ನರಸಿಂಹರಾಜಪುರ: ಶಾಸಕ ಟಿ.ಡಿ.ರಾಜೇಗೌಡರಿಗೆ ನ್ಯಾಯ ಸಿಗಲಿ ಎಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಆರ್.ರವಿಶಂಕರ್ ತಿಳಿಸಿದರು.

ಕಾಂಗ್ರೆಸ್ ಪಕ್ಷದಿಂದ ಕೋಟೆ ಮಾರಿಕಾಂಬ ದೇವಸ್ಥಾನ, ಸಿಂಹನಗದ್ದೆ ಬಸ್ತಿಮಠದಲ್ಲಿ ಪೂಜೆ

ನರಸಿಂಹರಾಜಪುರ: ಶಾಸಕ ಟಿ.ಡಿ.ರಾಜೇಗೌಡರಿಗೆ ನ್ಯಾಯ ಸಿಗಲಿ ಎಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಆರ್.ರವಿಶಂಕರ್ ತಿಳಿಸಿದರು.

ಗುರುವಾರ ಪಟ್ಟಣದ ಕೋಟೆ ಮಾರಿಕಾಂಬ ದೇವಸ್ಥಾನ,ಸಿಂಹನ ಗದ್ದೆ ಬಸ್ತಿಮಠದಲ್ಲಿ ಶಾಸಕ ಟಿ.ಡಿ.ರಾಜೇಗೌಡರಿಗೆ ಒಳ್ಳೆಯದಾಗಲಿ ಹಾಗೂ ನ್ಯಾಯಾಲಯದಲ್ಲೂ ಜಯ ಸಿಗಲಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಮಗೆ ನ್ಯಾಯಾಂಗದ ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆ ಇದೆ. 2023 ರ ಚುನಾವಣೆಯಲ್ಲಿ ರಾಜೇಗೌಡರು 201 ಮತಗಳಿಂದ ಗೆದ್ದಿದ್ದರು. ಆದರೆ, ಮರು ಎಣಿಕೆಯಲ್ಲಿ ರಾಜೇ ಗೌಡರಿಗೆ ಮಾನ್ಯ ಆದ ಮತಗಳು ಅಮಾನ್ಯ ಎಂದು ಮೋಸ ಮಾಡಿದವರಿಗೆ ದೇವರು ತಕ್ಕ ಶಿಕ್ಷೆ ನೀಡಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಮೇ 2 ರಿಂದ ಇಲ್ಲಿವರೆಗೆ ಶೃಂಗೇರಿ ಕ್ಷೇತ್ರದಲ್ಲಿ ಆಗುತ್ತಿರುವ ಚುನಾವಣಾ ವ್ಯವಸ್ಥೆ ಬಗ್ಗೆ ಮುಂದಿನ ದಿನಗಳಲ್ಲಿ ಜನತೆಗೆ ತಿಳಿಸುತ್ತೇವೆ.ಕಾಂಗ್ರೆಸ್ ಕಾರ್ಯಕರ್ತರಿಗೆ ಆತ್ಮ ಬಲವಿದೆ ಎಂದರು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಇ.ಸಿ.ಜೋಯಿ ಮಾತನಾಡಿ,ಶೃಂಗೇರಿ ಕ್ಷೇತ್ರ ಪವಿತ್ರ ಕ್ಷೇತ್ರವಾಗಿದ್ದು ಪ್ರಾಮಾಣಿಕ ರಾಜ ಕಾರಣಕ್ಕೆ ಹೆಸರು ಬಂದಿತ್ತು. ಆದರೆ, 2023 ರಲ್ಲಿ ರಾಜೇಗೌಡರು ಗೆದ್ದು ಕಳೆದ 3 ವರ್ಷದಿಂದ ಅತ್ಯುತ್ತಮ ಆಡಳಿತ ನಡೆಸಿದ್ದರು. ಆದರೆ, ಮಾಜಿ ಸಚಿವರು ಮರು ಎಣಿಕೆ ಮಾಡಿಸಿ ಮೋಸದ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಈ ವಿಚಾರವು ಸುಪ್ರೀಂ ಕೋರ್ಟಿನಲ್ಲಿದೆ. ಕಾಂಗ್ರೆಸ್ ನಿಂದ ದೇವಸ್ಥಾನ, ಮಸೀದಿ, ಚರ್ಚಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಸತ್ಯಕ್ಕೆ ಜಯವಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.

ತಾಲೂಕು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ನಗರ ಘಟಕದ ಅಧ್ಯಕ್ಷ ಶ್ರೀಧರ್ ಪಾನಿ, ಮುಖಂಡರಾದ ಎಚ್.ಬಿ.ರಘುವೀರ್, ಸಾಜು, ಶಿವಣ್ಣ, ಮಾಳೂರು ದಿಣ್ಣೆ ರಮೇಶ್, ಸಮೀರ ನಹೀಂ, ಸುನೀಲ್, ನರೇಂದ್ರ, ಗಂಗಾಧರ್, ದೇವಂತರಾಜ್ ಗೌಡ್, ಹರೀಶ,ಮುತ್ತಿನಕೊಪ್ಪ ದೇವಂತ್ ಇದ್ದರು.