ಸಂಜೀವಿನಿ ಒಕ್ಕೂಟದಿಂದ ಸಾಮಾಜಿಕ ಸೇರ್ಪಡೆ ಆಂದೋಲನ

| Published : Mar 22 2025, 02:01 AM IST

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಮಹಿಳಾ ಸ್ವ-ಸಹಾಯ ಸಂಘಗಳು ಸಂಜೀವಿನಿ ಯೋಜನೆಯಡಿ ರಚನೆಯಾಗಿರುವ ಒಕ್ಕೂಟಗಳಲ್ಲಿ ಸೇರ್ಪಡೆಗೊಳ್ಳುವ ಮೂಲಕ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಂಜೀವಿನಿ ಒಕ್ಕೂಟಕ್ಕೆ ಸೇರ್ಪಡೆಗೊಂಡು ತಮಗೆ ಆಸಕ್ತಿ ಇರುವ ಕೌಶಲ್ಯ ಆಧಾರಿತ ಚಟುವಟಿಕೆಗಳನ್ನು ಕೈಗೊಂಡು ನೆಮ್ಮದಿ ಜೀವನ ನಡೆಸಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಮಹಿಳಾ ಸ್ವ-ಸಹಾಯ ಸಂಘಗಳು ಸಂಜೀವಿನಿ ಯೋಜನೆಯಡಿ ರಚನೆಯಾಗಿರುವ ಒಕ್ಕೂಟಗಳಲ್ಲಿ ಸೇರ್ಪಡೆಗೊಳ್ಳುವ ಮೂಲಕ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ವಲಯ ಮೇಲ್ವಿಚಾರಕ ಎಂ.ಎನ್.ಮಹದೇವಸ್ವಾಮಿ ಕರೆ ನೀಡಿದರು.

ಬೆನಮನಹಳ್ಳಿಯಲ್ಲಿ ಲಿಂಗಪಟ್ಟಣ ಗ್ರಾಪಂ ಸಂಜೀವಿನಿ ಒಕ್ಕೂಟದಿಂದ ಆಯೋಜಿಸಿದ್ದ ಸಾಮಾಜಿಕ ಸೇರ್ಪಡೆ ಆಂದೋಲನದಲ್ಲಿ ಮಾತನಾಡಿ, ಕಡಿಮೆ ದಾಖಲೆ ಪಡೆದು ಶೀಘ್ರ ಸಾಲ ಮಂಜೂರು ಮಾಡುವ ಖಾಸಗಿ ಫೈನಾನ್ಸ್ ಕಂಪನಿಗಳಿಂದ ದೂರವಿರಬೇಕು ಎಂದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಂಜೀವಿನಿ ಒಕ್ಕೂಟಕ್ಕೆ ಸೇರ್ಪಡೆಗೊಂಡು ತಮಗೆ ಆಸಕ್ತಿ ಇರುವ ಕೌಶಲ್ಯ ಆಧಾರಿತ ಚಟುವಟಿಕೆಗಳನ್ನು ಕೈಗೊಂಡು ನೆಮ್ಮದಿ ಜೀವನ ನಡೆಸುವಂತೆ ತಿಳಿಹೇಳಿದರು.

ಪಿಡಿಒ ವಿಜಯ್ ಕುಮಾರ್ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸುಲಭವಾಗಿ ಪಡೆಯಲು ಸಂಜೀವಿನಿ ಸಹಕಾರಿಯಾಗಲಿದೆ. ಎಲ್ಲರೂ ಒಟ್ಟಾಗಿ ಸುಸ್ಥಿರ ಜೀವನೋಪಾಯದಿಂದ ಸ್ವಾವಲಂಬಿಗಳಾಗಿ ಅಭಿವೃದ್ಧಿ ಕಡೆಗೆ ಹೆಜ್ಜೆ ಹಾಕೋಣ ಎಂದು ಕರೆ ನೀಡಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಬೆನಮನಹಳ್ಳಿ ಪ್ರಮುಖ ಬೀದಿಗಳಲ್ಲಿ ಸಂಜೀವಿನಿ ಯೋಜನೆ ಕುರಿತು ಜಾಗೃತಿ ಜಾಥಾ ನಡೆಯಿತು. ಲಿಂಗಪಟ್ಟಣ ಗ್ರಾಪಂ ವ್ಯಾಪ್ತಿಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಆಯೋಜಿಸಿದ್ದ ವಿವಿಧ ಆಟೋಟಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ಲಿಂಗಪಟ್ಟಣ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಿವಲಿಂಗಮ್ಮ, ಗ್ರಾಪಂ ಸದಸ್ಯ ಚೇತನ್ ಕುಮಾರ್, ಪಿಡಿಒ ವಿಜಯ್ ಕುಮಾರ್, ಮುಖಂಡರಾದ ಬಿ.ಗಂಗಾಧರ್, ಲಿಂಗರಾಜು, ಶಿಕ್ಷಕಿ ರೂಪ, ಬಿ.ಆರ್.ಪಿ ಸ್ಪೂರ್ತಿ, ಎಲ್.ಸಿ.ಆರ್.ಪಿ. ಕುಂತೂರು ಲಕ್ಷ್ಮೀ, ರತ್ನಮ್ಮ, ಪಶು ಸಖಿ ವಸಂತಮ್ಮ, ಕೃಷಿ ಸಖಿ ಪಲ್ಲವಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಾಳೆ ವಿದ್ಯುತ್ ವ್ಯತ್ಯಯ

ಮಂಡ್ಯ: 66/11 ಕೆ.ವಿ. ತೂಬಿನಕೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಾಳೇನಹಳ್ಳಿ ಫೀಡರ್‌ನ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರ್ಚ್ 23 ರಂದು ಬೆಳಗ್ಗೆ 9 ರಿಂದ ಸಂಜೆ 50 ಗಂಟೆವರೆಗೆ ವಿದ್ಯುತ್ ನಿಲುಗಡೆಗೊಳಿಸುವುದರಿಂದ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ. ತಾಲೂಕಿನ ಉರಮಾರಕಸಲಗೆರೆ, ಯಲಿಯೂರು, ಕಾಳೇನಹಳ್ಳಿ, ಎಲೆಚಾಕನಹಳ್ಳಿ, ರಾಗಿಮುದ್ದನಹಳ್ಳಿ, ಸುಂಡಹಳ್ಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.