ಮೂಲ್ಕಿ: ಮೂಡುಶೆಡ್ಡೆ ಹೊಸಲಕ್ಕೆ ದಿ.ದೇವಕಿ ಸಂಜೀವ ಶೆಟ್ಟಿ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಪುತ್ರರು ಕೊರಗ ಸಮುದಾಯಕ್ಕೆ ಸೇರಿದ ಗಿರಿಜ ಎಂಬವರಿಗೆ ನೂತನವಾಗಿ ನಿರ್ಮಿಸಿದ ಮನೆಯ ಮನೆಯ ಕೀಲಿ ಕೈ ಹಸ್ತಾಂತರಿಸಲಾಯಿತು.

ವಕೀಲ ಹೊಸಲಕ್ಕೆ ಉಮೇಶ್ ಶೆಟ್ಟಿ ಅವರು ಮಾತನಾಡಿ ನಮ್ಮ ಅಮ್ಮ ದಿ ದೇವಕಿ ಶೆಟ್ಟಿ ನೊಂದವರು, ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದ ಜೀವ. ಅವರ ಮಾರ್ಗದರ್ಶನದಲ್ಲೇ ಬೆಳೆದ ನಾವು ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಗಾಗಿ ಸಮಾಜಕ್ಕೆ ನಮ್ಮಿಂದಾದ ಸೇವೆ ಸಲ್ಲಿಸಬೇಕು ಎಂಬ ದೃಷ್ಟಿಯಿಂದ ಮೂಡುಶೆಡ್ಡೆ ಪಂಚಾಯಿತಿ ಆಡಳಿತವನ್ನು ಸಂಪರ್ಕಿಸಿದ್ದೆವು. ಅಲ್ಲಿನ ಪಿಡಿಒ ಅವರು ಮನೆ ಸಂಪೂರ್ಣವಾಗಿ ಕುಸಿದುಬಿದ್ದು ಸಮಸ್ಯೆಯನ್ನು ಎದುರಿಸುತ್ತಿದ್ದ ಕೊರಗ ಸಮುದಾಯದ ಗಿರಿಜ ಅವರ ಕುಟುಂಬವನ್ನು ತೋರಿಸಿದ್ದು , ಗಿರಿಜಾ ಅವರಿಗೆ 10 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತ ಹೆಂಚಿನ ಮನೆ ನಿರ್ಮಿಸಿ ಕೊಟ್ಟಿದ್ದೇವೆ ಎಂದರು.


ಸಮಾಜಸೇವೆ ಮಾದರಿ ಎಂದ ನಳಿನ್‌: ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಹೆತ್ತವರನ್ನು ವೃದ್ಧಾಶ್ರಮ ಸೇರಿಸುವ ಈ ಕಾಲದಲ್ಲಿ ಹೆತ್ತವರ ಮಾತನ್ನು ಉಳಿಸಬೇಕು ಉಮೇಶ್‌ ಶೆಟ್ಟಿ ಆದರ್ಶ ಸಮಾಜಕ್ಕೆ ಮಾದರಿಯಾಗಬೇಕು ಎಂಬ ನಿಟ್ಟಿನಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಮುಂದಾಗಿದ್ದು ಶ್ಲಾಘನೀಯ ಎಂದರು.

ಶಾಸಕ ಉಮಾನಾಥ್ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಉದ್ಯಮಿ ಇಬ್ರಾಹಿಂ ಗಡಿಯಾರ್, ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ ಮತ್ತಿತರರಿದ್ದರು. ಉಮೇಶ್ ಶೆಟ್ಟಿ ಹೊಸಲಕ್ಕೆ ಸ್ವಾಗತಿಸಿದರು. ಶರಣ್ ಶೆಟ್ಟಿ ಪೊಸಲಕ್ಕೆ ದೇವರನ್ನು ಸ್ತುತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ನಿರೂಪಿಸಿದರು.