ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಾಡಿನ ಜನರ ಮತ್ತು ಶ್ರೀಮಠದ ಭಕ್ತರ ಆಶಯದಂತೆ ಸಿದ್ಧಗಂಗಾಶ್ರೀಗಳಿಗೆ ಭಾರತ ರತ್ನ ಪುರಸ್ಕಾರ ಲಭ್ಯವಾಗಬೇಕಿತ್ತು. ಅದು ಸಿಗದೇ ಹೋದರೂ ವಿಶ್ವರತ್ನವಾಗಿ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಹೇಳಿದರು.ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಸಿದ್ಧಗಂಗಾಶ್ರೀಗಳ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್, ಶ್ರೀಸಿದ್ಧಗಂಗಾ ಸೇವಾ ಸಮಿತಿ, ಶ್ರೀಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ, ಜಿಲ್ಲಾ ಶರಣರ ಸಂಘಟನೆ, ಸಿದ್ಧಗಂಗಾ ಬಳಗದ ಆಶ್ರಯದಲ್ಲಿ ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿ ಅವರ ೧೧೭ನೇ ಜನ್ಮದಿನೋತ್ಸವ ಪ್ರಯುಕ್ತ ಮಹಾ ದಾಸೋಹ, ರಕ್ತದಾನ-ಕೃತಿ ಬಿಡುಗಡೆ, ಅಭಿನಂದನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ತ್ರಿವಿಧ ದಾಸೋಹಿಗೆ ಯಾವ ರತ್ನ ಕೊಟ್ಟರೂ ಅದು ಕಡಿಮೆಯೇ. ಪುರಸ್ಕಾರಗಳಿಂದ ಶ್ರೀಗಳಿಗೆ ಗೌರವ ಸಿಗುವುದಕ್ಕಿಂತ ಪುರಸ್ಕಾರಗಳಿಗೆ ಮಹತ್ವ ಹೆಚ್ಚಾಗುತ್ತದೆ. ತಮ್ಮ ಜೀವನವನ್ನು ಕಾಯಕಕ್ಕೆ ಮೀಸಲಾಗಿಟ್ಟಿದ್ದರು. ಅವರಿಂದಲೇ ಸಿದ್ಧಗಂಗಾ ಕ್ಷೇತ್ರ ಭಕ್ತರ ಪಾಲಿಗೆ ಪುಣ್ಯಕ್ಷೇತ್ರವಾಗಿದೆ ಎಂದರು.ಮಳವಳ್ಳಿ ಧನಗೂರು ಮಠದ ಶ್ರೀಷಡಕ್ಷರಿದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ಧಗಂಗಾ ಶೀಗಳು ಕಾಯಕ, ದಾಸೋಹ ಮತ್ತು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು, ನಾಡಿನಾದ್ಯಂತ ಸುಮಾರು ೧೦ಸಾವಿರಕ್ಕೂ ಹೆಚ್ಚು ಬಡಮಕ್ಕಳಿಗೆ ಅನ್ನ, ಆಶ್ರಯ ಮತ್ತು ಶಿಕ್ಷಣ ನೀಡಿದ ಕೀರ್ತಿ ಸಲ್ಲಿಸುತ್ತದೆ ಎಂದು ಸ್ಮರಿಸಿದರು.
ಸುಮಾರು ೨೦ ವರ್ಷಗಳಿಂದ ಉದ್ಯಾನವನದಲ್ಲಿ ವಿವಿಧ ಸೇವಾ ಕಾರ್ಯಗಳು ನಡೆದುಕೊಂಡು ಬರುತ್ತಿವೆ, ಸುಮಾರು ೧೦ಸಾವಿರ ಜನತೆಗೆ ಮಹಾದಾಸೋಹ ನಡೆಯುತ್ತಿದೆ, ಕೋಟಿಗೊಬ್ಬ ಶರಣ ಎಂಬ ಕೃತಿ ಲೋಕಾರ್ಪಣೆಗೊಂಡಿದೆ, ಹಸಿದವರಿಗೆ ತೃಪ್ತಿ ಪಡಿಸುವುದು ಅನ್ನ ಎಂದು ನುಡಿದರು.ಇದೇ ವೇಳೆ ರೈತರಿಗೆ ಉಪಯುಕ್ತ ಸಸಿ ಹಾಗೂ ಕಲ್ಪವೃಕ್ಷವನ್ನು ವಿತರಣೆ ಮಾಡಲಾಯಿತು. ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ನಡೆಯಿತು. ಬಳಿಕ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಯಶಸ್ಸಿಯಾಗಿ ನಡೆಯಿತು. ಮಳವಳ್ಳಿಯ ಶ್ರೀಸಿದ್ಧಗಂಗಾ ಬಳಗದ ಅಧ್ಯಕ್ಷ ಮಿಲಿಟರಿ ಸುರೇಶ್ ಹಾಗೂ ಪರಿಸರ ಪ್ರೇಮಿ ಕೃಷ್ಣಪ್ಪ ಅವರಿಗೆ ಸಿದ್ಧಗಂಗಾಶ್ರೀ ಭಕ್ತಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಶ್ರೀಸಿದ್ಧಗಂಗಾ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ್, ಶ್ರೀಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ ಅಧ್ಯಕ್ಷ ಬೆಟ್ಟಹಳ್ಳಿ ಮಂಜುನಾಥ್, ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಡಾ.ವಚನ ಕುಮಾರಸ್ವಾಮಿ, ಜಿಲ್ಲಾ ಶರಣರ ಸಂಘಟನೆಯ ಮಿಲಿಟರಿ ಸುರೇಶ್, ಕಾಡುಕೊತ್ತನಹಳ್ಳಿ ನಂದೀಶ್, ವಿಶ್ವನಾಥ್, ಮಹತೇಶಪ್ಪ, ಶಿವಲಿಂಗಪ್ಪ, ಮಹೇಶ್, ಎಲ್.ಸಂದೇಶ್, ಇಂಜಿನಿರ್ ಚಂದ್ರಹಾಸ್ ಇದ್ದರು.