ಸಾರಾಂಶ
ಕ್ಷೇತ್ರದ ಖಾಜಿಸೋಣ್ಣೇಹಳ್ಳಿ ಗ್ರಾಮದಲ್ಲಿ ಕುರುಬ ಸಮುದಾಯದ ಆರಾಧ್ಯದೈವ ಸಿದ್ದೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಮಹದೇವಪುರ
ಕ್ಷೇತ್ರದ ಖಾಜಿಸೋಣ್ಣೇಹಳ್ಳಿ ಗ್ರಾಮದಲ್ಲಿ ಕುರುಬ ಸಮುದಾಯದ ಆರಾಧ್ಯದೈವ ಸಿದ್ದೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ಜಾತ್ರಾ ಮಹೋತ್ಸವ ಪ್ರಯುಕ್ತ ವೇಮಗಲ್ ತಾಲೂಕು ಕುರುಬರಹಳ್ಳಿ ಬೀರೇಶ್ವರ ಕಲಾತಂಡ ವೀರಗಾರರ ತಲೆ ಮೇಲೆ ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವ ಪವಾಡ ಕಾರ್ಯ ನಡೆಸಿಕೊಟ್ಟರು, ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನ ಕಲ್ಕೆರೆ, ಹಲಸೂರು,ದೇವನಹಳ್ಳಿ,ಕೆ.ಚನ್ನಸಂದ್ರ,ಶಿವಕೋಟೆ,ಶ್ರೀನಗರ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಕುಲಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದರು.
ಉತ್ಸವದಲ್ಲಿ ವೀರಗಾಸೆ, ಗೊರವನ ಕುಣಿತ, ಕಾಲಾಟಕಾರರು, ಡೊಳ್ಳು ಕುಣಿತ, ಪೂಜಾ ಕುಣಿತ, ಗೊಂಬೆ ಕುಣಿತ ಸೇರಿದಂತೆ ಜನಪದ ನೃತ್ಯಗಳು ಭಕ್ತರು ಗಮನ ಸೆಳೆಯಿತು.ಇದೇ ವೇಳೆ ಮಾತನಾಡಿದ ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ್, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ, ಮಳೆಯಿಲ್ಲದೆ ರೈತರು ಸಂಕಷ್ಟ ಸಿಲುಕಿದ್ದಾರೆ,ಕುಡಿಯುವ ನೀರಿಗೂ ಅಭಾವವಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗುವಂತೆ ದೇವರಲ್ಲಿ ಪ್ರಾರ್ಥಿಸಿ ಶ್ರದ್ಧಾಭಕ್ತಿಯಿಂದ ಒಂದು ತಿಂಗಳಿಂದ ಪೂಜಾ ಪುನಾಸ್ಕಾರ ಹಾಗೂ ಧಾರ್ಮಿಕ ಕಾರ್ಯಗಳು ನಡೆಸಿಕೊಂಡು ಬಂದಿದ್ದು, ಇಂದು ಭಾನುವಾರ ಸಿದ್ದೇಶ್ವರ ದೇವರ ಹೊಳೆ ಪೂಜೆ ಉತ್ಸವ ನಡೆಯಿತು ಎಂದರು.
ಸಿದ್ದೇಶ್ವರ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಕಲ್ಕೆರೆ ಕೃಷ್ಣಪ್ಪ, ಗ್ರಾಮಸ್ಥರಾದ ಪಟೇಲ್ ನಾಗೇಶ್, ಚಿಕ್ಕಮುನಿಶಾಮಪ್ಪ, ಗೋವಿಂದರಾಜು ಇದ್ದರು.