ಸತ್ಕಾರ್ಯದಿಂದ ಸಮಾಜ ಬಲಗೊಳ್ಳಲು ಸಾಧ್ಯ: ರಂಭಾಪುರಿ ಶ್ರೀ

| Published : Apr 19 2024, 01:03 AM IST

ಸಾರಾಂಶ

ಸತ್ಕಾರ್ಯ ನಡೆದಾಗ ಮಾತ್ರ ಸಮಾಜ ಬಲಗೊಳ್ಳಲು ಸಾಧ್ಯ.

ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಕಲ್ಯಾಣ ಭವನದ ಪೂಜೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕನಕಗಿರಿ

ಸತ್ಕಾರ್ಯ ನಡೆದಾಗ ಮಾತ್ರ ಸಮಾಜ ಬಲಗೊಳ್ಳಲು ಸಾಧ್ಯ ಎಂದು ಬಾಳೆಹೊನ್ನೂರಿನ ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳು ಹೇಳಿದರು.

ಪಟ್ಟಣದಲ್ಲಿ ನಿರ್ಮಾಣಗೊಂಡ ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಕಲ್ಯಾಣ ಭವನದ ವಾಸ್ತುಶಾಂತಿ ಪೂಜಾ ವಿಧಾನ ನೆರವೇರಿಸಿ ನಂತರ ನಡೆದ ಸಾಂಕೇತಿಕ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ಅವರು ನೀಡಿದರು.

ಗುಣಾತ್ಮಕ ಕಾರ್ಯಗಳು ಸಮಾಜದ ಶ್ರೇಯೋಭಿವೃದ್ಧಿಗೆ ಅಡಿಪಾಯ ಹಾಕಿದಂತೆ. ಈ ನಿಟ್ಟಿನಲ್ಲಿ ಕನಕಗಿರಿ ಪಟ್ಟಣದಲ್ಲಿ ಕಲ್ಯಾಣ ಭವನ ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯವಾದ ಕಾರ್ಯವಾಗಿದೆ ಎಂದರು.

ಕಲ್ಯಾಣ ಭವನ ಕಟ್ಟಡ ನಿರ್ಮಾಣಕ್ಕೆ ದಾನ ನೀಡಿದ ಹಂಪಣ್ಣ ಜೋಡಗಾಣದ, ಬಸೆಟ್ಟೆಪ್ಪ ಭತ್ತದ, ಮುದಕಪ್ಪ ಶೆಟ್ಟರ, ಗುಂಡದಮಠ ಕಂಪ್ಲಿ, ಲಕ್ಷ್ಮಣಪ್ಪ ಕನಕಪ್ಪ ಖ್ಯಾಡೆದ್ ಅವರನ್ನು ಸ್ಮರಿಸಿದ ಶ್ರೀಗಳು, ಇಂತಹ ಕೈಗಳು ಸಮಾಜದಲ್ಲಿ ಹೆಚ್ಚಾಗಬೇಕಾಗಿದೆ. ಲೋಕಸಭಾ ಚುನಾವಣೆ ನಂತರ ಎಲ್ಲರನ್ನೂ ಅಹ್ವಾನಿಸಿ ಕಲ್ಯಾಣ ಭವನವನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ವಾಸ್ತುಶಾಂತಿ ನಿಮಿತ್ತ ಗಂಗಾಪೂಜಾ, ಪುಣ್ಯಾಹ, ನಾಂದಿ, ಪಂಚಕಲಸ ಸ್ಥಾಪನೆ, ನವಗ್ರಹ ಪೂಜೆ, ರುದ್ರಹೋಮ ಸೇರಿದಂತೆ ಹಲವು ಧಾರ್ಮಿಕ ನಡೆದವು.

ಈ ಸಂದರ್ಭದಲ್ಲಿ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಸುವರ್ಣಗಿರಿ ಮಠದ ಡಾ. ಚನ್ನಮಲ್ಲ ಸ್ವಾಮಿಗಳು, ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಕುಷ್ಟಗಿ ಮದ್ದಾನಿ ಮಠದ ಕರಿಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಿಂಧನೂರು ಕನ್ನೂರಿನ ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಕೆಂಭಾವಿ ಚನ್ನಬಸವ ಶಿವಾಚಾರ್ಯ ಸ್ವಾಮಿಗಳು, ಹೆಬ್ಬಾಳದ ಶಿವಪ್ರಕಾಶ ಶರಣರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.