ನೆಲ್ಲಿದಡಿಗುತ್ತು ದೈವಸ್ಥಾನ ಉಳಿವಿಗೆ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ

| Published : Mar 20 2025, 01:17 AM IST

ಸಾರಾಂಶ

ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ಬಂಟ ದೈವಸ್ಥಾನವನ್ನು ಸ್ಥಳದಲ್ಲೇ ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟದ ಅಂಗವಾಗಿ ಭಾನುವಾರ ನೆಲ್ಲಿದಡಿ ಗುತ್ತುವಿನಲ್ಲಿ ಕೇಮಾರು ಸಾಂದೀಪನೆ ಆಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿಯವರ ಮುಂದಾಳತ್ವದಲ್ಲಿ ವಿಶೇಷ ಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಬಜಪೆಯ ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ಬಂಟ ದೈವಸ್ಥಾನವನ್ನು ಸ್ಥಳದಲ್ಲೇ ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟದ ಅಂಗವಾಗಿ ಭಾನುವಾರ ನೆಲ್ಲಿದಡಿ ಗುತ್ತುವಿನಲ್ಲಿ ಕೇಮಾರು ಸಾಂದೀಪನೆ ಆಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿಯವರ ಮುಂದಾಳತ್ವದಲ್ಲಿ ನೆಲ್ಲಿದಡಿ ಗುತ್ತುವಿನ ಗಡಿ ಪ್ರಧಾನ ಲಕ್ಷ್ಮಣ ಚೌಟರ ಉಪಸ್ಥಿತಿಯಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿಶೇಷ ಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆ ನೆರವೇರಿತು.

ಕೆಲವು ದಿನಗಳ ಹಿಂದೆ ಮಂಗಳೂರು ವಿಶೇಷ ಆರ್ಥಿಕ ವಲಯ(ಎಂಎಸ್ಇಝಡ್‌) ಸಂಸ್ಥೆ ದೈವಸ್ಥಾನಕ್ಕೆ ಪೂಜೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ ಬಗ್ಗೆ ಹಲವಾರು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದನ್ನು ವಿರೋಧಿಸಿ ಬಜಪೆಯಿಂದ ನೆಲ್ಲಿದಡಿ ಗುತ್ತುವಿಗೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸುವುದಾಗಿ ನೆಲ್ಲಿದಡಿ ಗುತ್ತು ರಕ್ಷಣಾ ಸಮಿತಿ ಕರೆ ಕೊಟ್ಟಿತ್ತು. ನಂತರ ಜಿಲ್ಲಾಧಿಕಾರಿ ಬಳಿ ಸಂಸದರು, ಶಾಸಕರು ಸಮಾಲೋಚನೆ ನಡೆಸಿ ಹೊಸದಾಗಿ ರಸ್ತೆ ನಿರ್ಮಿಸುವ ಬಗ್ಗೆ ರೂಪುರೇಷೆ ನಿರ್ಮಿಸಿದ್ದಾರೆ ಎಂದು ಹೋರಾಟ ಸಮಿತಿಯ ಮುಂದಾಳು ಶ್ರೀಕಾಂತ್ ಶೆಟ್ಟಿ ಕಾರ್ಕಳ ತಿಳಿಸಿದ್ದರು. ದೈವಸ್ಥಾನಕ್ಕೆ ಬೇರೆಯೇ ರಸ್ತೆಯನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದ್ದರಿಂದ ಆದಷ್ಟು ಬೇಗ ರಸ್ತೆ ಕಾಮಗಾರಿ ನಡೆಯಲಿ ಎಂದು ದೈವದ ಮುಂದೆ ಪ್ರಾರ್ಥಿಸಲಾಯಿತು.

ನೆಲ್ಲಿದಡಿ ಗುತ್ತು ಮನೆಯ ಚಾವಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅದ್ಯಪಾಡಿ ಆದಿನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಜಿತ್ ಆಳ್ವ, ನೆಲ್ಲಿದಡಿಗುತ್ತು ರಕ್ಷಣಾ ಸಮಿತಿಯ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಮಂಜಣ್ಣ ಸೇವಾ ಬ್ರಿಗೇಡ್ ಸ್ಥಾಪಕಾಧ್ಯಕ್ಷ ಮನೋಜ್ ಕೋಡಿಕೆರೆ, ಮನೋಹರ್ ಶೆಟ್ಟಿ ತೋನ್ಸೆ, ನ್ಯಾಯವಾದಿ ಶೈಲೇಶ್ ಚೌಟ ಮತ್ತಿತರರಿದ್ದರು.