ನಿಡಗುಂದಿ: ವರಮಹಾಲಕ್ಷ್ಮಿ ಪೂಜೆಗೆ ನೀರು ತರಲು ತೆರಳಿದ್ದ ಇಬ್ಬರು ಸಹೋದರಿಯರು ಬಾವಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಿಡಗುಂದಿ ತಾಲೂಕಿನ ಮುದ್ದಾಪೂರ ಗ್ರಾಮದ ತೋಟದ ವಸ್ತಿಯಲ್ಲಿ ಶುಕ್ರವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ನಿಡಗುಂದಿ

ವರಮಹಾಲಕ್ಷ್ಮಿ ಪೂಜೆಗೆ ನೀರು ತರಲು ತೆರಳಿದ್ದ ಇಬ್ಬರು ಸಹೋದರಿಯರು ಬಾವಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಿಡಗುಂದಿ ತಾಲೂಕಿನ ಮುದ್ದಾಪೂರ ಗ್ರಾಮದ ತೋಟದ ವಸ್ತಿಯಲ್ಲಿ ಶುಕ್ರವಾರ ನಡೆದಿದೆ. ರಕ್ಷಿತಾ ಸಾಬಣ್ಣ ಬರಗಿ (15) ಹಾಗೂ ಸಾಕ್ಷಿ ಸಾಬಣ್ಣ ಬರಗಿ (10) ಮೃತರು.

ಕೊಲ್ಹಾರ ಪಟ್ಟಣ ಮೂಲದ ಲಕ್ಷ್ಮಿಬಾಯಿ ಹಾಗೂ ಸಾಬಣ್ಣ ಬರಗಿ ದಂಪತಿ ಮುದ್ದಾಪೂರ ಸೀಮೆಯಲ್ಲಿ ಜಮೀನು ಖರೀದಿಸಿ ಕೃಷಿ ಮಾಡಿಕೊಂಡು ಮಕ್ಕಳೊಂದಿಗೆ ವಾಸವಾಗಿದ್ದರು. ಶುಕ್ರವಾರ ಮಧ್ಯಾಹ್ನ ಪೂಜೆಗೆ ತೆರಳಿದ್ದ ತಾಯಿ, ಇಬ್ಬರು ಮಕ್ಕಳಿಗೆ ನೀರು ತಂದಿಡುವಂತೆ ತಿಳಿಸಿ ಹೋಗಿದ್ದರು. ಮರಳಿ ಬಂದಾಗ ಮಕ್ಕಳು ಕಾಣಿಸದ ಹಿನ್ನೆಲೆ ಹುಡುಕಾಟ ನಡೆಸಿದಾಗ ಸಂಜೆ ಬಾವಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಬಾವಿಯ ಬಳಿ ಸಾಬಣ್ಣ ಅವರ ಲುಂಗಿ ಹಾಗೂ ಟವೆಲ್ ಪತ್ತೆಯಾಗಿದ್ದು, ಅವರು ಸಹ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಶೋಧ ನಡೆಸಿದರೂ ಸಾಬಣ್ಣ ಅವರು ಪತ್ತೆಯಾಗಿಲ್ಲ.

ಬಾಲಕಿಯರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಮಕ್ಕಳ ಸಾವಿನ ಕುರಿತು ಸಂಶಯವಿದೆ ಎಂದು ತಾಯಿ ನಿಡಗುಂದಿ ಠಾಣೆಗೆ ದೂರು ನೀಡಿದ್ದಾರೆ.

ಮುದ್ದಾಪುರ ಗ್ರಾಮದ ಬಾವಿಯೊಂದರಲ್ಲಿನ ನೀರು ತೆಗೆದು ಹುಡುಕಿದಾಗ ನಿನ್ನೆ ಸಂಜೆ ಇಬ್ಬರು ಹೆಣ್ಣುಮಕ್ಕಳ ಮೃತದೇಹ ಪತ್ತೆಯಾಗಿದ್ದು, ಅವರ ತಂದೆ ಸಾಬಣ್ಣ ಬರಗಿಯ ಬಟ್ಟೆಯು ಬಾವಿಯ ಬಳಿ ಸಿಕ್ಕಿದ್ದು, ಆತ ಎಲ್ಲೂ ಪತ್ತೆಯಾಗಿಲ್ಲ. ಈ‌ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಸಾಬಣ್ಣನ ಪತ್ನಿ ಲಕ್ಷ್ಮಿಬಾಯಿ ಮಕ್ಕಳ ಸಾವಿನ ಬಗ್ಗೆ ಅನುಮಾನವಿದೆ ಎಂದು ದೂರು ನೀಡಿದ್ದಾರೆ. ಸಾಬಣ್ಣನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಆತ ಪತ್ತೆಯಾದ ಬಳಿಕ ಸತ್ಯಾಂಶ ಹೊರಬರಲಿದೆ.

- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್.ಪಿ.