ಕನ್ನಡಪ್ರಭ ವಾರ್ತೆ ತುಮಕೂರುಅವಕಾಶಗಳನ್ನು ಬಳಸಿಕೊಳ್ಳಿ, ಆರೋಗ್ಯ ಉಳಿಸಿಕೊಳ್ಳಿ ಫಿಸಿಕಲ್ ಫಿಟ್ನೆಸ್ ಆಟಗಾರರಿಗೆ ಅತ್ಯಾವಶ್ಯಕ ಎಂದು ತುಮಕೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸುದೀಪ್ ಕುಮಾರ್ ತಿಳಿಸಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶ್ರೀ ಸಿದ್ಧಾರ್ಥ ವ್ಯವಹಾರ ನಿರ್ವಹಣಾ ಅಧ್ಯಯನ ಕೇಂದ್ರ ಆಯೋಜಿಸಿದ್ದ ಶ್ರೀ ಸಿದ್ಧಾರ್ಥ ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್ 2ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ವಿಶ್ವವಿದ್ಯಾಲಯದ ಮಟ್ಟದ ಕ್ರೀಡಾ ಸ್ಫರ್ಧೆಯನ್ನು ಆಯೋಜಿಸಬಹುದಾದ ಮೂಲಭೂತ ಸೌಕರ್ಯಗಳು ಕಾಲೇಜಿನಲ್ಲಿ ಇರುವುದು ತುಮಕೂರು ಜಿಲ್ಲೆಗೊಂದು ಹಿರಿಮೆ. ಕಾಲೇಜಿನಲ್ಲಿರುವ ಅನುಕೂಲಗಳನ್ನು ಬಳಸಿಕೊಂಡ ವಿದ್ಯಾರ್ಥಿಗಳು ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಪ್ರೊ. ನಂಜುಂಡಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ಸಾಮರ್ಥ್ಯ ಬೆಳೆಸಿಕೊಂಡಾಗ ಸಾಧನೆಯ ಹಂತ ತಲುಪಬಹುದು. ಸ್ವಾಮಿವಿವೇಕಾನಂದರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ನಮಗೆಲ್ಲರಿಗೂ ಆದರ್ಶಮಯವಾಗಿದ್ದು, ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ ಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ರಾಷ್ಟ್ರಮಟ್ಟದ ಆಟಗಾರರಾದ ಪವನ್ ಮಾತನಾಡಿ ಜಿಲ್ಲಾ ಮಟ್ಟದ ಪಂದ್ಯಗಳಲ್ಲಿ ಕಬಡ್ಡಿ ಪ್ರದರ್ಶನ ನೀಡಿ ಇಂದು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸ್ಥಾನಗಳಿಸಿಕೊಂಡಿದ್ದೇನೆ. ಕ್ರೀಡಾಮನೋಭಾವದಿಂದ ಆಟ ಆಡಬೇಕು ಹಾಗೂ ಆಟದಲ್ಲಿ ಅಡ್ಡದಾರಿ ಇರಬಾರದು. ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳನ್ನು ಈ ಕಾಲೇಜಿನಲ್ಲಿ ನಡೆಸಬಹುದು ಎಂದು ಅಭಿಪ್ರಾಯಪಟ್ಟರು. ಡಾ.ಪಾವಗಡ ರೇಣುಕಾ ಪ್ರಸಾದ್ ಶ್ರೀ ಸಿದ್ದಾರ್ಥ ಕಬ್ಬಡ್ಡಿ ಲೀಗ್ ಪಂದ್ಯಾವಳಿಗಳ ಪಕ್ಷಿನೋಟ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿ ಮಾಹಿತಿಯನ್ನು ಹಂಚಿಕೊಂಡರು. ಕಬಡ್ಡಿ ಪಂದ್ಯಾವಳಿ ಯಶಸ್ವಿಯಾಗಲೆಂದು ಅಧ್ಷಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಜಿ ಮಮತ ಹಾರೈಸಿದರು. ವೇದಿಕೆಯಲ್ಲಿ ಎಸ್.ಎಸ್.ಐ.ಟಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರುದ್ರೇಶ್ ಕೆ.ಆರ್, ಕೋರ್ಡಿನೇಟರ್ ಶ್ರೀ ಲಕ್ಷ್ಮೀಪತಿ ಮುಖ್ಯಸ್ಥರು ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.