ಗುಂಡ್ಲುಪೇಟೆ ಬಳಿಯ ಕೈಗಾರಿಕೆಗಳು ತಲೆ ಎತ್ತಬೇಕು ಎಂಬ ಆಶಯದೊಂದಿಗೆ ಗಾರ್ಮೆಂಟ್‌ ಆರಂಭಿಸಬೇಕೆಂದು ನಾನು ಸಹ ಉದ್ಯಮಿಗಳೊಂದಿಗೆ ಮಾತನಾಡಿದ್ದೇನೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ಬಳಿಯ ವೀರನಪುರ ಸಣ್ಣ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೋದ್ಯಮಗಳಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸಲಹೆ ನೀಡಿದರು.ಪಟ್ಟಣದ ಹೊರ ವಲಯದ ಕೆಎಸ್‌ಎಸ್‌ಐಡಿಸಿ ಕೈಗಾರಿಕ ಪ್ರದೇಶದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆಸಿಟಿಯು, ಟೆಕ್ಸಾಸ್‌ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಜೆಡ್‌ಇಡಿ-ಲೀನ್‌ ಯೋಜನೆ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗುಂಡ್ಲುಪೇಟೆ ಬಳಿಯ ಕೈಗಾರಿಕೆಗಳು ತಲೆ ಎತ್ತಬೇಕು ಎಂಬ ಆಶಯದೊಂದಿಗೆ ಗಾರ್ಮೆಂಟ್‌ ಆರಂಭಿಸಬೇಕೆಂದು ನಾನು ಸಹ ಉದ್ಯಮಿಗಳೊಂದಿಗೆ ಮಾತನಾಡಿದ್ದೇನೆ. ಆದರೂ ಮುಂದೆ ಬರುತ್ತಿಲ್ಲ, ಆದರೂ ಗಾರ್ಮೆಂಟ್‌ ಆರಂಭಿಸಬೇಕು ಎಂಬ ಚಿಂತನೆ ಇದೆ. ಎಂಎಸ್‌ಎಂಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್‌ಎಎಂಪಿ) ಯೋಜನೆಯಲ್ಲಿ ಜೆಡ್‌ಇಡಿ- ಲೀನ್‌ ಯೋಜನೆ ಕುರಿತು ಉದ್ಘಾಟನೆಗೊಂಡ ಕಾರ್ಯಾಗಾರದಿಂದ ಕೈಗಾರಿಕೋದ್ಯಮಗಳಿಗೆ ಅನುಕೂಲವಾಗಲಿ ಎಂದರು.

ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೂ ನನ್ನ ಸಹಕಾರ ಇದೆ. ಸ್ಥಳೀಯರಿಗೆ ಉದ್ಯೋಗ ಸಿಕ್ಕರೆ ನೂರಾರು ಕುಟುಂಬಗಳಿಗೆ ಅನುಕೂಲವಾಗಲಿದೆ ಜೊತೆಗೆ ಕೈಗಾರಿಕೆಗಳು ಅಭಿವೃದ್ಧಿ ಹೊಂದಲಿವೆ ಎಂದರು.

ವೀರನಪುರ ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳು ನೀರಿನ ಸಮಸ್ಯೆ ಹೇಳಿಕೊಂಡಿದ್ದನ್ನು ಭಾಷಣದಲ್ಲಿ ಪ್ರತಿಕ್ರಿಯಿಸಿದ ಶಾಸಕರು ಹೆಚ್ಚು ದಂಡ ವಿಧಿಸಿದ್ದರೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ದಂಡ ಕಡಿಮೆ ಮಾಡಿಸಲು ಪ್ರಯತ್ನಿಸುತ್ತೇನೆ ಹಾಗೂ ನೀರಿನ ಸಮಸ್ಯೆಯನ್ನೂ ಬಗೆ ಹರಿಸುವುದಾಗಿ ಭರವಸೆ ಹೇಳಿದರು.

ಎಸ್‌ಬಿಐ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕಿ ಸುರೇಖಾ ಎಂ.ಎನ್ ಮಾತನಾಡಿ, ತಲೂಕಿನಲ್ಲಿ ಹೊಸ ಹೊಸ ಉದ್ಯಮಿಗಳು ಬರಬೇಕು ಎನ್ನುವ ಮುಂದಾಲೋಚನೆಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ವಾರ್ಷಿಕ ನೂರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಾರೆ. ಓದಿದ ವಿದ್ಯಾರ್ಥಿಗಳಿಗೆ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಲ್ಲೂ ಉದ್ಯೋಗ ದೊರಕುತ್ತಿಲ್ಲ. ಹಾಗಾಗಿ ಉದ್ಯಮಿಗಳಾಗುವ ಮೂಲಕ ಜೀವನ ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಾಗಾರದಲ್ಲಿ ಟೆಕ್ಸಾಸ್‌ ಸಿಇಒ ಮತ್ತು ಮುಖ್ಯ ಸಲಹೆಗಾರ ಸಿದ್ದರಾಜು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊರೈರಾಜ್‌, ಕೆಎಸ್‌ಎಫ್‌ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಮೀಳಾ, ಕೆಎಸ್‌ಎಸ್‌ ಐಡಿಸಿ ಸಹಾಯಕ ಪ್ರದಾನ ವ್ಯವಸ್ಥಾಪಕಿ ವೇದಾವತಿ, ಜೆಡ್‌ಇಡಿ-ಲೀನ್‌ ಸಂಪನ್ಮೂಲ ವ್ಯಕ್ತಿ ಜಗದೀಶ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಬಿ.ವಿಜಯಕುಮಾರ್‌ ಹಾಗೂ ಕೈಗಾರಿಕೋದ್ಯಮಿ ಮಂಜುನಾಥ ಸೇರಿದಂತೆ ಹಲವರಿದರು.

ದುಡ್ಡಿದ್ದವರೆಲ್ಲ ಕೈಗಾರಿಕೆ ಸ್ಥಾಪಿಸಲು ಆಗಲ್ಲ:ದುಡ್ಡಿದ್ದವರೆಲ್ಲ ಕೈಗಾರಿಕೆ ಸ್ಥಾಪಿಸಲು ಆಗುವುದಿಲ್ಲ, ಕೌಶಲ್ಯವೂ ಬೇಕು. ನಾನೂ ಕೂಡ ಬಿಸಿನೆಸ್‌ ಮೆನ್! ಉದ್ಯಮಿಯಾಗಿ ನಾನೂ ಉದ್ಯಮವನ್ನು ಗಮನಿಸಿದ್ದೇನೆ. ಜನರ ಮನಸ್ಸಿನಲ್ಲಿರುವಂತೆ ಕೈಗಾರಿಕೆ ನಡೆಸಲು ಕಷ್ಟಗಳಿವೆ.

ಎಚ್.ಎಂ.ಗಣೇಶ್‌ ಪ್ರಸಾದ್‌, ಶಾಸಕ

೪ಜಿಪಿಟಿ೨ಗುಂಡ್ಲುಪೇಟೆಯಲ್ಲಿ ಜೆಡ್‌ಇಡಿ-ಲೀನ್‌ ಯೋಜನೆ ಕುರಿತು ಒಂದು ದಿನದ ಅರಿವು ಕಾರ್ಯಾಗಾರವನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಉದ್ಘಾಟಿಸಿದರು.