ಸಾರಾಂಶ
ಸಂಡೂರು: ಕನ್ನಡ ಸಾಹಿತ್ಯಕ್ಕೆ ಎಸ್.ಎಲ್. ಭೈರಪ್ಪನವರ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಿ. ನಾಗನಗೌಡ ಅಭಿಪ್ರಾಯ ಪಟ್ಟರು.
ಪಟ್ಟಣದ ಬಿಕೆಜಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಿ. ಎಸ್.ಎಲ್. ಭೈರಪ್ಪನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ ಎಸ್.ಎಲ್. ಭೈರಪ್ಪನವರು ಪರ್ವ, ವಂಶವೃಕ್ಷ, ತಬ್ಬಲಿಯು ನೀನಾದೆ ಮನೆ, ನಾಯಿ ನೆರಳು, ಯಾನ, ಮಂದ್ರ ಮೊದಲಾದ ೨೫ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದರು. ಬಾಲ್ಯದಲ್ಲಿ ಕಡುಕಷ್ಟದಲ್ಲಿ ಬೆಳೆದ ಭೈರಪ್ಪನವರು ಸತ್ಯ ಮತ್ತು ಸೌಂದರ್ಯ ಎನ್ನುವ ಸಂಶೋಧನಾ ಕೃತಿ, ಭಿತ್ತಿ ಎನ್ನುವ ಆತ್ಮ ಕಥನ ಸೇರಿದಂತೆ ಹಲವು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದರು ಎಂದರು.
ನಿವೃತ್ತ ಉಪನ್ಯಾಸಕ ಬಸವರಾಜ ಮಸೂತಿ, ಸಿ.ಎಂ. ಶಿಗ್ಗಾವಿ, ಐಕಲ್ ಸಾವಿತ್ರಿ, ಬಣಕಾರ್ ಬಸವರಾಜ್ ಅವರು ತಮ್ಮ ನುಡಿ ನಮನ ಸಲ್ಲಿಸಿ, ಎಸ್.ಎಲ್. ಭೈರಪ್ಪನವರ ಜೀವನ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ವಿವರಿಸಿದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಜಿ. ವೀರೇಶ್, ಮುಖಂಡರಾದ ಚಂದ್ರಶೇಖರಪ್ಪ, ಎಚ್.ಎನ್. ಭೋಸ್ಲೆ, ಷಣ್ಮುಖರಾವ್, ಜಿ.ಕೆ. ನಾಗರಾಜ, ಶ್ರೀನಾಥ್ ಕಾಳೆ, ಮಂಜುನಾಥ, ಶಿವಮೂರ್ತಿಸ್ವಾಮಿ, ಚಂದ್ರಶೇಖರ ಮೇಟಿ, ನೀಲಾಂಬಿಕ, ಮಂಜುನಾಥ್, ಶಿವಮೂರ್ತಿಸ್ವಾಮಿ, ವನಜಾಕ್ಷಿ, ಶಶಿಕಲಾ, ಕುಮಾರಸ್ವಾಮಿ ಮೇಟಿ, ಎಸ್.ಡಿ. ಪ್ರೇಮಲೀಲಾ ಮುಂತಾದವರು ಉಪಸ್ಥಿತರಿದ್ದರು.
ಸಂಡೂರಿನ ಬಿಕೆಜಿ ಕಚೇರಿ ಸಭಾಂಗಣದಲ್ಲಿ ದಿ. ಎಸ್.ಎಲ್. ಭೈರಪ್ಪನವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.