ಸಾರಾಂಶ
ಗದಗ: ಈ ಮೊದಲು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನಗಳ ನಿಷೇಧವನ್ನು 21 ವರ್ಷಕ್ಕೆ ಏರಿಸಿ ದಂಡದ ಮೊತ್ತ 1000 ರು ವರೆಗೆ ಹೆಚ್ಚಿಸಲಾಗಿದೆ. ಅದೇ ರೀತಿ ಶಿಕ್ಷಣ ಸಂಸ್ಥೆಗಳ ಸುತ್ತ ತಂಬಾಕು ಮಾರಾಟ ನಿಷೇಧ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಈ ಮೊದಲು 200 ರು. ದಂಡ ವಿಧಿಸಲಾಗುತ್ತಿತ್ತು, ಆದರೆ ತಿದ್ದುಪಡಿಯ ನಂತರ 1000 ರು. ವರೆಗೆ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾರಾಗೃಹ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಥೋಡ್ ಮಾತನಾಡಿ, ಈ ವರ್ಷದ ಘೋಷವಾಕ್ಯದ ಆಕರ್ಷಕ ಉತ್ಪನ್ನಗಳು ಕರಾಳ ಉದ್ದೇಶಗಳು, ತಂಬಾಕು ಮತ್ತು ನಿಕೋಟಿನ್ ಉದ್ಯಮಗಳ ಮುಖವಾಡವನ್ನು ಬಿಚ್ಚಿಡುವದು, ಅಂದರೆ ಮಾರುಕಟ್ಟೆಯಲ್ಲಿ ಆಕರ್ಷಕವಾದ ವಿವಿಧ ಸುಗಂಧಿತ ಹಾಗೂ ಆಕರ್ಷಕ ಪ್ಯಾಕ್ಗಳ ಮೂಲಕ ತಂಬಾಕು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಜನರು ಹೆಚ್ಚು ಆಕರ್ಷಿತರಾಗಿ ವ್ಯಸನಕ್ಕೆ ಬಲಿಯಾಗುವಂತೆ ಮಾಡುವ ಉದ್ಯಮಗಳ ಮುಖವಾಡ ಬಿಚ್ಚಿಡುವುದಾಗಿದೆ. ತಂಬಾಕು ವ್ಯಸನದಿಂದ ಆರೋಗ್ಯ ಮೇಲೆ ಬಹಳಷ್ಟು ದುಷ್ಟರಿಣಾಮಗಳ ಉಂಟಾಗುತ್ತವೆ. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಹಾಗೂ ತಂಬಾಕಿನಲ್ಲಿನ ನಿಕೋಟಿನ್ ಅಂಶ ರಕ್ತನಾಳಗಳಲ್ಲಿ ಸೇರಿ ದೇಹದ ಪ್ರತಿಯೊಂದು ಅಂಗದ ಮೇಲೆ ಪರಿಣಾಮ ಬಿರುತ್ತದೆ. ಈ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮ, ತರಬೇತಿ ಕಾರ್ಯಕ್ರಮ, ಕೋಟ್ಪಾ ದಾಳಿ ಹಮ್ಮಿಕೊಳ್ಳಲಾಗಿದೆ. ತಂಬಾಕು ವ್ಯಸನಿಗಳಿಗೆ ನಮ್ಮ ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆಯ ರೂ.ನಂ 182ರಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ಲಭ್ಯವಿದ್ದು, ಈ ಕೇಂದ್ರದಲ್ಲಿ ಉಚಿತ ಆಪ್ತ ಸಮಾಲೋಚನೆ ಔಷಧೋಪಚಾರ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಎಲ್ಎಡಿಸಿ ಸಹಾಯಕ ಕಾನೂನು ನೆರವು ಅಭಿರಕ್ಷಕ ಜಿ.ಬಿ. ಗೌರಿ ಮಾತನಾಡಿ, ಕಾನೂನುಗಳು ಪರಿಣಾಮಕಾರಿ ಅನುಷ್ಠಾನಕ್ಕೆ ಕೇವಲ ಅಧಿಕಾರಿಗಳ ಪಾತ್ರ ಇರದೆ ಸಾರ್ವಜನಿಕರು ಕಾನೂನಿನ ಬಗ್ಗೆ ಗೌರವ ಪಾಲನೆ ಮಾಡಿದಾಗ ಸುವ್ಯವಸ್ಥಿತ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವೆಂದರು. ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಾರಾಗೃಹ ಅಧೀಕ್ಷಕ ಈರಣ್ಣ ರಂಗಾಪೂರ ಮಾತನಾಡಿದರು.ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ.ಸಂಕದ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿಎಚ್ಒ ಡಾ. ಎಸ್.ಎಸ್.ನೀಲಗುಂದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ್ ಚವಾಣ, ಡಾ. ರವಿ ಕಡಗಾವಿ, ವಿರೇಶ ಮದಕಟ್ಟಿ, ಶಿವಕುಮಾರ ಬಗಾಡೆ ಸೇರಿದಂತೆ ಸಿಬ್ಬಂದಿಗಳು ಹಾಗೂ ಬಂಧಿ ನಿವಾಸಿಗಳು ಇದ್ದರು. ಗೋಪಾಲ ಸುರಪುರ ನಿರೂಪಿಸಿದರು. ಬಿ.ಸಿ.ಚಿತ್ತರಗಿ ಪ್ರಾರ್ಥಿಸಿದರು. ವಿಠ್ಠಲ್ ನಾಯಕ ಸ್ವಾಗತಿಸಿದರು.