ತಾಲೂಕಿನ ಬಸ್ತಿ ಕಾಯ್ಕಿಣಿ ಬಳಿಯಲ್ಲಿ ಲಾರಿ ಹಾಗೂ ಸ್ಕೂಟಿ ಮಧ್ಯೆ ನಡೆದ ಅಪಘಾತ ಹಾಗೂ ನಂತರ ಜನರು ನಡೆಸಿದ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸ್ಥಳಕ್ಕೆ ಭೇಟಿ ನೀಡಿ ಅಪಘಾತದ ಕಾರಣ ಹಾಗೂ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮದ ಕುರಿತು ಸೂಕ್ತ ಸಲಹೆ, ಮಾಗದರ್ಶನ ನೀಡಿದರು.

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಬಸ್ತಿ ಕಾಯ್ಕಿಣಿ ಬಳಿಯಲ್ಲಿ ಲಾರಿ ಹಾಗೂ ಸ್ಕೂಟಿ ಮಧ್ಯೆ ನಡೆದ ಅಪಘಾತ ಹಾಗೂ ನಂತರ ಜನರು ನಡೆಸಿದ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸ್ಥಳಕ್ಕೆ ಭೇಟಿ ನೀಡಿ ಅಪಘಾತದ ಕಾರಣ ಹಾಗೂ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮದ ಕುರಿತು ಸೂಕ್ತ ಸಲಹೆ, ಮಾಗದರ್ಶನ ನೀಡಿದರು.

ಬಸ್ತಿ ಕಾಯ್ಕಿಣಿಯ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ರ ಮೇಲೆ ಸೇತುವೆ ನಿರ್ಮಾಣ ಮಾಡಲು ಏಕಮುಖ ಸಂಚಾರ ಮಾಡಿದ್ದು, ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿ ಸಾವು-ನೋವು ಉಂಟಾಗುತ್ತಿದೆ. ಮೊನ್ನೆ ಇಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ವ್ಯಕ್ತಿಯೋರ್ವರು ಸ್ಕೂಟಿ ಸಮೇತ ಲಾರಿಯ ಅಡಿಯಲ್ಲಿ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಹೆದ್ದಾರಿಯಲ್ಲಿಯೇ ಪ್ರತಿಭಟನೆ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದ ಡಿವೈಎಸ್ಪಿ ಗಿರೀಶ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಸೂಕ್ತ ಕ್ರಮ ಭರವಸೆ ನೀಡಿದ್ದರು. ಇದರ ಹಿನ್ನೆಲೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸ್ಪಂದಿಸಿದ ಉತ್ತರ ಕನ್ನಡ ಜಿಲ್ಲಾ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪಘಾತಗಳನ್ನು ತಪ್ಪಿಸಬಹುದಾದ ಮಾರ್ಗದ ಕುರಿತು ಮಾರ್ಗದರ್ಶನ ನೀಡಿದ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಗುತ್ತಿಗೆ ಪಡೆದಿರುವ ಕಂಪನಿಯು ಆಮೆಗತಿಯಲ್ಲಿ ಸೇತುವೆ ನಿರ್ಮಾಣ ಮಾಡುತ್ತಿದ್ದು, ಶೀಘ್ರದಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.

ಅಲ್ಲದೇ ಹೆದ್ದಾರಿ ಇಲಾಖೆಯಿಂದ ಪರಿಹಾರ ಪಡೆದೂ ಅಂಗಡಿ ನಡೆಸುತ್ತಿರುವುದನ್ನು ಕಂಡ ಅವರು ಶೀಘ್ರ ತೆರವುಗೊಳಿಸಲು ಹಾಗೂ ಪಾದಾಚಾರಿಗಳ ಸಂಚಾರಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡುವಂತೆಯೂ ಸೂಚಿಸಿದರು.

ಈ ಸಂದರ್ಭ ಡಿವೈಎಸ್ಪಿ ಗಿರೀಶ್ ಬಿ., ಸಬ್ ಇನ್‌ಸ್ಪೆಕ್ಟರ್ ಹಣಮಂತ ಬಿರಾದಾರ, ಊರಿನ ಪ್ರಮುಖರು ಉಪಸ್ಥಿತರಿದ್ದರು.