ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಕಾರವಾರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ತಮ್ಮ ನಿವಾಸದಲ್ಲಿ ಸಂಬಂಧಪಟ್ಟ ಬಿ.ಎಲ್.ಒ ಅವರಿಂದ ಪ್ರಿ ಫಿಲ್ಡ್ ಎನ್ಯೂಮರೇಷನ್ ಫಾರ್ಮ್‌ಗಳನ್ನು ಸ್ವೀಕರಿಸಿ ಮಾತನಾಡಿ, ಬಿಎಲ್‌ಒಗಳು ಮನೆಗೆ ಬಂದು ನೀಡುವ ಎನ್ಯುಮರೇಷನ್ ಫಾರಂ ಅನ್ನು ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ಸಾರ್ವಜನಿಕರು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು. ನಂತರ ಡಿಕ್ಲರೇಷನ್ (ಘೋಷಣೆ) ಓದಿಕೊಂಡು, ಸಹಿ ಹಾಗೂ ದಿನಾಂಕವನ್ನು ನಮೂದಿಸಿ ವಾಪಸ್ ನೀಡಬೇಕು. ಫಾರಂಗಳನ್ನು ಸಂಗ್ರಹಿಸಲು ಅಧಿಕಾರಿಗಳು ನಿಮ್ಮ ಮನೆಗೆ ಮೂರು ಬಾರಿ ಭೇಟಿ ನೀಡಲಿದ್ದಾರೆ. ಒಂದು ವೇಳೆ ಸಂಬಂಧಪಟ್ಟ ವ್ಯಕ್ತಿ ಮನೆಯಲ್ಲಿ ಇಲ್ಲದಿದ್ದರೆ, ಅವರ ಪರವಾಗಿ ಕುಟುಂಬದ ಸದಸ್ಯರು ಅಥವಾ ರಕ್ತಸಂಬಂಧಿಗಳು ಸಹಿ ಮಾಡಿ ಫಾರಂ ನೀಡಬಹುದು ಎಂದರು.

ಸಲ್ಲಿಕೆಯಾದ ಫಾರಂ ಆಧಾರದ ಮೇಲೆ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಇದರಲ್ಲಿ ಹೆಸರು ಇರುವುದನ್ನು ಸಾರ್ವಜನಿಕರು ಖಚಿತಪಡಿಸಿಕೊಳ್ಳಬೇಕು. ಕರಡು ಪಟ್ಟಿಯಲ್ಲಿ ಹೆಸರು ಪರಿಶೀಲಿಸಿದ ಬಳಿಕ, ಹೆಸರು ಸೇರ್ಪಡೆ ಅಥವಾ ಕೈಬಿಡುವಿಕೆ ಇದ್ದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಸಾರ್ವನಿಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಮತದಾರರ ನೆರವು ಕೇಂದ್ರಗಳು ಹಾಗೂ ಬಿಎಲ್‌ಒ ಫೆಸಿಲಿಟೇಶನ್ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಗೊಂದಲ ಅಥವಾ ದೂರುಗಳಿದ್ದಲ್ಲಿ ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆ 1950ಕ್ಕೆ ಸಂಪರ್ಕಿಸಬಹುದು ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ದಿನಕರ ಶೆಟ್ಟಿ, ಶಿವರಾಮ ಹೆಬ್ಬಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಅವರ ನಿವಾಸಗಳಿಗೆ ಬಿಎಲ್‌ಒಗಳು ಮತ್ತು ತಹಸೀಲ್ದಾರ್ ಗಳು ತೆರಳಿ ಎನ್ಯುಮರೇಷನ್ ಫಾರಂ ಗಳನ್ನು ವಿತರಿಸಿ, ಎಸ್.ಐ.ಆರ್. ಪ್ರಕ್ರಿಯೆಗಳ ಬಗ್ಗೆ ವಿವರಿಸಿದರು. ಜಿಲ್ಲೆಯಲ್ಲಿನ ಗಣ್ಯರು, ಶತಾಯುಷಿಗಳು ಸೇರಿದಂತೆ ಪ್ರತಿಯೊಬ್ಬ ಮತದಾರರ ಮನೆಗಳಿಗೆ ಫಾರಂ ಗಳನ್ನು ವಿತರಿಸುವ ಕಾರ್ಯ ಆರಂಭಗೊಂಡಿತು.