ಸಾರಾಂಶ
ಕಾರಟಗಿ: ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ನಿಮ್ಮ ಗ್ರಾಮಕ್ಕೆ ಅಧಿಕಾರಿಗಳ ತಂಡದೊಂದಿಗೆ ಬಂದಿದ್ದೇನೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದಲ್ಲಿ ಅರ್ಜಿ ನೀಡಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ತಾಲೂಕಿನ ಮರ್ಲಾನಹಳ್ಳಿ ಮತ್ತು ಯರಡೋಣಾ ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಯ ಹಸ್ತ ನಿಮ್ಮ ಬಳಿಗೆ ನಾವು ಅಭಿಯಾನ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ನಿಮ್ಮ ಗ್ರಾಮಕ್ಕೆ ಅಧಿಕಾರಿಗಳ ತಂಡದೊಂದಿಗೆ ಬಂದಿದ್ದೇನೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದಲ್ಲಿ ಅರ್ಜಿ ನೀಡಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದರು.ಮರ್ಲಾನಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಸ ಜೂರಟಗಿಯಲ್ಲಿ ಗ್ರಾಮಸ್ಥರು ಪ್ರಮುಖವಾಗಿ ಕುಡಿವ ನೀರಿನ ಸಮಸ್ಯೆ ಮತ್ತು ೪೦ ವರ್ಷಗಳಿಂದ ವಾಸ ಮಾಡುತ್ತಿರುವ ೨೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರ ನೀಡುವಂತೆ ಮನವಿ ಮಾಡಿದರು. ಸ್ಥಳದಲ್ಲಿದ್ದ ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ವಿಜಯಕುಮಾರ್ ಅವರಿಗೆ ಗ್ರಾಮದ ರಾಮದೇವರ ದೇವಸ್ಥಾನದ ಬಳಿ ಹೊಸದಾಗಿ ಬೋರ್ ವೇಲ್ ಕೊರೆಸಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು. ಜತೆಗೆ ಹಕ್ಕು ಪತ್ರವಿಲ್ಲದ ಎಲ್ಲ ಕುಟುಂಬಗಳಿಗೆ ಫೆ. ೧೦ ರಂದು ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಕೂಡಲೇ ಹಕ್ಕುಪತ್ರ ತಯಾರು ಮಾಡುವಂತೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಅವರಿಗೆ ತಿಳಿಸಿದರು. ಗ್ರಾಮಸ್ಥರು ದನದ ಶೆಡ್ ನಿರ್ಮಾಣ ಮಾಡಿ ವರ್ಷಗಳೇ ಕಳೆದಿವೆ ಇನ್ನು ಹಣ ಪಾವತಿಯಾಗಿಲ್ಲ. ಜತೆಗೆ ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳಿದ ಕೂಲಿಕಾರರ ಕಡಿಮೆ ಕೂಲಿ ಹಾಕುತ್ತಿದ್ದಾರೆ. ಜತೆಗೆ ಗ್ರಾಪಂ ಪಿಡಿಒ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ಈ ವೇಳೆ ಗ್ರಾಪಂ ಪಿಡಿಒ ಸಲ್ಮಾ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು ಜನರ ಕೆಲಸ ಮಾಡಲು ನಿಮಗೆ ಆಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಇನ್ನು ಗ್ರಾಮದಲ್ಲಿ ಸರಿಯಾಗಿ ಪಡಿತರ ಅಕ್ಕಿ ವಿತರಣೆ ಮಾಡುತ್ತಿಲ್ಲ. ಜತೆಗೆ ತೂಕ ಮಾಡದೇ ಹಂಚಿಕೆ ಮಾಡುತ್ತಾರೆ ಗ್ರಾಮಸ್ಥರು ದೂರಿದರು ಇದರಿಂದ ಆಕ್ರೋಶಗೊಂಡ ಸಚಿವರು ಬಡವರಿಗಾಗಿ ನಮ್ಮ ಸರ್ಕಾರ ಪಡಿತರ ಅಕ್ಕಿ ನೀಡುತ್ತಿದೆ. ಇದರಲ್ಲಿ ಜನಸಾಮಾನ್ಯರಿಗೆ ತೊಂದರೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಗ್ರಾಮದಲ್ಲಿ ಸಾಕಷ್ಟು ಸರ್ಕಾರಿ ಜಮೀನು ಇದ್ದು, ವಸತಿ ಶಾಲೆ ಹಾಗೂ ಅಂಬೇಡ್ಕರ್ ಭವನ ನಿರ್ಮಾಣ, ಹೈಸ್ಕೂಲ್ಗೆ ಮತ್ತು ಗ್ರಾಮದ ತಾಯಮ್ಮ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಹಾಗೂ ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಹಾಗೂ ಈಳಿಗನೂರು ಗ್ರಾಮದಿಂದ ಮಕ್ಕಳು ಯರಡೋಣಾ ಗ್ರಾಮ ಹೈಸ್ಕೂಲ್ಗೆ ಬರುತ್ತಿದ್ದು, ಸಾರಿಗೆ ಬಸ್ ಬಿಡುವಂತೆ ಮನವಿ ಮಾಡಿದರು. ಎಲ್ಲ ಕೆಲಸಗಳನ್ನು ಆದಷ್ಟು ಬೇಗ ಮಾಡುವುದಾಗಿ ಸಚಿವರು ಭರವಸೆ ನೀಡಿದರು.ಬಳಿಕ ಮಾರುತಿ ಕ್ಯಾಂಪ್ಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದರು. ಕ್ಯಾಂಪ್ ನಿವಾಸಿಗಳು ಕಾಲುವೆ ನೀರನ್ನು ಬಳಸುತ್ತೇವೆ ಆದರೆ. ರವಿನಗರದ ಮಿಲ್ಗಳಿಂದ ಕಾಲುವೆಗೆ ಕಲುಷಿತ ನೀರು ಸೇರಿಕೊಳ್ಳುತ್ತಿದ್ದು, ರೋಗಗಳು ಬಾಧಿಸುವ ಆತಂಕ ಎದುರಾಗಿದೆ ಎಂದು ಅಹವಾಲು ತೋಡಿಕೊಂಡರು. ಬಳಿಕ ಸಂಬಂಧಪಟ್ಟ ಮಿಲ್ಗಳಿಗೆ ನೋಟೀಸ್ ನೀಡುವಂತೆ ತಹಸೀಲ್ದಾರ್ ಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಕಂದಾಯ ಇಲಾಖೆ, ತಾಪಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮುಖಂಡರು ಇತರರು ಇದ್ದರು.