ಯಾರಿಗೂ ನೋವಾಗದಂತೆ ಎಸ್‌ ಎಂ ಕೃಷ್ಣ ರಾಜಕಾರಣ

| Published : Dec 15 2024, 02:00 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ಮುಖಂಡರು ಎರಡು ನಿಮಿಷ ಮೌನ ಆಚರಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಇ. ಎಚ್. ಲಕ್ಷ್ಮಣ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಎರಡು ಜನ ಸರಳ ಸಜ್ಜನಿಕೆಯ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಮತ್ತು ಎಸ್.ಎಂ. ಕೃಷ್ಣ ಇಬ್ಬರಲ್ಲೂ ಕೂಡ ಒಂದು ರೀತಿಯ ಹೊಂದಾಣಿಕೆ ಇದ್ದವರು. ಯಾವತ್ತು ಕೂಡ ಯಾರಿಗೂ ನೋವಾಗದ ರೀತಿ ರಾಜಕಾರಣ ಮಾಡಿಕೊಂಡವರು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ಮುಖಂಡರು ಎರಡು ನಿಮಿಷ ಮೌನ ಆಚರಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಇ. ಎಚ್. ಲಕ್ಷ್ಮಣ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಎರಡು ಜನ ಸರಳ ಸಜ್ಜನಿಕೆಯ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಮತ್ತು ಎಸ್.ಎಂ. ಕೃಷ್ಣ ಇಬ್ಬರಲ್ಲೂ ಕೂಡ ಒಂದು ರೀತಿಯ ಹೊಂದಾಣಿಕೆ ಇದ್ದವರು. ಯಾವತ್ತು ಕೂಡ ಯಾರಿಗೂ ನೋವಾಗದ ರೀತಿ ರಾಜಕಾರಣ ಮಾಡಿಕೊಂಡವರು. ದೇವೇಗೌಡರು ಮತ್ತು ಇಬ್ಬರೂ ಕೂಡ ಒಂದೇ ಬಾರಿ ಸ್ವತಂತ್ರವಾಗಿ ಗೆದ್ದು ವಿಧಾನಸೌಧಕ್ಕೆ ಹೋದವರು. ಅಲ್ಲಿಂದ ಅವರ ಪಯಣ ತಿರುಗಿ ನೋಡಲೆ ಇಲ್ಲ. ಅವರು ಕೊಟ್ಟ ಕೊಡುಗೆ ಅನೇಕ ಮೈಲಿಗಲ್ಲುಗಳ ಬಿಟ್ಟು ಹೋಗಿದೆ. ಕೆಂಗಲ್‌ ಹನುಮಂತರಾಯ ಕೊಟ್ಟಂತ ಕೊಡುಗೆ ಎಸ್.ಎಂ. ಕೃಷ್ಣ ಅವರು ಎಂದರು.

ರಾಜಕಾರಣದಲ್ಲಿ ಅನೇಕ ಕಷ್ಟ ಅನುಭವಿಸಿದವರು. ಇವರ ಅಧಿಕಾರದಲ್ಲಿ ರಾಜಕುಮಾರ್ ಅಪಹರಣ ಸೇರಿ ಎಲ್ಲಾ ನೋವು ಇದ್ದರೂ ಎಸ್.ಎಂ. ಕೃಷ್ಣ ಅವರು ನಗುನಗುತ ಇದ್ದೇ ಕೆಲಸ ಮಾಡಿದವರು ಎಂದು ಇದೇ ವೇಳೆ ನೆನಪಿಸಿಕೊಂಡರು.

ವಿಧಾನ ಪರಿಷತ್ತು ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಮಾತನಾಡಿ, ಎಸ್.ಎಂ. ಕೃಷ್ಣ ಅವರಿಗೆ ಗೌರವ ಕೊಡುವುದು ನಮ್ಮ ಆದ್ಯ ಕರ್ತವ್ಯ. ಭಾರತ ಕಂಡಂತಹ ಅಪರೂಪದ ರಾಜಕಾರಣಿ, ಅನೇಕ ಪಾಶ್ಚಾತ್ಯ ದೇಶಗಳಿಗೆ ಭೇಟಿ ಕೊಟ್ಟಾಗ ಬೆಂಗಳೂರು ಸಿಲಿಕಾನ್ ಸಿಟಿಯ ಕೊಡುಗೆ ಕೊಟ್ಟ ಕೃಷ್ಣ ಅವರ ಹೆಸರು ಬರುತ್ತದೆ ಎಂದರು.

ಕ್ರಿಯಾಶೀಲ ರಾಜಕಾರಣಿ ಎಂದರೇ ತಪ್ಪಾಗಲಾರದು. ಮಂಡ್ಯದ ಉಪ ಚುನಾವಣೆಯಲ್ಲಿ ಎಸ್.ಎಂ. ಕೃಷ್ಣ ಸಂಸದರಾಗುತ್ತಾರೆ. ದೇವರಾಜ ಅರಸು ಸಿಎಂ ಆದಾಗ ಇವರು ಕೈಗಾರಿಕಾ ಮಂತ್ರಿ ಆಗುತ್ತಾರೆ. ಇವರು ರಾಜಕಾರಣಿಗೆಳಿಗೆ ಆದರ್ಶ ವ್ಯಕ್ತಿ ಎಂದು ಎಸ್.ಎಂ. ಕೃಷ್ಣ ಅವರ ಜೊತೆಗಿನ ದಿನಗಳನ್ನು ನೆನೆದರು.

ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಶಾಸಕ ಬಿ.ವಿ. ಕರೀಗೌಡ, ಎಚ್.ಪಿ.ಮೋಹನ್, ಶಿವಪ್ಪ, ಗೋಪಾಲ್, ವಿಶ್ವನಾಥ್, ಅಶೋಕ್, ಬಾಲಶಂಕರ್, ದೇವಪ್ಪ ಮಲ್ಲಿಗೆವಾಳ್, ರಘು ದಾಸರಕೊಪ್ಪಲು, ಕಡಾಕಡಿ ಫೀರ್‌ ಸಾಹೇಬ್, ಮುನಿಸ್ವಾಮಿ, ಯೂತ್‌ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು, ಇತರರು ಉಪಸ್ಥಿತರಿದ್ದರು.