ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನೌಕರನಿಗೆ ಚಪ್ಪಲಿ ಏಟು ನೀಡಿದ ಪ್ರಕರಣ ಇದೀಗ ರಾಜ್ಯ ಲೋಕಾಯುಕ್ತದ ಗಮನಕ್ಕೆ ಬಂದಿದ್ದು, ಚಪ್ಪಲಿ ಏಟು ನೀಡಿದ ರೈತ ಬಸಪ್ಪ ದೊಡ್ಡಮನಿ ಪರವಾಗಿ ಮಾಧ್ಯಮದ ವರದಿಯಾಧರಿಸಿ ಬೆಂಗಳೂರು ಲೋಕಾಯುಕ್ತರು ಸುಮೊಟೊ ಕೇಸ್‌ ದಾಖಲಿಸಿಕೊಂಡಿದ್ದಾರೆ.

20 ವರ್ಷದಿಂದ ಸ್ವಾಧೀನಕ್ಕೊಳಪಟ್ಟ ಭೂಮಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ 2ರ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಆದೇಶದ ಮೇರೆಗೆ ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ.ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 7(2) ಮತ್ತು 9(3)ರ ಅಡಿಯಲ್ಲಿ ದತ್ತವಾದ ಅಧಿಕಾರದ ಮೇರೆಗೆ ದೂರು ದಾಖಲಾಗಿದ್ದು, ನಗರ ಯೋಜನಾ ಸದಸ್ಯ/ಸಹಾಯಕ ಕಾರ್ಯಪಾಲಕ ಅಭಿಯಂತರರು - ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆ ಜಿಲ್ಲೆ ವಿಷಯ ನಿರ್ವಾಹಕರು, ಭೂ ಪರಿಹಾರ ವಿತರಣೆ ಶಾಖೆ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆ, ವಿಶೇಷ ಭೂಸ್ವಾಧೀನ ಅಧಿಕಾರಿ - ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಪುನರ್ವಸತಿ ಅಧಿಕಾರಿ - ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆ, ತಹಶೀಲ್ದಾರ್ ಬಾಗಲಕೋಟೆ ತಾಲೂಕು, ಇವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಆದೇಶ ನೀಡಿದ್ದಾರೆ.ಅಧಿಕಾರಿಗಳಿಗೆ 27-07-2026ರಂದು ವಿಚಾರಣೆಗೆ ಹಾಜರಾಗಲು ನಿರ್ದೇಶನ ನೀಡಿದ್ದಾರೆ.

ಹಿನ್ನಲೆ:

ಬಸಪ್ಪ ದೊಡ್ಡಮನಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕೇಸ್ ವರ್ಕರ್ ನೀಲಕಂಠ ಅಂಕದ ಅವರ ಎದೆ ಮೇಲೆ ಬಟ್ಟೆ ಹಿಡಿದು ಚಪ್ಪಲಿ ಏಟು ನೀಡಿದ್ದ. ಈ ಬಗ್ಗೆ ಬಾಗಲಕೋಟೆ ನವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ ನೀಲಕಂಠ ಅಂಕದ ಅವರು, ನಂತರ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದಲೂ ದೂರು ದಾಖಲಾಗಿತ್ತು. ಬಳಿಕ ರೈತ ಬಸಪ್ಪನನ್ನು ಬಂಧಿಸಿ ನವನಗರ ಪೊಲೀಸರು ಬಿಡುಗಡೆ ಮಾಡಿದ್ದರು.


ಪ್ರತಿಭಟನೆ ಬೆನ್ನಲ್ಲೇ ಸುಮುಟೊ ಕೇಸ್:

ಗುರುವಾರ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟ ಅಧಿಕಾರಿಗಳ ವಿರುದ್ಧ, ದಲಿತ ಸಂಘರ್ಷ ಸಮಿತಿ ಭೀಮವಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಭ್ರಷ್ಟ ಬಿಟಿಡಿಎ ಅಧಿಕಾರಿಗಳ ಮೇಲೆ ಕ್ರಮಕ್ಕೆ ಬಾಗಲಕೋಟೆ ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಯತ್ನ ನಡೆಸಿದ್ದರು. ನಂತರ ಲೋಕಾಯುಕ್ತ ಕಚೇರಿ ಎದುರು ಹೋರಾಟ ನಡೆಸಿದ್ದರು. ಪ್ರತಿಭಟನೆ ಬೆನ್ನಲ್ಲೇ ಸುಮುಟೊ ಕೇಸ್ ದಾಖಲಿಸಿಕೊಂಡ ಲೋಕಾಯುಕ್ತರು ಅಧಿಕಾರಿಗಳಿಗೆ 27-07-2026ರಂದು ವಿಚಾರಣೆಗೆ ಹಾಜರಾಗಲು ನಿರ್ದೇಶನ ನೀಡಿದ್ದಾರೆ.