗಳ ಮೇಲೆ ಕಲ್ಲು ಎಸೆದ ಉದಾಹರಣೆ ಇಲ್ಲ. ಹಾಗಿದ್ದರೇ ಹಿಂದೂಗಳ ಕಾರ್ಯಕ್ರಮಗಳ ಮೇಲೆ ನೀವೇಕೆ ಕಲ್ಲು ಎಸೆಯುತ್ತೀರಿ? ನೀವು ಸೌಹಾರ್ದತೆಯಿಂದ ಇರಲು ಬಯಸುತ್ತಿಲ್ಲ. ಬದಲಾಗಿ ಈ ದೇಶವನ್ನು ಆಳಬೇಕು ಎಂಬ ಉದ್ದೇಶ ಹೊಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.