ಚಿಕ್ಕಮಗಳೂರುಬಡವರ ಆಧಾರ್‌, ಪಾನ್‌ ಕಾರ್ಡ್‌ ಬಳಸಿಕೊಂಡು ಕೋಟ್ಯಾಂತರ ರು. ಅಕ್ರಮ ಹಣ ವರ್ಗಾವಣೆ ಸಂಬಂಧಿಸಿ ದಂತೆ ಏಳು ಮಂದಿ ವಿರುದ್ಧ ಚಿಕ್ಕಮಗಳೂರು ಸೈನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ.

ಶಂಕರಪುರ ನಿವಾಸಿ ಆಟೋ ಚಾಲಕ ಸೇರಿದಂತೆ ಒಟ್ಟು ಆರು ಮಂದಿಯಿಂದ ದೂರು ದಾಖಲು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಡವರ ಆಧಾರ್‌, ಪಾನ್‌ ಕಾರ್ಡ್‌ ಬಳಸಿಕೊಂಡು ಕೋಟ್ಯಾಂತರ ರು. ಅಕ್ರಮ ಹಣ ವರ್ಗಾವಣೆ ಸಂಬಂಧಿಸಿ ದಂತೆ ಏಳು ಮಂದಿ ವಿರುದ್ಧ ಚಿಕ್ಕಮಗಳೂರು ಸೈನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ.

ಪ್ರಶಾಂತ್‌, ರಾಹುಲ್‌, ಸಂಜಯ್‌, ಅಸ್ಲಂ, ಚೇತನ್‌, ಶರತ್‌ ಹಾಗೂ ಖಾಸಗಿ ಬ್ಯಾಂಕ್‌ ಉದ್ಯೋಗಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಎಲ್ಲ ಆರೋಪಿಗಳು ಚಿಕ್ಕಮಗಳೂರಿನವರೇ ಆಗಿದ್ದಾರೆ.

ಶಂಕರಪುರ ನಿವಾಸಿ ಆಟೋ ಚಾಲಕ ಎನ್‌.ಆನಂದ್‌ ಸೇರಿದಂತೆ ಒಟ್ಟು ಆರು ಮಂದಿ ಸೇರಿ ದೂರು ದಾಖಲಿಸಿದ್ದಾರೆ.

ಖಾತೆ ತೆರೆಯಲು ಸಾವಿರ, ಉಚಿತ ಸಾಲದ ಆಮಿಷ

2023ರಲ್ಲಿ ಆರೋಪಿಗಳು ಬಡವರಿಗೆ ಖಾತೆ ತೆರೆದರೆ ₹1 ಸಾವಿರ ನೀಡಲಾಗುತ್ತದೆ. ಜತೆಗೆ, ಉಚಿತ ಸಾಲ ದೊರೆಯಲಿದೆ ಎಂದು ನಂಬಿಸಿ, ಖಾಸಗಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವಂತೆ ಹೇಳಿ ದಾಖಲೆಗಳು ಮತ್ತು ಸಹಿಗಳನ್ನು ಪಡೆದುಕೊಂಡಿದ್ದರು. ನಂತರ ಖಾತೆ ಪಾಸ್‌ಬುಕ್, ಎಟಿಎಂ ಕಾರ್ಡ್ ಹಾಗೂ ಚೆಕ್‌ಬುಕ್‌ಗಳನ್ನು ಖಾತೆದಾರರಿಗೆ ನೀಡದೆ ತಮ್ಮ ಬಳಿಯೇ ಇಟ್ಟು ಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಇತ್ತೀಚೆಗೆ ತಮ್ಮ ಹೆಸರಿನ ಬ್ಯಾಂಕ್ ಖಾತೆಗಳಲ್ಲಿ ತಮಗೆ ತಿಳಿಯದಂತೆ ಲಕ್ಷಾಂತರ ರು. ಹಣದ ವ್ಯವಹಾರ ನಡೆದಿರುವುದು ಹಾಗೂ ವಿವಿಧ ರಾಜ್ಯಗಳಲ್ಲಿ ಸೈಬರ್ ಸಹಾಯವಾಣಿ 1930 ಮೂಲಕ ದೂರುಗಳು ದಾಖಲಾಗಿರುವ ಮಾಹಿತಿ ತಿಳಿದ ಬಳಿಕ ಬ್ಯಾಂಕ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಅಕ್ರಮ ವ್ಯವಹಾರ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಚಿಕ್ಕಮಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

-- ಬಾಕ್ಸ್‌--

ಪ್ರಕರಣದಲ್ಲಿ ಜೆಡಿಎಸ್‌ ಮುಖಂಡನ ಹೆಸರು

ಪ್ರಕರಣದಲ್ಲಿ ಆರೋಪಿಗಳ ಪೈಕಿ ಕೆಲವರು ಚಿಕ್ಕಮಗಳೂರು ನಗರ ಸಭೆಯ ಜೆಡಿಎಸ್ ಸದಸ್ಯನೊಬ್ಬನ ಸಂಬಂಧಿಗಳಿದ್ದಾರೆ. ಹೀಗಾಗಿ, ಜೆಡಿಎಸ್‌ ಸದಸ್ಯನ ಹೆಸರು ಪ್ರಕರಣದೊಂದಿಗೆ ತಳಕು ಹಾಕಿಕೊಂಡಿದೆ. ಬಂಧಿತ ಆರೋಪಿಗಳು ಸಹ ಜೆಡಿಎಸ್‌ ಸದಸ್ಯರ ಹೆಸರು ಹೇಳಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.

---ಕೋಟ್‌---

ಬಡವರ ಆಧಾರ್‌ , ಪಾನ್‌ ಕಾರ್ಡ್‌ ಬಳಕೆ ಮಾಡಿಕೊಂಡು ಅಕ್ರಮವಾಗಿ ಹಣ ವರ್ಗಾವಣೆ ಬಗ್ಗೆ ಸೈನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಆರು ಮಂದಿ ಬಂಧಿಸಲಾಗಿದ್ದು, ಬುಧವಾರ ಠಾಣೆಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸುತ್ತೇನೆ.

- ಜಿತೇಂದ್ರ ಕುಮಾರ್ ದಯಾಮ, ಎಸ್ಪಿ, ಚಿಕ್ಕಮಗಳೂರು

-- ಬಾಕ್ಸ್‌--

ಕ್ರಿಕೆಟ್‌ ಮ್ಯಾಚ್‌ ಬೆಟ್ಟಿಂಗ್‌ ಆ್ಯಪ್‌ 90 ಸಾವಿರ ಖೋತಾ

ಫೇಸ್‌ ಬುಕ್‌ ನಲ್ಲಿ ಬಂದ ಲಾರ್ಡ್‌ 555 ಎಂಬ ಆ್ಯಪ್‌ ಮೂಲಕ ಬೆಟ್ಟಿಂಗ್‌ ಆಡಿ ಹಚ್ಚಿನ ಲಾಭ ಗಳಿಸಬಹುದು ಎಂಬ ಜಾಹೀರಾತು ನೀಡಿ, ಮೊಬೈಲ್‌ನಲ್ಲಿ ಲಾರ್ಡ್‌ 555 ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಂಡು ₹10 ಸಾವಿರ ಹೂಡಿಕೆ ಮಾಡಲಾಗಿತ್ತು. ಆ್ಯಪ್‌ಗೆ ಮೊಬೈಲ್‌ ನಂಬರ್‌ ಲಿಂಕ್‌ ಆಗಿದ್ದರಿಂದ ಬೇರೆ ಬೇರೆ ಖಾತೆಯಿಂದ ಎರಡು ಬಾರಿ ಒಟ್ಟು ₹90 ಸಾವಿರ ವರ್ಗಾವಣೆ ಆಗಿದೆ ಎಂದು ಚಿಕ್ಕಮಗಳೂರು ಸೈನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.