ತುಂಡಾದ ವಿದ್ಯುತ್ ತಂತಿ: ತಪ್ಪಿದ ಭಾರೀ ಅನಾಹುತ

| Published : Feb 19 2025, 12:47 AM IST

ಸಾರಾಂಶ

ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಬೆಳಗ್ಗೆ ೭.೪೦ ಸಮಯದಲ್ಲಿ ೧೧ ಕೆವಿ ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ತಕ್ಷಣ ಸಾರ್ವಜನಿಕರು ಎಚ್ಚೆತ್ತು ವಾಹನಗಳನ್ನು ಅಡ್ಡಗಟ್ಟಿದ್ದು ಜನತೆ ಅತ್ತ ಸುಳಿಯದಂತೆ ನೋಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹೈಟೆನ್ಷನ್ ವಿದ್ಯುತ್ ತಂತಿ ತುಂಡಾಗಿ ಬಿದ್ದು ಭಾರೀ ಅನಾಹುತವೊಂದು ತಪ್ಪಿದ ಘಟನೆ ನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ನಗರದ ನೂರಡಿ ರಸ್ತೆಯ ಅಂಬೇಡ್ಕರ್ ವೃತ್ತ (ವಾಟರ ಟ್ಯಾಂಕ್)ದಲ್ಲಿ ಈ ಅವಘಡ ಸಂಭವಿಸಿದ್ದು, ವಿದ್ಯುತ್ ತಂತಿ ಬಿದ್ದ ವೇಳೆ ಯಾವುದೇ ವಾಹನ ಹಾಗೂ ಸಾರ್ವಜನಿಕರ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.

ಮಂಡ್ಯ ಬನ್ನೂರು ಮಾರ್ಗದ ನೂರಡಿ ರಸ್ತೆಯಲ್ಲಿ ವಾಹನ ದಟ್ಟಣೆ ಹಾಗೂ ಜನಸಂದಣಿ ಹೆಚ್ಚಾಗಿದ್ದು, ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಬೆಳಗ್ಗೆ ೭.೪೦ ಸಮಯದಲ್ಲಿ ೧೧ ಕೆವಿ ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ.

ತಕ್ಷಣ ಸಾರ್ವಜನಿಕರು ಎಚ್ಚೆತ್ತು ವಾಹನಗಳನ್ನು ಅಡ್ಡಗಟ್ಟಿದ್ದು ಜನತೆ ಅತ್ತ ಸುಳಿಯದಂತೆ ನೋಡಿಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಚೆಸ್ಕಾಂ ಸಿಬ್ಬಂದಿ ಸುತ್ತಮುತ್ತಲ ಪ್ರದೇಶದ ವಿದ್ಯುತ್ ಕಡಿತ ಮಾಡಿ ಮುನ್ನೆಚ್ಚರಿಕೆ ವಹಿಸಿದ್ದಾರೆ.

ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಕಂಡ ವಾಹನ ಸವಾರರು ಬೆಚ್ಚಿಬಿದ್ದರು. ತುರ್ತಾಗಿ ಸ್ಥಳಕ್ಕೆ ಧಾವಿಸಿದ ಚೆಸ್ಕಾಂ ಸಿಬ್ಬಂದಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ರಸ್ತೆಯ ಪಕ್ಕಕ್ಕೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮುಂದಾಗುವ ಅನಾಹುತ ತಪ್ಪಿದಂತಾಗಿದೆ.

ಅವಘಡದ ವೇಳೆ ವಾಹನ ಹಾಗೂ ಜನ ಸಂಚಾರ ಇದ್ದರೆ ಭಾರೀ ಅನಾಹುತ ಆಗುತ್ತಿತ್ತು, ಹೈ ಟೆನ್ಷನ್ ವಿದ್ಯುತ್ ತಂತಿ ೧೧ ಕೆವಿ ವಿದ್ಯುತ್ ಪೂರೈಸುವ ಸಾಮರ್ಥ್ಯ ಹೊಂದಿದೆ, ಯಾವುದೇ ಅನಾಹುತ ಸಂಭವಿಸದಿರುವುದಕ್ಕೆ ಚೆಸ್ಕಾಂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.