- ಮೋದಿ ಬಗ್ಗೆ ಎಸಿಸಿಸಿ ಅಧ್ಯಕ್ಷ ಖರ್ಗೆ ಹಗುರ ಮಾತಿಗೆ ಹರಿಹರ ಶಾಸಕ ಆಕ್ರೋಶ

- - - ದಾವಣಗೆರೆ: ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ ಗಲಾಟೆಯಲ್ಲಿ ತಾವು ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದ ಎಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕನಸನ್ನು ಇಬ್ಬರೂ ಭಗ್ನಗೊಳಿಸಿದ್ದು, ಇಂತಹ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಕಟ್ಟಿದಂತಹ ಡಿ.ಕೆ.ಶಿವಕುಮಾರ, ರಾಜ್ಯದಲ್ಲಿ ಹೆಚ್ಚು ಶಕ್ತಿ ಹೊಂದಿರುವ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಂಡಿದ್ದ ಸಿಎಂ ಆಗುವ ಕನಸ್ಸನ್ನೇ ಭಗ್ನಗೊಳಿಸಿದ್ದು, ಇದೆಲ್ಲದರಿಂದ ಖರ್ಗೆ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿದ್ದಾರೆ ಎಂದರು.

ನಮ್ಮ ದೇಶದ ನಾಯಕನಿಗೆ ಅಗೌರವ ತೋರುವಂತಹ ಹೇಳಿಕೆಯನ್ನು ಖರ್ಗೆ ನೀಡುತ್ತಿದ್ದಾರೆ. 140 ಕೋಟಿ ಭಾರತೀಯರಿಗಷ್ಟೇ ಅಲ್ಲ, ನರೇಂದ್ರ ಮೋದಿ ಮೆಚ್ಚಿದ ವಿಶ್ವದ ಮೇಧಾವಿಗಳಿಗೂ ಖರ್ಗೆ ಅವಮಾನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೀವು ನಡೆದುಕೊಳ್ಳುವ ರೀತಿ, ನೀಡುತ್ತಿರುವ ಹೇಳಿಕೆಗಳು ಸರಿ ಇದೆಯಾ ಮಲ್ಲಿಕಾರ್ಜುನ ಖರ್ಗೆಯವರೇ ಎಂದು ಪ್ರಶ್ನಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ದೆಹಲಿಗೆ ಗಾಳಿ ಕುಡಿಯಲು ಬಂದಿಲ್ಲವೆಂದು ಹೇಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ಕಳೆದುಕೊಂಡಿದ್ದಾರೆಂದು ಅದೇ ಪಕ್ಷದ ಹಿರಿಯ ಸಚಿವರು, ನಾಯಕರೆ ಹೇಳಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಇದರ ವಿರುದ್ಧ ಬಿಜೆಪಿ ಶೀಘ್ರವೇ ಹೋರಾಟ ನಡೆಸಲಿದೆ ಎಂದು ಬಿ.ಪಿ.ಹರೀಶ ಎಚ್ಚರಿಸಿದರು.