ಸೋಮವಾರಪೇಟೆ: ಮಠದ ಜಮೀನು ಈಗ ಅನಧಿಕೃತ ಡಂಪಿಂಗ್‌ ಯಾರ್ಡ್‌

| Published : Mar 14 2024, 02:01 AM IST

ಸೋಮವಾರಪೇಟೆ: ಮಠದ ಜಮೀನು ಈಗ ಅನಧಿಕೃತ ಡಂಪಿಂಗ್‌ ಯಾರ್ಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಜನವಸತಿ ಪ್ರದೇಶ, ಪಕ್ಕದಲ್ಲಿಯೇ ಶಾಲೆ ಹಾಗೂ ದೇವಾಲಯ ಅದರ ಸುತ್ತಮುತ್ತ ಪಾಳುಬಿದ್ದ ಜಮೀನು ಇವೆ. ಕೆಲವು ಪುಂಡು ಪೋಕರಿಗಳಿಗೆ ಹಾಗೂ ಕಸ ಹಾಕುವವರಿಗೆ ಇದು ವರವಾಗಿ ಪರಿಣಮಿಸಿದೆ. ಇದು ಸೋಮವಾರಪೇಟೆ ಪಟ್ಟಣದ ವಾರ್ಡ್ ನಂ. 3ರ ಕರ್ಕಳ್ಳಿ ರಸ್ತೆಯ ಮಠದ ಶಾಲೆ ಹಾಗೂ ಕಟ್ಟೆ ಬಸವೇಶ್ವರ ದೇವಾಲಯದ ಸಮೀಪದ ವ್ಯಥೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಪಟ್ಟಣದಲ್ಲಿ ಕಸ ವಿಲೇವಾರಿ ಕಗ್ಗಂಟಾಗಿ ಪರಿಣಮಿಸಿದ್ದು, ಸಿಕ್ಕ ಸಿಕ್ಕವರು ಕಸತಂದು ಹಾಕುತ್ತಿರುವುದರಿಂದ ವಿರಕ್ತ ಮಠದ ಜಮೀನು ಕಸದ ಕೊಂಪೆಯಾಗಿದೆ. ಆದರೆ ಪಟ್ಟಣ ಪಂಚಾಯಿತಿ ಈ ಕುರಿತು ಗಮನ ಹರಿಸಿದಂತಿಲ್ಲ.

ಜನವಸತಿ ಪ್ರದೇಶ, ಪಕ್ಕದಲ್ಲಿಯೇ ಶಾಲೆ ಹಾಗೂ ದೇವಾಲಯ ಅದರ ಸುತ್ತಮುತ್ತ ಪಾಳುಬಿದ್ದ ಜಮೀನು ಇವೆ. ಕೆಲವು ಪುಂಡು ಪೋಕರಿಗಳಿಗೆ ಹಾಗೂ ಕಸ ಹಾಕುವವರಿಗೆ ಇದು ವರವಾಗಿ ಪರಿಣಮಿಸಿದೆ. ಇದು ಪಟ್ಟಣದ ವಾರ್ಡ್ ನಂ. 3ರ ಕರ್ಕಳ್ಳಿ ರಸ್ತೆಯ ಮಠದ ಶಾಲೆ ಹಾಗೂ ಕಟ್ಟೆ ಬಸವೇಶ್ವರ ದೇವಾಲಯದ ಸಮೀಪದ ವ್ಯಥೆ.ಸಿಕ್ಕ ಸಿಕ್ಕವರೆಲ್ಲಾ ತಮ್ಮ ಮನೆಯ ಅನುಪಯುಕ್ತ ವಸ್ತುಗಳು, ದಿನನಿತ್ಯದ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದರಿಂದ ಅಕ್ಕಪಕ್ಕದ ಮನೆಯವರು, ಶಾಲೆಯ ಮಕ್ಕಳು ಮೂಗುಮುಚ್ಚಿ ಕುಳಿತುಕೊಳ್ಳಬೇಕಾಗಿದೆ.

ಮಠದ ಜಮೀನಿನಲ್ಲಿ ಹಲವು ವರ್ಷಗಳಿಂದ ಶುಂಠಿ ಕೃಷಿ ಮಾಡಿಕೊಂಡಿರುವವರು ಪಂಚಾಯ್ತಿಯ ಚರಂಡಿ ಮುಚ್ಚಿ ರಸ್ತೆ ಮಾಡಿಕೊಂಡಿರುವುದರಿಂದ ವಾಹನಗಳಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ಕಟ್ಟಡ ಒಡೆದ ಇಟ್ಟಿಗೆ, ಸಿಮೆಂಟ್ ವಸ್ತುಗಳು, ಸಮೀಪದ ಕೋಳಿಮಾಂಸ ಅಂಗಡಿಯವರು ಚೀಲ, ಚೀಲಗಳಲ್ಲಿ ರೆಕ್ಕೆ, ಪುಕ್ಕ ಸೇರಿದಂತೆ ಅದರ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದಾರೆ.

ಇದರಿಂದ ಇಲ್ಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ಮನೆಯ ಹಳೆಯ ಕಮೋಡ್, ಟಿ.ವಿ. ಸೇರಿದಂತೆ ನಿರುಪಯುಕ್ತ ವಸ್ತುಗಳ ರಾಶಿಯೇ ಬಿದ್ದಿದೆ. ಸ್ಯಾನಿಟರಿ ಪ್ಯಾಡ್ ಗಳನ್ನು ಚೀಲಗಳಲ್ಲಿ ತಂದು ಹಾಕಲಾಗಿದೆ. ಇನ್ನು ಎಣ್ಣೆ ಪ್ರಿಯರು ಇದೇಜಾಗದಲ್ಲಿ ಮದ್ಯ ಹಾಕಿಕೊಂಡು ಇಸ್ಪೀಟ್ ಆಡುವುದು ಮಾಮೂಲಿಯಾಗಿದೆ. ಎಲ್ಲೆಲ್ಲೋ ಮದ್ಯ ಪಾರ್ಟಿ ಮಾಡಿ ಖಾಲಿ ಬಾಟಲ್ ಹಾಗೂ ಟೆಟ್ರಾ ಪ್ಯಾಕ್ ಗಳನ್ನೂ ಹಾಕಲಾಗಿದೆ.

ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್‌ಗಳು ಹಾರಾಡುತ್ತಿವೆ. ಪಕ್ಷಿಗಳು,ನಾಯಿಗಳು ಕಚ್ಚಿಕೊಂಡು ರಸ್ತೆ ಹಾಗೂ ಅಕ್ಕ ಪಕ್ಕದಲ್ಲಿ ಹಾಕುತ್ತಿರುವುದರಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ದನಗಳು ಕೂಡ ಪ್ಲಾಸ್ಟಿಕ್ ತಿನ್ನುತ್ತಿರುವುದರಿಂದ ಅವುಗಳ ಪ್ರಾಣಕ್ಕೆ ಸಂಚಕಾರವಾಗಲಿದೆ.

ನೈರ್ಮಲ್ಯ ವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ ಪಟ್ಟಣ ಪಂಚಾಯ್ತಿ ಜವಾಬ್ದಾರಿ ಮರೆತು ಕುಳಿತಿದೆ. ಇದು ಬೇಸಿಗೆ ಕಾಲವಾಗಿದ್ದು ಕೋಳಿ ತ್ಯಾಜ್ಯ ಹಾಗೂ ಸ್ಯಾನಿಟರಿ ಪ್ಯಾಡ್ ಗಳಂತಹ ವಸ್ತುಗಳಿಂದ ರೋಗರುಜಿನಗಳು ಹರಡುವ ಸಾಧ್ಯತೆ ಇರುವುದರಿಂದ ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.------

ಮಠದ ಜಮೀನಿನಲ್ಲಿ ಈ ರೀತಿ ರಾಶಿರಾಶಿ ಕಸ ಹಾಕುತ್ತಿದ್ದರೂ ಮಠದ ಆಡಳಿತ ಜಾಣಕುರುಡುತನ ತೋರುತ್ತಿದೆ. ತಕ್ಷಣ ಮಠ ತನ್ನ ಜಮೀನಿಗೆ ಸೂಕ್ತ ಬಂದೋಬಸ್ತು ಮಾಡಿಕೊಳ್ಳಬೇಕು.

-ಮೋಹಿನಿ, ಪ.ಪಂ.ಸದಸ್ಯೆ.

----

ಕಳೆದ ಆರು ತಿಂಗಳ ಹಿಂದೆ ಪಟ್ಟಣ ಪಂಚಾಯ್ತಿ ಕಸವನ್ನು ಈ ಜಮೀನಿನಲ್ಲಿ ಸುರಿದಾಗ ಕಬಾರದೆಂದು ಸೂಚನೆ ನೀಡಲಾಗಿತ್ತು. ಇದನ್ನು ವೀರಶೈವ ಸಮಾಜದ ಮುಖಾಂತರ ಹೇಳಿಸಲಾಗಿತ್ತು. ಇದು ನನ್ನ ಗಮನಕ್ಕೆ ಬಂದಿಲ್ಲ. ನಾಳೆ ಸ್ಥಳ ಪರಿಶೀಲಿಸಿ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರಿಗೆ ದೂರು ನೀಡಲಾಗುವುದು. -ಶಶಿಧರ್, ವ್ಯವಸ್ಥಾಪಕರು, ಮುರುಘಾ ಮಟ, ಬೇಳೂರು, ಸೋಮವಾರಪೇಟೆ.