ಮುದ್ದೇಬಿಹಾಳದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಎಸ್ಐಆರ್ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಮತಕ್ಷೇತ್ರದ ಬೂತ್ ಮಟ್ಟದ ಬಿಎಲ್ಒಗಳಿಗೆ ಜಾಗೃತಿ ಅಭಿಯಾನ ಸಭೆಯಲ್ಲಿ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಕುರಿತು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ತೀವ್ರ ಆತಂಕವಿದ್ದು, ಈ ಪ್ರಕ್ರಿಯೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಜ್ಯದಾದ್ಯಂತ ಜನಜಾಗೃತಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಶಾಸಕ ಸಿ. ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು.ಪಟ್ಟಣದ ವಿಜಯಮಹಾಂತೇಶ ಮಂಗಳ ಭವನದ ದಾಸೋಹ ಭವನದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಎಸ್.ಐ. ಆರ್. ಕುರಿತು ಸೋಮವಾರ ಹಮ್ಮಿಕೊಂಡಿದ್ದ ಮತಕ್ಷೇತ್ರದ ಬೂತ್ ಮಟ್ಟದ ಬಿಎಲ್ ಒಗಳಿಗೆ ಜಾಗೃತಿ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು.
ಎಸ್ಐಆರ್ ಪ್ರಕ್ರಿಯೆ ನೆಪದಲ್ಲಿ ವಿಶೇಷವಾಗಿ ಕಾಂಗ್ರೆಸ್ ಬೆಂಬಲಿತ ಮತದಾರರನ್ನೇ ಗುರಿಯಾಗಿಸುವ ಹುನ್ನಾರ ನಡೆಯುತ್ತಿದೆ ಎಂಬ ಆತಂಕ ವ್ಯಕ್ತವಾಗಿದ್ದು, ಇದೇ ಕಾರಣಕ್ಕೆ ಪಕ್ಷದ ವತಿಯಿಂದ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಸ್ಐಆರ್ ಪ್ರಕ್ರಿಯೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯೊಂದು ಮತಗಟ್ಟೆ ಮಟ್ಟದಲ್ಲೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ಮತದಾರರ ಪಟ್ಟಿ ಪರಿಶೀಲಿಸುವುದರ ಜೊತೆಗೆ ಮತದಾರರ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಬಿಜೆಪಿಯವರ ಕುತಂತ್ರದಿಂದ ಎಸ್ಐಆರ್ ಅಸ್ತಿತ್ವಕ್ಕೆ ತರಲಾಗಿದೆ. ನಾವೇ ಶಾಶ್ವತವಾಗಿ ಅಧಿಕಾರದಲ್ಲಿರಬೇಕು ಎಂಬ ಮನೋಭಾವನೆ ಬಿಜೆಪಿಯವರಾದ್ದಾಗಿದೆ. ಚುನಾವಣೆ ಆಯುಕ್ತರು ನೇರವಾಗಿ ಪ್ರಧಾನಿಗಳು ನೇಮಕ ಮಾಡಿಕೊಳ್ಳುವ ಮೂಲಕ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆ ಆಯೋಗಕ್ಕೆ ಬೇರೆ ಯಾರು ಪ್ರಶ್ನೆ ಮಾಡದಂತೆ ಕಾನೂನು ಜಾರಿಗೆ ತರಲಾಗಿದೆ. ಮತದಾರರ ಪಟ್ಟಿ ಪರಿಶೀಲನೆಗೆ ಬಿ.ಎಲ್.ಒಗಳಿಂದ ಮನೆ ಮನೆಗೆ ಭೇಟಿ ನೀಡಿ ಹಳೆಯ ವಿವರ ಪರಿಶೀಲಿಸುವಂತೆ ಮನವಿ ಮಾಡಿದರು.ಈ ವೇಳೆ ಕರ್ನಾಟಕ ಜಾಗೃತ ವೇದಿಕೆ ಮುಖ್ಯಸ್ಥ ಪೃಥ್ವಿರಾಜ ಮಾತನಾಡಿ, ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಭಿಯಾನ ನಿಮಿತ್ತ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳ ಪರಿಶೀಲನೆ ನಡೆಸುತ್ತಿದ್ದಾರೆ. ಚುನಾವಣೆ ಆಯೋಗದ ಮಾರ್ಗಸೂಚಿಯಂತೆ, ಮತದಾರರಿಗೆ ನೀಡಲಾಗುತ್ತಿರುವ ಫಾರ್ಮ್ಗಳ ಎಡಭಾಗದಲ್ಲಿರುವ ಮುದ್ರಿತ ಬಾಕ್ಸ್ನಲ್ಲಿ ಹಿಂದಿನ ಮತದಾರರ ಪಟ್ಟಿಯಲ್ಲಿರುವ ಹೆಸರು, ತಂದೆ ಅಥವಾ ಗಂಡನ ಹೆಸರು, ವಯಸ್ಸು ಹಾಗೂ ಮತದಾರರ ಗುರುತಿನ ಚೀಟಿ ಸಂಖ್ಯೆ ಸೇರಿದಂತೆ ಹಳೆಯ ದಾಖಲೆಗಳ ವಿವರ ಮುದ್ರಿಸಲಾಗಿದೆ. ಈ ವಿವರಗಳು ಇಲಾಖೆಯ ದಾಖಲೆಗಳ ಆಧಾರದ ಮೇಲೆ ನೀಡಲಾಗಿದ್ದು, ಮತದಾರರು ಅವುಗಳನ್ನು ಪರಿಶೀಲಿಸಬೇಕು. ಮುದ್ರಿತ ಮಾಹಿತಿ ಸರಿಯಾಗಿದ್ದರೆ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ. ಫಾರಂಗೆ ಸಹಿ ಮಾಡಿ ಬಿಎಲ್ಒಗೆ ಸಲ್ಲಿಸಬೇಕು. ಹೆಸರು, ವಯಸ್ಸು, ವಿಳಾಸ ಅಥವಾ ಇತರೆ ವಿವರಗಳಲ್ಲಿ ತಪ್ಪು ಕಂಡುಬಂದರೆ, ಫಾರ್ಮ್ ನಲ್ಲಿ ಖಾಲಿ ಕಾಲಂಗಳಲ್ಲಿ ಸರಿಯಾದ ಮಾಹಿತಿ ದಾಖಲಿಸಿ, ಆಧಾರ್ ಕಾರ್ಡ್ ಅಥವಾ ಇತರೆ ಅಗತ್ಯ ದಾಖಲೆಗಳ ಪ್ರತಿ ಲಗತ್ತಿಸಿ ಸಲ್ಲಿಸಬೇಕು ಎಂದು ಹೇಳಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ತಾಳಿಕೋಟಿ ಭಾಗದ ಗಣ್ಯರಾದ ಫ್ರಭುಗೌಡ ಮದರಕಲ್ಲ, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ರಾಯನಗೌಡ ತಾತರಡ್ಡಿ, ರಾಜೇಂದ್ರಗೌಡ ರಾಯಗೊಂಡ, ಶಖೀಲ ಖಾಜಿ, ಎಂಬಿ ನಾವದಗಿ, ಸತೀಶ ಓಸ್ವಾಲ್, ಬಿ.ಕೆ. ಬಿರಾದಾರ, ಗಣೇಶ ಅನ್ನಗೋನಿ, ಬಾಪುರಾಯ ದೇಸಾಯಿ, ಸಿಖಂದರ್ ಜಾನ್ವೇಕರ, ವೈ.ಎಚ್. ವಿಜಯಕರ, ಮೈಬೂಬ ಗೊಳಸಂಗಿ, ಕಾಮರಾಜ ಬಿರಾದಾರ, ಮಹಮ್ಮದ ರಫೀಕ್ ಶಿರೋಳ, ಕಾಶಿಮ್ ಪಟೇಲ, ಸಿದ್ದನಗೌಡ ಪಾಟೀಲ, ಅಕ್ಷತಾ ಚಲವಾದಿ, ಸರಸ್ವತಿ ಪೀರಾಪೂರ, ಮಾಬೂಬಿ ಬಾಗವಾನ, ನಿರ್ಮಲಾ ಚಲವಾದಿ, ಶೋಭಾ ಶಳ್ಳಗಿ, ಕಮಲಾ ಭಜಂತ್ರಿ, ಬಸವರಾಜ ಭಜಂತ್ರಿ, ಸದು ಮಠ, ಡಾ.ವಿಜಯಕುಮಾರ ಗೂಳಿ, ಹುಸೇನ್ ಮುಲ್ಲಾ, ಪಿಂಟು ಸಾಲಿಮನಿ , ಸೇರಿದಂತೆ ಹಲವರು ಇದ್ದರು.ಸಂವಿಧಾನ ಅಪಾಯದಲ್ಲಿದೆ: ಸಂವಿಧಾನ ಅಪಾಯದಲ್ಲಿದೆ. ಬಿಜೆಪಿ, ಜೆಡಿಎಸ್ ನವರು ಯಾಕೆ ಎಸ್ಐಆರ್ ಕುರಿತ ಸಭೆ ಮಾಡುತ್ತಿಲ್ಲ, ಜಾಗೃತಿ ಮೂಡಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದವರು ಮಾತ್ರ ಜನಜಾಗೃತಿ ಸಭೆ ನಡೆಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಎಸ್ಐಆರ್ ಕುರಿತು ಕಾಂಗ್ರೆಸ್ ನವರಿಗೆ ಭಯ ಇದೆ. ಕಾಂಗ್ರೆಸ್ ಮತಗಳನ್ನು ತೆಗೆದು ಹಾಕುವ ಬಹುದೊಡ್ಡ ಹುನ್ನಾರ ಇದಾಗಿದೆ ಎಂದು ಸಿ.ಎಸ್. ನಾಡಗೌಡ ದೂರಿದರು.