ಸಾರಾಂಶ
ಲೈಂಗಿಕ ಸಂತ್ರಸ್ತೆ ದೂರಿನನ್ವಯ ಸ್ಥಳಕ್ಕೆ ಮಾಜಿ ಸಂಸದನ ಜತೆ ಬಂದ ಎಸ್ಐಟಿ । ಡಿಆರ್ ವ್ಯಾನಿನಲ್ಲಿ ಮಲಗಿಸಿಕೊಂಡು ಪ್ರಯಾಣ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದಲ್ಲಿರುವ ಶಾಸಕ ಎಚ್.ಡಿ.ರೇವಣ್ಣ ಮನೆಗೆ ಶನಿವಾರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ಅವರನ್ನು ಎಸ್ಐಟಿ ಅಧಿಕಾರಿಗಳ ತಂಡ ಸ್ಥಳ ಮಹಜರು ಸಲುವಾಗಿ ಕರೆತಂದರು.
ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಸಂತ್ರಸ್ತ ಮಹಿಳೆಯೊಬ್ಬರು ಏ.೨೮ ರಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಹಿನ್ನಲೆಯಲ್ಲಿ ಮೇ ೪ ರಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ ಸ್ಥಳಗಳಲ್ಲಿ ಮಹಜರು ನಡೆಸಿದ್ದರು. ಮೇ ೧೩ ಹಾಗೂ ಮೇ ೨೮ ರಂದು ಸಹ ಎಸ್ಐಟಿ ಅಧಿಕಾರಿಗಳ ತಂಡ ಶಾಸಕ ಎಚ್.ಡಿ.ರೇವಣ್ಣ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ಲೋಕಸಭಾ ಚುನಾವಣೆಯ ನಂತರ ಕಾಣೆಯಾಗಿದ್ದರು. ಮೇ ೩೦ ರಂದು ಎಸ್ಐಟಿ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಸಂಸದ ಪ್ರಜ್ವಲ್ ಅವರನ್ನು ಬಂಧಿಸಿದ್ದರು. ಮಾಜಿ ಸಂಸದ ಪ್ರಜ್ವಲ್ ಬಂಧಿಸಿದ ನಂತರ ತನಿಖೆ ಪ್ರಾರಂಭಿಸಿದ ಎಸ್ಐಟಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ೪೧ ದಿನಗಳ ಬಳಿಕ ಪಟ್ಟಣದಲ್ಲಿ ಇರುವ ಶಾಸಕ ಎಚ್.ಡಿ.ರೇವಣ್ಣ ಅವರ ಮನೆಗೆ ಸ್ಥಳ ಮಹಜರು ಸಲುವಾಗಿ ಮಾಜಿ ಸಂಸದ ಪ್ರಜ್ವಲ್ರನ್ನು ಕರೆತಂದರು.
ಡಿವೈಎಸ್ಪಿ ಸತ್ಯನಾರಾಯಣ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಆಗಮಿಸಿದ ಎಸ್ಐಟಿ ಅಧಿಕಾರಿಗಳು, ಮೀಸಲು ಪೊಲೀಸ್ ಪಡೆ ವಾಹನದಲ್ಲಿ ಕೆಲವು ಸಿಬ್ಬಂದಿ ಹಾಗೂ ಮಾಜಿ ಸಂಸದ ಪ್ರಜ್ವಲ್ರನ್ನು ಮಲಗಿದ ಸ್ಥಿತಿಯಲ್ಲಿ ಕರೆತಂದರು. ಎಫ್ಎಸ್ಎಲ್ ಅಧಿಕಾರಿಗಳು ಇದ್ದರು. ಪಟ್ಟಣದ ಪೊಲೀಸರು, ಮಾಜಿ ಸಂಸದ ಪ್ರಜ್ವಲ್ ಹೇಳಿಕೆ ಹಾಗೂ ಸ್ಥಳ ಮಹಜರು ದಾಖಲಿಸಿಕೊಳ್ಳಲು ಸಿಪಿಯು, ಮಾನಿಟರ್, ಪ್ರಿಂಟರ್ ಕೊಂಡೊಯ್ದು, ಅಗತ್ಯ ವ್ಯವಸ್ಥೆ ಮಾಡಿದ್ದರು. ಜತೆಗೆ ಎಸ್ಐಟಿ ಅಧಿಕಾಶರಿಯೊಬ್ಬರು ವಿಡಿಯೊ ಚಿತ್ರಕರಣ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.ಎಎಸ್ಪಿ ವೆಂಕಟೇಶ್ ನಾಯ್ಡು ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ನೇತೃತ್ವದಲ್ಲಿ ೩ ಪಿಎಸ್ಸೈಗಳು, ೩ ಎಎಸ್ಸೈ, ಪೊಲೀಸ್ ಸಿಬ್ಬಂದಿ ಹಾಗೂ ಮೀಸಲು ತುಕುಡಿ ಇತ್ತು.
ಗುಂಪು, ಗದ್ದಲ ತಪ್ಪಿಸಲು ವ್ಯಾನಿನಲ್ಲಿ ಮಲಗಿದ ಸ್ಥಿತಿಯಲ್ಲಿ ಪ್ರಜ್ವಲ್ಲೋಕಸಭಾ ಚುನಾವಣೆಯ ಮತದಾನದ ನಂತರ ವಿದೇಶಕ್ಕೆ ಪರಾರಿಯಾಗಿದ್ದ ಪ್ರಜ್ವಲ್ ವಾಪಸ್ ಬಂದ ನಂತರ ಬಂಧಿಸಿದ ಎಸ್ಐಟಿ ಇದೇ ಮೊದಲ ಬಾರಿಗೆ ಸ್ಥಳ ಮಹಜರ್ ನಡೆಸಲು ಪ್ರಜ್ವಲ್ರನ್ನು ತವರಿಗೆ ಕರೆತರಬೇಕಿತ್ತು. ಪ್ರಜ್ವಲ್ ಕಂಡ ವೇಳೆ ಅವರ ಪಕ್ಷದ ಬೆಂಬಲಿಗರು ಅಥವಾ ಸಾರ್ವಜನಿಕರು ಗುಂಪುಗೂಡಿ ಅನಾಹುತ ಸಂಭವಿಸಬಹುದು ಎನ್ನುವ ಕಾರಣಕ್ಕಾಗಿ ಪ್ರಜ್ವಲ್ರನ್ನು ಪೊಲೀಸ್ ವ್ಯಾನಿನಲ್ಲಿ ಕಿಟಕಿಗಳಿಗೆ ಮರೆ ಮಾಡಿ, ಪ್ರಜ್ವಲ್ ಮಲಗಿದ ಸ್ಥಿತಿಯಲ್ಲಿ ಹೊಳೆನರಪುರದ ಎಚ್.ಡಿ.ರೇವಣ್ಣ ನಿವಾಸಕ್ಕೆ ಕರೆತರಲಾಯಿತು ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ.
ಬೆಳಿಗ್ಗೆಯಿಂದಲೇ ರೇವಣ್ಣ ಮನೆ ಮುಂದೆ ಹಾಗೂ ಕಾಂಪೌಂಡ್ ಒಳಗೆ ಹಲವು ಪೊಲೀಸ್ ವಾಹನಗಳು ಹಾಗೂ ಅಪಾರ ಪೊಲೀಸ್ ಸಿಬ್ಬಂದಿ ಇದ್ದರು. ಮಾಧ್ಯಮದವರನ್ನೂ ಕೂಡ ಗೇಟಿನೊಳಕ್ಕೆ ಸೇರಿಸಿರಲಿಲ್ಲ. ಹಾಗಾಗಿ ಪ್ರಜ್ವಲ್ರನ್ನು ಜೀಪಿನಲ್ಲಿ ಕರೆತರುವ ದೃಶ್ಯ ಚಿತ್ರೀಕರಿಸಲಿಕ್ಕಾಗಿ ಮಾಧ್ಯಮದವರು ಗೇಟಿನ ಮುಂದಿನ ರಸ್ತೆಯಲ್ಲಿ ಕಾದು ಕುಳಿತಿದ್ದರು. ಆದರೆ, ಬೆಳಗಿನಿಂದ ಕಾಂಪೌಂಡ್ ಒಳಕ್ಕೆ ಹಲವು ಪೊಲೀಸ್ ವಾಹನಗಳು ಹೋಗಿಬಂದಂತೆಯೇ ಸಶಸ್ತ್ರ ಮೀಸಲು ಪಡೆಯ ನೀಲಿ ಬಣ್ಣದ ಪೊಲೀಸ್ ವ್ಯಾನೊಂದು ಹೋಯಿತು. ಆದರೆ, ಅದರೊಳಗೆ ಪ್ರಜ್ವಲ್ ಇರುವುದು ಯಾರ ಗಮನಕ್ಕೂ ಬರಲೇ ಇಲ್ಲ. ಆದರೆ, ಒಳಹೋದ ವ್ಯಾನಿನಿಂದ ಪ್ರಜ್ವಲ್ ಇಳಿದ ನಂತರವೇ ಆ ವ್ಯಾನಿನಲ್ಲಿ ಪ್ರಜ್ವಲ್ ಇದ್ದುದನ್ನು ಕಂಡು ಆತುರಾತುರವಾಗಿಯೇ ಚಿತ್ರೀಕರಿಸಲು ಮಾಧ್ಯಮದವರು ಮುಗಿಬಿದ್ದರು.