ಸಾಮಾಜಿಕ ಹೋರಾಟಗಾರ ಶ್ರೀಧರಮೂರ್ತಿ ನಿಧನ

| Published : Jun 08 2025, 01:39 AM IST

ಸಾರಾಂಶ

ಇಲ್ಲಿನ ದೇಶಿ ಸೇವಾ ಫೌಂಡೇಶನ್ ಮುಖ್ಯಸ್ಥ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀಧರಮೂರ್ತಿ (೫೨) ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ

ಸಾಗರ: ಇಲ್ಲಿನ ದೇಶಿ ಸೇವಾ ಫೌಂಡೇಶನ್ ಮುಖ್ಯಸ್ಥ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀಧರಮೂರ್ತಿ (೫೨) ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.

ಶ್ರೀಧರಮೂರ್ತಿ ಅವರು ಅನೇಕ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಳೆದ ಕೆಲವು ವರ್ಷಗಳೀಚೆ ದೇಶಿ ಸೇವಾ ಫೌಂಡೇಶನ್ ಪ್ರಾರಂಭಿಸಿ ಅದರ ಮೂಲಕ ತಾಲೂಕಿನಾದ್ಯಂತ ನಡೆಯುತ್ತಿರುವ ಕಳಪೆ ಕಾಮಗಾರಿ, ಕಚೇರಿಗಳಲ್ಲಿನ ಭ್ರಷ್ಟ ವ್ಯವಸ್ಥೆ, ನೊಂದವರಿಗೆ ಸಹಾಯ, ಸಾರ್ವಜನಿಕರಿಗೆ ಸತಾಯಿಸುವ ಅಧಿಕಾರಿ ವರ್ಗದ ವಿರುದ್ದ ಪ್ರತಿಭಟನೆ ನಡೆಸುತ್ತಾ ಬಂದಿದ್ದರು. ರೈತ ಸಂಘಟನೆ ಸೇರಿದಂತೆ ಅನೇಕ ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ತಮ್ಮ ತಂಡದ ಜೊತೆ ಶ್ರೀಧರಮೂರ್ತಿ ಪಾಲ್ಗೊಳ್ಳುತ್ತಿದ್ದರು.

ದೇಶಿ ಸೇವಾ ಟ್ರಸ್ಟ್ ಮೂಲಕ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದ ಗ್ರಾಮೀಣ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆ ವತಿಯಿಂದ ಉಚಿತವಾಗಿ ಕೋಚಿಂಗ್ ಕೊಡಿಸಿ ಅವರು ಎರಡನೇ ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಾಲೂಕಿನ ಬೇರೆ ಬೇರೆ ಭಾಗದಲ್ಲಿ ದೇಶಿ ಸೇವಾ ಟ್ರಸ್ಟ್ ಶಾಖೆಗಳನ್ನು ಪ್ರಾರಂಭಿಸಿ ಸ್ಥಳೀಯ ಯುವಕರನ್ನು ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸಲು ಸ್ಪೂರ್ತಿ ನೀಡಿದ್ದರು.