ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಬಸವಾದಿ ಶರಣರ ವಚನಗಳಲ್ಲಿ ಸಂಪೂರ್ಣವಾಗಿ ಸಾಮಾಜಿಕ ಚಿಂತನೆ ಅಡಗಿದೆ. ಶರಣರ ಪ್ರತಿ ಮಾತು ವಚನವಾಗಿದ್ದು ಕಾಯಕ ದೃಷ್ಟಿ ಹಾಗೂ ವೈಚಾರಿಕ ಚಿಂತನೆಗಳು ಶರಣತತ್ವದ ಮೂಲ ಆಶಯವನ್ನು ಪ್ರಚುರಗೊಳಿಸುತ್ತವೆ ಎಂದು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎ.ಎಂ.ಪಿ. ವೀರೇಶಸ್ವಾಮಿ ಹೇಳಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ತಾಲೂಕಿನ ಹಂದಿಹಾಳು ಗ್ರಾಮದ ಶಿವಶರಣ ಮಠದ ಆವರಣದಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 318ನೇ ಮಹಾಮನೆ ಗುರು ಹಿರಿಯರ ದತ್ತಿ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಸಾಮಾಜಿಕ ಚಿಂತನೆ ವಿಷಯ ಕುರಿತು ಅವರು ಮಾತನಾಡಿದರು. ಮಾನವ ಸಮಾಜ ಜೀವಿ. ಸಮಾಜದ ಸಂಪರ್ಕವಿಲ್ಲದೇ ಮಾನವ ಬದುಕಲಾರ. ಸಮಾಜದಿಂದಲೇ ಬದುಕನ್ನು ಕಟ್ಟಿಕೊಂಡ ಮಾನವ ಸಮಾಜಕ್ಕೆ ಋಣಿಯಾಗಿರಬೇಕು. ಈ ತತ್ವವನ್ನು ಮೊಟ್ಟ ಮೊದಲಿಗೆ ಆಚರಿಸಿ ಜಗತ್ತಿಗೆ ತೋರಿಸಿದವರೇ ಶರಣರು ಎಂದು ತಿಳಿಸಿದರು.
ಶಾಲೆಯ ವಿದ್ಯಾರ್ಥಿಗಳು ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಸಿದ್ಧರಾಮ ಕಲ್ಮಠರು ಪ್ರಾಸ್ತಾವಿಕ ನುಡಿಗಳನ್ನಾಡಿ, ಇಡೀ ಜಿಲ್ಲೆಯಲ್ಲಿ ಶರಣರ ಕಾಯಕ ತತ್ವ ಹಾಗೂ ದಾಸೋಹ ಪರಂಪರೆಯ ಕುರಿತು ಉಪನ್ಯಾಸಗಳನ್ನು ಏರ್ಪಡಿಸುವ ಮೂಲಕ ದತ್ತಿ ಕಾರ್ಯಕ್ರಮದ ಮುಖ್ಯ ಆಶಯವನ್ನು ಬಲಪಡಿಸಲಾಗುವುದು ಎಂದು ಹೇಳಿದರು.ಮುಖ್ಯಗುರು ವೈ.ಕವಿತಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಬಿ. ಸಿದ್ಧಲಿಂಗಪ್ಪ ದತ್ತಿಯ ಆಶಯ ತಿಳಿಸಿದರು. ಶಾಲೆಯ ವಿದ್ಯಾರ್ಥಿನಿಯರು ವಚನದ ಮೂಲಕ ಪ್ರಾರ್ಥನೆ ಮಾಡಿದರು. ಶಿಕ್ಷಕ್ಷಿ ಶಿವಲೀಲಾ ಸ್ವಾಗತಿಸಿದರು. ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಜೋಳದರಾಶಿ ಪಂಪನಗೌಡ, ವನಜ ಶಿಕ್ಷಕಿ ವರ್ಗ ಉಪಸ್ಥಿತರಿದ್ದರು. ಧರ್ಮದರ್ಶಿ ಎಚ್.ಪ್ರಸನ್ನ ಕುಮಾರ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದರು. ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವಲಿಂಗಪ್ಪ ಹಂದಿಹಾಳ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.