ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್‌ಗೆ ₹11.07 ಕೋಟಿ ನಿವ್ವಳ ಲಾಭ

| Published : Sep 16 2025, 12:03 AM IST

ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್‌ಗೆ ₹11.07 ಕೋಟಿ ನಿವ್ವಳ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

25ನೇ ಸಾಲಿನಲ್ಲಿ ₹11.07 ಕೋಟಿ ನಿವ್ವಳ ಲಾಭ ದಾಖಲಿಸಿ ತನ್ನ ಸಾಧನೆಯನ್ನು ಮುಂದುವರಿಸಿದೆ

ಶಿರಸಿ: ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ ಆದ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್‌ 2024-25ನೇ ಸಾಲಿನಲ್ಲಿ ₹11.07 ಕೋಟಿ ನಿವ್ವಳ ಲಾಭ ದಾಖಲಿಸಿ ತನ್ನ ಸಾಧನೆಯನ್ನು ಮುಂದುವರಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಹೇಳಿದರು.

ಅವರು ನಗರದ ರಾಯರಪೇಟೆಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್‌ನ 20024-25ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಬ್ಯಾಂಕ್‌ ತನ್ನ ವ್ಯವಹಾರವನ್ನು ₹2361 ಕೋಟಿ ದಾಖಲಿಸಿ 2024-25ನೇ ಸಾಲಿನಲ್ಲಿ ಹೊಸ ಮೈಲುಗಲ್ಲು ದಾಟಿರುವುದನ್ನು ಸದಸ್ಯರು ಸಭೆಯಲ್ಲಿ ಶ್ಲಾಘಿಸಿದರು.

ಬ್ಯಾಂಕು ಆರ್ಥಿಕ ವರ್ಷದಲ್ಲಿ ತನ್ನ ಠೇವಣಿಯನ್ನು ₹1377.97 ಕೋಟಿಗೆ, ದುಡಿಯುವ ಬಂಡವಾಳವನ್ನು ₹1605.01 ಕೋಟಿಗೆ ಹೆಚ್ಚಿಸುವುದರೊಂದಿಗೆ ₹11.07 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಬ್ಯಾಂಕಿನ ಸದಸ್ಯರ ಸಂಖ್ಯೆ 49,416 ದಾಟಿದ್ದು, ಸಂದಾಯಿತ ಷೇರು ಬಂಡವಾಳ ₹41.32 ಕೋಟಿ ತಲುಪಿದೆ. ಕಳೆದ ವರ್ಷದ ₹116.82 ಕೋಟಿ ಆದಾಯವನ್ನು ₹134.01 ಕೋಟಿಗೆ ಬ್ಯಾಂಕು ಹೆಚ್ಚಿಸಿದೆ. ಬ್ಯಾಂಕು ಕಳೆದ ೫ ವರ್ಷಗಳಲ್ಲಿ ತನ್ನ ವ್ಯವಹಾರವನ್ನು ₹1,361 ಕೋಟಿಯಿಂದ ₹2,361 ಕೋಟಿಗೆ ಅಭಿವೃದ್ಧಿಗೊಳಿಸಿರುವುದು ಬ್ಯಾಂಕು ಸುದೃಢವಾಗಿ ಪ್ರಗತಿಯತ್ತ ಸಾಗುವ ಸಂಕೇತವಾಗಿದೆ ಎಂದರು.

ಬ್ಯಾಂಕು ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಪ್ರಸಕ್ತ ಇರುವ 9 ಜಿಲ್ಲೆಗಳಿಂದ ಸಂಪೂರ್ಣ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸುವುದರ ಕುರಿತು ಅಧ್ಯಕ್ಷ ಜಯದೇವ ನಿಲೇಕಣಿ ಮಾಡಿದ ಪ್ರಸ್ತಾವನೆಗೆ ಸರ್ವಸಾಧಾರಣ ಸಭೆಯಲ್ಲಿ ಹಾಜರಿದ್ದ ಸದಸ್ಯರಿಂದ ಒಮ್ಮತದ ಅನುಮೋದನೆ ದೊರೆತು, ಬ್ಯಾಂಕು ರಾಜ್ಯವ್ಯಾಪಿ ಶಾಖೆಗಳನ್ನು ತೆರೆದು ಬ್ಯಾಂಕಿನ ವ್ಯವಹಾರ ಅಭಿವೃದ್ಧಿ ಹೊಂದುವಂತಾಗಲೆಂದು ಸದಸ್ಯರು ಹಾರೈಸಿದರು. ಸಿಇಒ ಆರತಿ ಎಸ್. ಶೆಟ್ಟರ್‌ ಬ್ಯಾಂಕಿನ ಪ್ರಗತಿಯ ಕುರಿತು ಸ್ತೂಲ ಚಿತ್ರಣ ಸಭೆಗೆ ನೀಡಿದರು. ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ದೀಪಕ ಪ್ರಭು, ಸುರೇಶ ಶೇಟ್, ಗಜಾನನ ಐಗಳ, ಚಂದ್ರಕಾಂತ ಗೌಡ ಅವರನ್ನು ಸನ್ಮಾನಿಸಿದರು.

ವಾರ್ಷಿಕ ಸರ್ವಸಾಧಾರಣ ಸಭೆಯ ಅಂಗವಾಗಿ ಪ್ರತಿ ವರ್ಷದಂತೆ ಬ್ಯಾಂಕಿನ ಹಿರಿಯ ಸದಸ್ಯರಾದ ವಸಂತ ನಾಗು ನೇತ್ರೆಕರ್, ರಾಧಾಬಾಯಿ ಗೋಪಾಲಕೃಷ್ಣ ಮೆಣಸಿ, ದಾಮೋದರ ವಾಸುದೇವ ಭಟ್, ಪ್ರಕಾಶ ಷಣ್ಮುಖ ಬಂಗ್ಲೆ, ವಾಮನ ಗಜಾನನ ನಾಡಿಗ ಹಾಗೂ ಮಹಾಬಲೇಶ್ವರ ವೆಂಕಟ್ರಮಣ ಭಟ್ ಕಕ್ಕೋಡ ಅವರನ್ನು ಬ್ಯಾಂಕಿನ ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಸನ್ಮಾನಿಸಿ ಗೌರವಿಸಿದರು.

ಬ್ಯಾಂಕಿನ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕುರಿತು 2024-25ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ಹಾಗೂ ಪದವಿ/ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ವಿಶ್ವವಿದ್ಯಾಲಯಕ್ಕೆ ರ‍್ಯಾಂಕ್ ಪಡೆದ ಬ್ಯಾಂಕಿನ ಸದಸ್ಯರ 77 ಮಕ್ಕಳಿಗೆ ವಾರ್ಷಿಕ ಸರ್ವಸಾಧಾರಣ ಸಭೆಯ ಅಂಗವಾಗಿ ₹3,08,000 ಮೊತ್ತದ ಪ್ರತಿಭಾ ಪುರಸ್ಕಾರ ನೀಡುವುದರೊಂದಿಗೆ ಗೌರವಿಸಲಾಯಿತು.

ಉಪಾಧ್ಯಕ್ಷ ಸಂತೋಷ ಪಂಡಿತ, ನಿರ್ದೇಶಕ ಮಂಡಳಿಯ ಸದಸ್ಯರು ಇದ್ದರು. ಬ್ಯಾಂಕಿನ ನಿರ್ದೇಶಕ ಸದಾನಂದ ನಾಯ್ಕ ವಂದಿಸಿದರು.