ಸಾರಾಂಶ
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಕೀಲ ಎಸ್.ಪಿ. ದಿನೇಶ್ ಪರವಾಗಿ ದ. ಕೊಡಗಿನಾದ್ಯಂತ ಮೊದಲ ಹಂತದ ಮತಯಾಚನೆ ನಡೆಯಿತು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿಗೆ ಜೂನ್ 3ರಂದು ನಡೆಯಲಿರುವ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಕೀಲ ಎಸ್.ಪಿ. ದಿನೇಶ್ ಪರವಾಗಿ ಭಾನುವಾರ ದ.ಕೊಡಗಿನಾದ್ಯಂತ ಮೊದಲ ಹಂತದ ಮತಯಾಚನೆ ನಡೆಯಿತು.ವಿರಾಜಪೇಟೆಯ ಸಿ.ಜೆ. ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಮತಯಾಚನೆಯಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಪದವೀಧರ ಮತದಾರರನ್ನು ಭೇಟಿ ಮಾಡಿದ ತಂಡ, ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವಮೊಗ್ಗದ ವಕೀಲರಾದ ಎಸ್.ಪಿ. ದಿನೇಶ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಮತಯಾಚನೆ ತಂಡವು ವಿರಾಜಪೇಟೆಯ ಕಾವೇರಿ ಕಾಲೇಜು, ಸಂತ ಅನ್ನಮ್ಮ ವಿದ್ಯಾಸಂಸ್ಥೆ, ಸರ್ಕಾರಿ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಸೇರಿದಂತೆ ವಿವಿಧಡೆಗಳಿಗೆ ತೆರಳಿ ಎಸ್.ಪಿ. ದಿನೇಶ್ ಅವರ ಪರವಾಗಿ ಮತಯಾಚಿಸಿತು.ಈ ಸಂದರ್ಭ ಮಾತನಾಡಿದ ವಿರಾಜಪೇಟೆಯ ಸಿ.ಜೆ. ಅಶೋಕ್ ಕುಮಾರ್, ಕಳೆದ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಎಸ್.ಪಿ. ದಿನೇಶ್, ಕೇವಲ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇದೀಗ ಮೂರನೇ ಬಾರಿಗೆ ಆಯ್ಕೆ ಬಯಸಿ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಪದವೀಧರರ ಸಮಸ್ಯೆಗಳ ಕುರಿತು ಆಳವಾಗಿ ಅಧ್ಯಯನ ನಡೆಸಿರುವ ಹಿರಿಯ ನ್ಯಾಯವಾದಿಯಾದ ದಿನೇಶ್, ಬದ್ಧತೆಯುಳ್ಳ ಮತ್ತು ದೂರ ದೃಷ್ಟಿಯುಳ್ಳ ರಾಜಕಾರಣಿಯಾಗಿದ್ದಾರೆ ಎಂದರು.
ಮತಯಾಚನೆ ಸಂದರ್ಭದಲ್ಲಿ ಲೋಕೇಶ್ ಶಿವಮೊಗ್ಗ, ವಕೀಲರಾದ ಪ್ರವೀಣ್ ಕುಮಾರ್, ಪ್ರಮುಖರಾದ ಲೋಕೇಶ್ ಮೈಸೂರು, ಶಿವಕುಮಾರ್, ಸದಾಶಿವಪ್ಪ ಮೊದಲಾದವರಿದ್ದರು.