ಪಟ್ಟಣದಲ್ಲಿ ಕೂಲಿ ಕಾರ್ಮಿಕರನ್ನು ಕರೆತರುವ ಪಿಕಪ್ ವಾಹನಗಳ ಹಾವಳಿ ಮಿತಿ ಮೀರಿದ್ದು, ಜನಸಾಮಾನ್ಯರು ಭೀತಿಯಿಂದ ಸಂಚರಿಸಬೇಕಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಹಾಸನ ಜಿಲ್ಲೆಯ ಕೊಣನೂರು, ಅರಕಲಗೂಡು, ಕುಶಾಲನಗರ ಸೇರಿದಂತೆ ಅಕ್ಕಪಕ್ಕದ ಊರುಗಳಿಂದ ನೂರಾರು ವಾಹನಗಳಲ್ಲಿ ಕಾರ್ಮಿಕರನ್ನು ಬೆಳಿಗ್ಗೆ ಕರೆದುಕೊಂಡು ಬಂದು ಮತ್ತೆ ಸಂಜೆ ಅದೇ ಮಾರ್ಗದಲ್ಲಿ ಹಿಂದಿರುಗುವುದು ನಡೆಯುತ್ತಿದೆ.

ಸೋಮವಾರಪೇಟೆ: ಪಟ್ಟಣದಲ್ಲಿ ಕೂಲಿ ಕಾರ್ಮಿಕರನ್ನು ಕರೆತರುವ ಪಿಕಪ್ ವಾಹನಗಳ ಹಾವಳಿ ಮಿತಿ ಮೀರಿದ್ದು, ಜನಸಾಮಾನ್ಯರು ಭೀತಿಯಿಂದ ಸಂಚರಿಸಬೇಕಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಹಾಸನ ಜಿಲ್ಲೆಯ ಕೊಣನೂರು, ಅರಕಲಗೂಡು, ಕುಶಾಲನಗರ ಸೇರಿದಂತೆ ಅಕ್ಕಪಕ್ಕದ ಊರುಗಳಿಂದ ನೂರಾರು ವಾಹನಗಳಲ್ಲಿ ಕಾರ್ಮಿಕರನ್ನು ಬೆಳಿಗ್ಗೆ ಕರೆದುಕೊಂಡು ಬಂದು ಮತ್ತೆ ಸಂಜೆ ಅದೇ ಮಾರ್ಗದಲ್ಲಿ ಹಿಂದಿರುಗುವುದು ನಡೆಯುತ್ತಿದೆ. ಅದೇ ರೀತಿ ಪಟ್ಟಣದ ಬಜೆಗುಂಡಿ, ಕೆಂಚಮ್ಮನ ಬಾಣೆ, ಕಲ್ಕಂದೂರು ಸೇರಿದಂತೆ ಕೆಲವು ಗ್ರಾಮಗಳ ಸ್ಥಳೀಯ ಕಾರ್ಮಿಕರನ್ನು ಕರೆದುಕೊಂಡು ಹೋಗಲಾಗುತ್ತದೆ. ತೆರೆದ ವಾಹನಗಳಲ್ಲಿ ಮಿತಿ ಮೀರಿದ ಸಂಖ್ಯೆಯಲ್ಲಿ ಯಾವುದೇ ಅಸುರಕ್ಷಿತವಾಗಿ ಕಾರ್ಮಿಕರ ಸಾಗಾಟ ನಡೆಯುತ್ತಿದೆ.

ಅತಿ ವೇಗವಾಗಿ ಸಂಚರಿಸುತ್ತಿರುವ ಪಿಕಪ್‌ಗಳು ವಾಹನಗಳನ್ನು ಹಿಂದೆ ಹಾಕುವಾಗ ಮತ್ತು ತಿರುವುಗಳಲ್ಲಿ ವೇಗವಾಗಿ ಸಂಚರಿಸುವುದರಿಂದ ಎದುರಿನಿಂದ ಬರುವ ವಾಹನಗಳಿಗೆ ಅಪಾಯ ಎದುರಾಗುತ್ತಿದೆ. ಹೆಚ್ಚಿನ ವಾಹನಗಳು ಇಂತಹ ವಾಹನಗಳು ಎದುರಿನಿಂದ ಬರುವ ಸಂದರ್ಭ ರಸ್ತೆ ಬದಿಯಲ್ಲಿ ತಮ್ಮ ವಾಹನವನ್ನು ನಿಲ್ಲಿಸಿಕೊಳ್ಳಬೇಕಾಗಿದೆ ಎಂದು ವಾಹನ ಸವಾರರು ದೂರುತ್ತಿದ್ದಾರೆ.

ಬೆಳಗ್ಗೆ ಮತ್ತು ಸಂಜೆ ಶಾಲಾ ವಾಹನಗಳು ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕರು ಕಿರಿದಾದ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಪಿಕಪ್ ವಾಹನ ಸವಾರರು ವೇಗವಾಗಿ ಸಂಚರಿಸುತ್ತಿದ್ದು, ಈ ವಾಹನಗಳನ್ನು ನೋಡಿದರೆ ಭಯವಾಗುತ್ತದೆ. ಕೆಲವೊಮ್ಮೆ ಎರಡು ಮೂರು ವಾಹನಗಳು ಪೈಪೋಟಿಯಲ್ಲಿ ತೆರಳುತ್ತಿರುತ್ತವೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಕಾರ್ಮಿಕರು ಮತ್ತು ಎದುರಿನಿಂದ ಬರುವವರಿಗೆ ಅಪಾಯ ಎದುರಾಗಲಿದೆ. ಈ ವಾಹನಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಿ, ಸುರಕ್ಷತವಾಗಿ ಕಾರ್ಮಿಕರನ್ನು ಕರೆದುಕೊಂಡು ಹೋಗಲು ಪೊಲೀಸ್ ಇಲಾಖೆ ಮಾರ್ಗದರ್ಶನ ಮಾಡಬೇಕೆಂದು ಕಾಫಿ ಬೆಳೆಗಾರರಾದ ಶಿವಪ್ಪ ತಿಳಿಸಿದರು. ಮಂಗಳವಾರ ಇಲ್ಲಿಗೆ ಸಮೀಪದ ಐಗೂರು ಗ್ರಾಮದಲ್ಲಿ ಯಾವುದೇ ಸುರಕ್ಷತೆ ಇಲ್ಲದೆ, ಕಾರ್ಮಿಕರನ್ನು ಸಾಗಾಟ ಮಾಡುತ್ತಿದ್ದ ಪಿಕಪೊಂದಕ್ಕೆ ೩ ಸಾವಿರ ರು. ದಂಡ ವಿಧಿಸಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.ಕೇವಲ ಒಂದೆರಡು ಭಾರಿ ದಂಡ ವಿಧಿಸಿ ದೂರು ದಾಖಲಿಸಿದರೆ ಪ್ರಯೋಜನವಾಗುವುದಿಲ್ಲ. ಬದಲಿಗೆ ಪೊಲೀಸರು ಆಯ ಕಟ್ಟಿನ ಸ್ಥಳದಲ್ಲಿ ನಿಂತು ವಾಹನಗಳನ್ನು ಪರಿಶೀಲನೆ ಮಾಡಿದರೆ ಮಾತ್ರ ಇಂತಹ ವಾಹನಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಸುರೇಶ್ ತಿಳಿಸಿದರು.