ಸಾರಾಂಶ
ಗದಗ: 12ನೇ ಶತಮಾನದಲ್ಲಿ ಬಸವಾದಿ ಶರಣರಿಂದ ರೂಪುಗೊಂಡ ಲಿಂಗಾಯತ ಧರ್ಮಕ್ಕೆ ಅಂದಿನಿಂದ ಇಂದಿನ ದಿನಮಾನಗಳವರೆಗೂ ಅನೇಕ ಶರಣರು ತಮ್ಮದೇ ಆದ ಸೇವೆಗಳ ಮೂಲಕ ಧರ್ಮ ಜ್ಞಾನದ ಬೆಳಕು ಈ ಜಗವ ಬೆಳಗುವಂತೆ ಮಾಡಿದ್ದಾರೆ. ಅಂಥವರಲ್ಲಿ ಅಕ್ಕ ಅನ್ನಪೂರ್ಣ ತಾಯಿಯವರು ಒಬ್ಬರು ಎಂದು ಬಸವತತ್ವ ಚಿಂತಕಿ ಗೌರಕ್ಕ ಬಡಿಗಣ್ಣವರ ಹೇಳಿದರು.
ಅವರು ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಬಸವದಳದ 1647ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಬಸವತತ್ವ ಪ್ರಸಾರದಲ್ಲಿ ಡಾ. ಅಕ್ಕಅನ್ನಪೂರ್ಣ ತಾಯಿ ಒಂದು ನೆನಪು ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಮಾತನಾಡಿದರು.ಅವರ ಬಸವ ನಿಷ್ಠೆಯೇ ಹಾಗೆ ತಮ್ಮ ಶ್ರದ್ಧಾಪೂರ್ಣ ಕೆಲಸಗಳಿಂದಲೇ ಅವರು ಧರ್ಮ ಸೇವೆ ಗೈದವರು. ಬಸವತತ್ವ ಪ್ರಸಾರ, ಪ್ರವಚನ, ಸಂಘಟನೆಯ ಮೂಲಕ ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸಿದರು, ಪ್ರವಚನ ಪಿತಾಮಹ ಪೂ. ಲಿಂಗಾನಂದ ಸ್ವಾಮೀಜಿ ಹಾಗೂ ಪೂ. ಮಾತೆ ಮಹಾದೇವಿಯವರ ಶಿಷ್ಯತ್ವ ಹೊಂದಿ ಅವರ ಮಾರ್ಗದರ್ಶನದಲ್ಲಿ ಸಾಗಿದವರು.
ಅಕ್ಕ ಅನ್ನಪೂರ್ಣ ಅವರು, ಬೀದರಿನಲ್ಲಿ ಶರಣ ಉದ್ಯಾನವನ, ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾಮಠ, ನೀಲಮ್ಮನ ಬಳಗ, ಲಿಂಗಾಯತ ಸೇವಾದಳ ಮುಂತಾದ ಸಂಘಟನೆಗಳ ಮೂಲಕ ಬಸವತತ್ವ ಪ್ರಸರಿಸಿದರು. ಪ್ರತಿವರ್ಷ ವಚನ ವಿಜಯೋತ್ಸವ ಕಲ್ಯಾಣ ಕ್ರಾಂತಿಯ ವಿಜಯೋತ್ಸವವು ರಾಜ್ಯದ ತುಂಬಾ ಮನೆ ಮಾತಾಗಿದೆ. ಹೀಗೆ ಲಿಂಗಾಯತ ಧರ್ಮಕ್ಕೆ ಅವರ ಸೇವೆ ಸಲ್ಲುತ್ತಿದ್ದ ವೇಳೆಯಲ್ಲೇ ಫಲ ಪಕ್ವಗೊಂಡು ತೊಟ್ಟು ಕಳಚಿ ಧರೆ ಸೇರುವಂತೆ ಅವರು ಲಿಂಗಯ್ಯನಲ್ಲಿ ಅಡಕರಾದರು. ಅವರ ಅಗಲಿಕೆ ಬಸವತತ್ವ ಪ್ರಸಾರಕ್ಕೊಂದು ದೊಡ್ಡ ಪೆಟ್ಟು, ಬಸವಾನುಯಾಯಿಗಳಿಗೆ ತುಂಬಾ ನೋವನ್ನುಂಟು ಮಾಡಿದೆ ಎಂದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಸಿಬಿಎಸ್ನಲ್ಲಿ ಶೇ. 85ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾದ ಚಿನ್ಮಯಿ ಕರೇಗೌಡ್ರ ಅವರನ್ನ ಸನ್ಮಾನಿಸಲಾಯಿತು. ವಿಜಯಲಕ್ಷ್ಮೀ ಗೌಡಪ್ಪಗೌಡ ಪಾಟೀಲ ಹಾಗೂ ರತ್ನಕ್ಕ ಎಂ.ಅಂಗಡಿ ಅವರು ಬಸವದಳದ ಕಟ್ಟಡಕ್ಕೆ ಧನ ದಾಸೋಹ ನೀಡಿದರು.ಅಧ್ಯಕ್ಷತೆ ವಹಿಸಿದ ವಿ.ಕೆ. ಕರೇಗೌಡ್ರ ಮಾತನಾಡಿದರು. ಶಿಕ್ಷಕ ಕಳಕಪ್ಪ ವ್ಯಾಪಾರಿ, ಮಾಲತೇಶ ವಿ. ಕರೇಗೌಡ್ರ ಸೇರಿದಂತೆ ಬಸವದಳ ಶರಣ ಬಂಧುಗಳು ಇದ್ದರು. ಪ್ರಸಾದ ಸೇವೆಯನ್ನು ಕರೇಗೌಡ್ರ ಕುಟುಂಬದವರು ವಹಿಸಿದ್ದರು. ಗಂಗಮ್ಮ ಹೂಗಾರ ಪ್ರಾರ್ಥಿಸಿದರು. ಮೃತ್ಯುಂಜಯ ಜಿನಗಾ ಸ್ವಾಗತಿಸಿದರು. ರಾಮಣ್ಣ ಕಳ್ಳಿಮನಿ ನಿರೂಪಿಸಿದರು. ಪ್ರಕಾಶ ಅಸುಂಡಿ ವಂದಿಸಿದರು.