ಸಾರಾಂಶ
ಎಸ್ಐಟಿ ತಂಡ ಏನು ನೋಟಿಸ್ ಅಂಟಿಸಿದ್ದಾರೆ ಅಂತ ತಿಳಿದು ಬಂದಿದೆ. ನಾನು ಎಸ್ಐಟಿ ಅಥವಾ ಇನ್ಯಾವುದೇ ತನಿಖೆ ಮಾಡಿದರೂ ಎದುರಿಸಲು ಸಿದ್ಧ- ಶಾಸಕ ಎಚ್.ಡಿ.ರೇವಣ್ಣ
ಹೊಳೆನರಸೀಪುರ : ‘ಎಸ್ಐಟಿ ತಂಡ ಏನು ನೋಟಿಸ್ ಅಂಟಿಸಿದ್ದಾರೆ ಅಂತ ತಿಳಿದು ಬಂದಿದೆ. ನಾನು ಎಸ್ಐಟಿ ಅಥವಾ ಇನ್ಯಾವುದೇ ತನಿಖೆ ಮಾಡಿದರೂ ಎದುರಿಸಲು ಸಿದ್ಧ. ಆದರೆ ಯಾವ ದಿನದಂದು ವಿಚಾರಣೆಗೆ ಹಾಜರಾಗಬೇಕು ಎಂದು ಗೊತ್ತಿಲ್ಲ’ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ಪಟ್ಟಣದ ಅವರ ಮನೆಯಲ್ಲಿ ಬುಧವಾರ ಮುಂಜಾನೆ ಸತತ ೩ ಗಂಟೆಗೂ ಹೆಚ್ಚು ಕಾಲ ಹೋಮ ಹವನಾದಿ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬೆಂಗಳೂರಿಗೆ ತೆರಳುವ ಮುನ್ನ ಮಾತನಾಡಿದ ಅವರು, ನೋಟಿಸ್ನ ಸಾರಾಂಶ ಏನೆಂದು ತಿಳಿದುಕೊಂಡು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದರು.
ಸಂಸದ ಪ್ರಜ್ವಲ್ ಅವರ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರ ಪ್ರಕರಣವನ್ನು ಎಸ್ಐಟಿಗೆ ವಹಿಸಿದ ನಂತರ ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಎಸ್ಐಟಿ ತಂಡ ಶಾಸಕ ಎಚ್.ಡಿ.ರೇವಣ್ಣ ಅವರ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದೆ. ಆದರೆ ಮುಂಜಾನೆಯಿಂದಲೇ ಮನೆಯಲ್ಲಿ ಹೋಮ ನಡೆಯುತ್ತಿದ್ದರಿಂದ ಮನೆ ಬಾಗಿಲು ಹಾಗೂ ಮುಂಭಾಗದ ಗೇಟ್ ಅನ್ನು ಬಂದ್ ಮಾಡಲಾಗಿತ್ತು. ಹಾಗಾಗಿ ಎಸ್ಐಟಿ ತಂಡದವರು ಗೇಟ್ ಪಕ್ಕದ ಕಾಂಪೌಂಡಿಗೆ ನೋಟಿಸ್ ಅಂಟಿಸಿ ಹೋಗಿದ್ದರು. ನೋಟಿಸ್ ಅಂಟಿಸಿದ ಕೆಲವೇ ಕ್ಷಣಗಳಲ್ಲಿ ಮನೆ ಕೆಲಸದವರು ಆ ನೋಟಿಸನ್ನು ಹರಿದು ಬಿಸಾಡಿದ್ದಾರೆ.
ಎಸ್ಐಟಿ ತಂಡವು ಐದಾರು ಸಂತ್ರಸ್ತ ಮಹಿಳೆಯರನ್ನು ವಿಚಾರಣೆ ಮಾಡಿದ್ದು, ಪ್ರಕರಣ ಸಂಬಂಧ ಪಟ್ಟಣದಲ್ಲಿ ಶಾಸಕರ ಮನೆಯಲ್ಲಿ ಸ್ಥಳ ಮಹಜರು ನಡೆಸಲು ಎಸ್ಐಟಿ ತಂಡ ಆಗಮಿಸಲಿದೆ ಎಂದು ತಿಳಿದು ಬಂದಿತ್ತು, ಇದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.