ಸಾರಾಂಶ
ಚನ್ನಪಟ್ಟಣ: ರೈತ ಬೆಳೆದು ತಂದ ರೇಷ್ಮೆಗೂಡಿಗೆ ಹರಾಜಿನಲ್ಲಿ ಅತ್ಯಂತ ಕಡಿಮೆ ದರ ಕೂಗುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿ ರೈತರು ಪ್ರತಿಭಟನೆ ನಡೆಸಿದ ಪ್ರಸಂಗ ನಗರದ ರೇಷ್ಮೆ ಮಾರುಕಟ್ಟೆ ಮುಂದೆ ನಡೆಯಿತು.
ಭಾನುವಾರ ಒಂದು ಕೆ.ಜಿ. ರೇಷ್ಮೆ ಗೂಡಿಗೆ ೬೦೦ ರು. ಧಾರಣೆ ಇತ್ತು. ಆದರೆ, ಸೋಮವಾರ ರೀಲರ್ಗಳು ಏಕಾಏಕಿ ಕಡಿಮೆ ಬೆಲೆಗೆ ಹರಾಜು ಕೂಗುತ್ತಿದ್ದಾರೆ ಎಂದು ಸಿಟ್ಟಿಗೆದ್ದ ರೇಷ್ಮೆ ಬೆಳೆಗಾರರು ಮಾರುಕಟ್ಟೆ ಮುಂಭಾಗದ ಹಳೇ ಬೆಂಗಳೂರು - ಮೈಸೂರು ಹೆದ್ದಾರಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು.ರೇಷ್ಮೆ ಮಾರುಕಟ್ಟೆಯಲ್ಲಿ ರೈತರು ಆಕ್ರೋಶಗೊಂಡಿರುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಮಾರುಕಟ್ಟೆ ಅಧಿಕಾರಿಗಳು ಹಾಗೂ ಪೊಲೀಸರು ರೀಲರ್ಸ್ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿ ಪ್ರತಿಭಟನಾನಿರತ ರೈತರನ್ನು ಸಮಾಧಾನಪಡಿಸಿ ಮಾರುಕಟ್ಟೆ ಒಳಕ್ಕೆ ಕರೆತಂದರು.
ಮಾರುಕಟ್ಟೆಗೆ ಹೆಚ್ಚಿನ ಗೂಡು ಬಂದಿಲ್ಲವೆಂದು ಹರಾಜು ಪ್ರಕ್ರಿಯೆಯಿಂದ ಹೊರಗುಳಿದಿದ್ದ ರೀಲರ್ಸ್ಗಳು ಮಾರುಕಟ್ಟೆ ಒಳಗೆ ಆಗಮಿಸಿ ಪೊಲೀಸರ ಜೊತೆ ಮಾತುಕತೆ ನಡೆಸಲಾರಂಬಿಸಿದರು. ಈ ವೇಳೆ ರೈತರು ಹಾಗೂ ರೀಲರ್ಸ್ಗಳ ನಡುವೆ ಮಾತಿನ ಚಕಮಕಿ ನಡೆಯಿತು.ಎರಡು ಕಡೆ ಸಮಸ್ಯೆ ಆಲಿಸಿದ ಪೊಲೀಸರು ರೇಷ್ಮೆ ಬೆಳೆಗಾರರು ಹಾಗೂ ರೀಲರ್ಸ್ ಸೇರಿ ಎರಡು ಕಡೆಯವರನ್ನು ಸಮಾಧಾನಪಡಿಸಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದರು.
ರೈತ ಸಂಘಟನೆ ಆಕ್ರೋಶ: ರೇಷ್ಮೆ ಬೆಳೆಗಾರರು ದರ ಕಡಿಮೆಯೆಂದು ಪ್ರತಿಭಟನೆಗಿಳಿಂದ ವಿಚಾರರ ತಿಳಿದು ಸ್ಥಳಕ್ಕೆ ಆಗಮಿಸಿದ ರೈತ ಸಂಘಟನೆಗಳ ಮುಖಂಡರು ಅಧಿಕಾರಿಗಳು ಹಾಗೂ ರೀಲರ್ಸ್ಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಮಾರುಕಟ್ಟೆಗೆ ಹೆಚ್ಚಿನ ಗೂಡು ಬಂದಿಲ್ಲ ಎಂಬ ನೆಪವೊಡ್ಡಿ ರೀಲರ್ಸ್ ಹರಾಜಿನಿಂದ ದೂರ ಉಳಿದರೆ ರೇಷ್ಮೆ ಬೆಳೆಗಾರರ ಪಾಡೇನು. ಮಾರುಕಟ್ಟೆಗೆ ತಂದಿರುವ ಗೂಡನ್ನು ಖರೀದಿಸುವವರು ಯಾರು, ಬರೀ ನಿಮ್ಮ ಸಮಸ್ಯೆ ಮಾತ್ರ ಹೇಳಿಕೊಳ್ಳಿತ್ತೀರಾ. ಬೆಳೆಗಾರರ ಬಗ್ಗೆ ಯೋಚಿಸಿದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಮಾರುಕಟ್ಟೆಯಲ್ಲಿ ಸಾಕಷ್ಟು ಸಮಸ್ಯೆಗಳಿಂದ ಅಧಿಕಾರಿಗಳು ರೈತರ ಹಿತ ಕಾಪಾಡುವುದನ್ನು ಮೆರೆತಿದ್ದಾರೆ. ಅಧಿಕಾರಿಗಳಿಗೆ ಕೇವಲ ಸಂಬಳ ಬಂದರೆ ಸಾಕಾಗಿದೆ. ರೈತರಿದ್ದರೆ ಮಾತ್ರ ರೀಲರ್ಸ್ ಹಾಗೂ ಅಧಿಕಾರಿಗಳು ಉಳಿಯುವುದು ಎಂಬುದನ್ನು ಅರಿಯಬೇಕು ಎಂದು ಕಿಡಿಕಾರಿದರು.ಪೋಟೊ೧೭ಸಿಪಿಟಿ೧: ಚನ್ನಪಟ್ಟಣ ರೇಷ್ಮೆ ಮಾರುಕಟ್ಟೆಯಲ್ಲಿ ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿರುವ ರೀಲರ್ಸ್ ಹಾಗೂ ರೇಷ್ಮೆ ಬೆಳೆಗಾರರು.