ಸಾರಾಂಶ
- ಹೊನ್ನಾಳಿಯಲ್ಲಿ ತುಂಗಭದ್ರಾ ಸಾಂಸ್ಕೃತಿಕ-ಕ್ರೀಡಾ ಮನೋರಂಜನಾ ಕ್ಲಬ್ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮನಸ್ಸು ಪ್ರಫುಲ್ಲಗೊಂಡು ಕೆಲವು ಸಮಯ ಕಾಲ ಕಳೆಯಲು ಬರುವ ನೀವು, ಏನೇ ಮಾತನಾಡಿದರೂ ಪರವಾಗಿಲ್ಲ. ಆದರೆ ರಾಜಕೀಯ ಮಾತುಗಳನ್ನು ಮಾತ್ರ ಮಾತನಾಡಬೇಡಿ. ರಿಲಾಕ್ಸ್ಗೆಂದು ಬಂದು ಮನಸ್ಸಿಗೆ ಮತ್ತಷ್ಟು ಘಾಸಿ ಮಾಡಿಕೊಳ್ಳುವುದು ಬೇಡ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ನಗರದ ಕೆಇಬಿ ರಸ್ತೆಯಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಭಾನುವಾರ ಸಮಾನ ಮನಸ್ಕರ ಆಶಯದೊಂದಿಗೆ ಆರಂಭಿಸಲಾದ ತುಂಗಭದ್ರಾ ಸಾಂಸ್ಕೃತಿಕ ಮತ್ತು ಕ್ರೀಡಾ ಮನೋರಂಜನಾ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಮಾತು ಮನಸ್ಸನ್ನು ಒಡೆದು ಬಿಡುತ್ತದೆ. ಅದಕ್ಕೆ ಅವಕಾಶ ಬೇಡ. ರಾಜಕೀಯ ಎಂಬುದು ಚುನಾವಣೆ ಅಥವಾ ರಾಜಕೀಯ ಕಾರ್ಯಕ್ರಮಗಳಿಗೆ ಮೀಸಲಿರಲಿ. ಅದನ್ನು ಕ್ಲಬ್ವರೆವಿಗೂ ತರಬಾರದು. ಎಲ್ಲರೂ ಸಹೋದರರಂತೆ ಇದ್ದು ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ ಎಂದರು.ಕ್ಲಬ್ ಎಂದರೆ ಕೆಲವರಲ್ಲಿ ನಕಾರಾತ್ಮಕ ಭಾವನೆ ಮೂಡುತ್ತದೆ. ನಿಜಕ್ಕೂ ಕ್ಲಬ್ ಎಂದರೆ ಕಾರ್ಡ್ಸ್ ಆಡಲಿಕ್ಕೆ ಹಾಗೂ ಡ್ರಿಂಕ್ಸ್ ಮಾಡಲಿಕ್ಕೆ ಎಂಬ ಭಾವನೆ ಇದೆ. ಆದರೆ, ಇಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಕ್ಕೆ ಅವಕಾಶ ಇದೆ. ಅದರಲ್ಲಿ ಭಾಗವಹಿಸಬಹುದು. ಕಾನೂನಿನ ನಿಯಾಮಾನುಸಾರವೇ ಈ ಕ್ಲಬ್ ಆರಂಭಗೊಂಡಿದೆ. ಇಲ್ಲಿ ಅನ್ಯ ಚಟುವಟಿಕೆಗೆ ಅವಕಾಶವಿಲ್ಲ ಎಂದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ದಿನನಿತ್ಯ ಜಂಜಾಟದಲ್ಲಿ ತೊಡಗಿರುವ ನಮಗೆಲ್ಲರಿಗೂ ಮಾನಸಿಕ ನೆಮ್ಮದಿ ಅವಶ್ಯಕತೆ ಇದೆ. ಈ ಕಾರಣದಿಂದ ಇಂತಹ ಸಾಂಸ್ಕೃತಿಕ ಕೇಂದ್ರ ಇಲ್ಲಿ ಉದ್ಘಾಟನೆಗೊಂಡಿದೆ. ಇಲ್ಲಿ ಆರೋಗ್ಯ ಕಾಪಾಡಿಕೊಳ್ಳಲ್ಲು ಜಿಮ್, ಕ್ರೀಡೆಗಳಿಗೆ ಸೌಲಭ್ಯವಿದೆ. ಇವುಗಳನ್ನು ಬಳಸಿ, ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು ಎಂದು ತಿಳಿಸಿದರು.ಕ್ಲಬ್ ಅಧ್ಯಕ್ಷ ಎಂ.ಎಲ್. ಸುರೇಶ್ ಮಾತನಾಡಿ, ಉತ್ತಮ ಆರೋಗ್ಯ ಜಿಮ್, ಕ್ರೀಡೆಗಳಲ್ಲಿ ಭಾಗವಹಿಸಲಿಕ್ಕೆ ಸುಸಜ್ಜಿತ ಸ್ಥಳವಕಾಶ ಮಾಡಿಕೊಟ್ಟಿದ್ದೇವೆ. ಇಲ್ಲಿ ಕಾನೂನನ್ನು ಮೀರಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ. ಕ್ಲಬ್ ವತಿಯಿಂದ ಮುಂದೆ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ, ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್, ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್, ಶಿವಮೊಗ್ಗ ಸಿಟಿ ಕ್ಲಬ್ ಕಾರ್ಯದರ್ಶಿ ವಿಜಯಕುಮಾರ್, ದಾವಣಗೆರೆ ಸಿ.ಟಿ. ಕ್ಲಬ್ ಅಧ್ಯಕ್ಷ ಎ.ಬಿ. ಚಂದ್ರಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಬಸವರಾಜು, ಉಪಾಧ್ಯಕ್ಷ ಎಚ್.ಡಿ. ಬಸವರಾಜು, ಕಾಂಗ್ರೆಸ್ ಮುಖಂಡ ಬಿ.ಸಿದ್ದಪ್ಪ ಮಾತನಾಡಿದರು.ಪುರಸಭಾಧ್ಯಕ್ಷ ಮೈಲಪ್ಪ, ಎಚ್.ಬಿ. ಶಿವಯೋಗಿ, ರಮೇಶ್ ಅರಬಗಟ್ಟೆ, ತಿಮ್ಮಪ್ಪ, ಚಂದ್ರಶೇಖರ್, ಗಣೇಶ್, ಕಡೂರಪ್ಪ, ಎ.ಬಿ. ಹನುಮಂತಪ್ಪ, ವಿನಾಯಕ, ಮಂಜುನಾಥ್ ಇಂಗಳಗೊಂದಿ, ಜಯಣ್ಣ, ಗಣೇಶ್, ಸಂತೋಷ್ ಹಾಗೂ ಇತರರು ಇದ್ದರು.
- - - -17ಎಚ್.ಎಲ್.ಐ1:ಹೊನ್ನಾಳಿಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ತುಂಗಭದ್ರಾ ಸಾಂಸ್ಕೃತಿಕ ಮತ್ತು ಕ್ರೀಡಾ ಮನೋರಂಜನಾ ಕ್ಲಬ್ ಉದ್ಘಾಟಿಸಿ ಮಾತನಾಡಿದರು. ಎಂ.ಪಿ.ರೇಣುಕಾಚಾರ್ಯ ಡಾ. ಡಿ.ಬಿ.ಗಂಗಪ್ಪ, ಇತರರು ಇದ್ದರು.