ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸ್ಕೇಟಿಂಗ್ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮ ಕ್ರೀಡೆಯಾಗಿದೆ ಎಂದು ಕ್ರೀಡಾಪಟು ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.

ನಗರದ ಮರಿಯಾಲ- ಮೈಸೂರು ರಸ್ತೆಯಲ್ಲಿರುವ ಅಂಕುರ್ ಗ್ಲೋಬಲ್ ಅಕಾಡೆಮಿ ಶಾಲೆಯಲ್ಲಿ ಚಾಮರಾಜನಗರ ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಷನ್, ಅಂಕುರ್ ಗ್ಲೋಬಲ್ ಅಕಾಡೆಮಿ ವತಿಯಿಂದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಸ್ಕೇಟಿಂಗ್ ಕೇವಲ ಒಂದು ಮೋಜಿನ ಆಟವಲ್ಲ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮ ಕ್ರೀಡೆಯಾಗಿದೆ. ಇದು ದೇಹದ ಸಮತೋಲನವನ್ನು ಹೆಚ್ಚಿಸುತ್ತದೆ, ಹೃದಯದ ಆರೋಗ್ಯ ಸುಧಾರಿಸುತ್ತದೆ ಎಂದರು.

ಅಂಕುರ್ ಗ್ಲೋಬಲ್ ಅಕಾಡೆಮಿ ಶಿಕ್ಷಣದ ಜೊತೆಗೆ ಕ್ರೀಡೆಗೆ ಒತ್ತು ನೀಡಿರುವುದು ಸಂತಸವಾಗಿದೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸ್ಕೇಟಿಂಗ್ ಅಂಕಣ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಒಂದು ಸುಸಜ್ಜಿತ ಕ್ರೀಡಾಂಗಣ ಆಗಲಿದೆ. ಇದಕ್ಕೆ ಕಾರಣವಾದ ಸರ್ಕಾರ, ಜಿಲ್ಲಾಡಳಿತ, ಜಿಲ್ಲೆಯ ಶಾಸಕರು, ಅಧಿಕಾರಿಗಳಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಅಂಕುರ್ ಗ್ಲೋಬಲ್ ಅಕಾಡೆಮಿ ಅಧ್ಯಕ್ಷ ಆದರ್ಶ ಅರಸ್, ಸಿಇಒ ಕನ್ನಿಕಾಶ್ರೀ

, ಪ್ರಾಂಶುಪಾಲರಾದ ಪರಿಮಳಾ ರಾಣಿ, ತರಬೇತುದಾರ ಪುರ್ಖಾನ್, ಅನ್ಸರ್ ಅಲಿಖಾನ್, ತನ್ವೀರ್, ಶಿವಶಂಕರ್, ಮಕ್ಕಳು, ಪೋಷಕರು ಭಾಗವಹಿಸಿದ್ದರು.