ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಸ್ವಾಗತಿಸಿದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು, ಸೈನ್ಯಕ್ಕೆ ಹೆಚ್ಚಿನ ಬಲ ತುಂಬಲಿ ಎಂದು ಪ್ರಾರ್ಥಿಸಿ, ನಗರದ ವಡಕರಾಯ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು.ಯುವಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ಕಳೆದ ಏ.22ರಂದು ಕಾಶ್ಮೀರದ ಪಹಲ್ಗಾಂನಲ್ಲಿ 26 ಜನರನ್ನು ಉಗ್ರರು ಹತ್ಯೆ ಮಾಡಿರುವ ಘಟನೆ ಇಡೀ ಭಾರತೀಯರನ್ನು ತಲ್ಲಣಗೊಳಿಸಿದೆ. ಈ ಕೃತ್ಯ ನಡೆಸಿದ ಉಗ್ರರು ಎಲ್ಲಿ ಅಡಗಿ ಕುಳಿತಿರಲಿ, ಅವರನ್ನು ಸದೆ ಬಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಜ್ಞೆ ಮಾಡಿದ್ದರು. ಇದಕ್ಕೆ ಇಂದು ಉತ್ತರ ಸಿಕ್ಕಿದ್ದು, 145 ಕೋಟಿ ಭಾರತೀಯರು ಹೆಮ್ಮೆ ಪಡುವಂತಾಗಿದೆ. ತಮ್ಮ ಪ್ರಾಣವನ್ನು ಲೆಕ್ಕಿಸದೇ, ನಮ್ಮ ಸೈನಿಕರು ಉಗ್ರರನ್ನು ಸದೆ ಬಡೆದಿದ್ದಾರೆ. ಪಾಕಿಸ್ತಾನದ ಉಗ್ರರ ಅಡಗು ತಾಣಗಳ ಮೇಲೆ ನಡೆಸಲಾದ ಆಪರೇಷನ್ ಸಿಂಧೂರನಲ್ಲಿ ಉಗ್ರರನ್ನು ಧ್ವಂಸ ಮಾಡುವಲ್ಲಿ ಯುದ್ಧ ವಿಮಾನಗಳ ಮಹಿಳಾ ಪೈಲಟ್ಗಳ ತೋರಿದ ಸಾಹಸವನ್ನು ಭಾರತೀಯರು ಯಾರೂ ಮರೆಯುವಂತಿಲ್ಲ. ಭಾರತೀಯ ವಾಯುಸೇನೆ, ಭೂಸೇನೆ ಹಾಗೂ ನೌಕಾ ಸೇನೆಗೆ ಭಗವಂತ ಇನ್ನಷ್ಟು ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರದ ನಾಯಕರು ಮತ್ತು ಯೋಧರಿಗೆ ಶಕ್ತಿ ತುಂಬುವ ಸಲುವಾಗಿ ಈ ದಿನ ನಾಡಿನೆಲ್ಲಡೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದರು.ಮೋರ್ಚಾದ ಉಪಾಧ್ಯಕ್ಷ ಸೂರಿ ಬಂಗಾರು, ಕಾರ್ಯದರ್ಶಿ ವ್ಯಾಸ್ರಾಜ್, ಮಂಡಲ ಯುವ ಮೋರ್ಚಾ ಅಧ್ಯಕ್ಷ ಎಚ್.ರಾಘವೇಂದ್ರ, ಯುವ ಮುಖಂಡರಾದ ಶಶಿಕುಮಾರ್, ವಿಷ್ಣು, ಮುರುಳಿ, ಹನುಮೇಶ್, ಅವಿನಾಶ್, ಬಸವ, ಅಭಿ, ಸತೀಶ್ ಇತರರಿದ್ದರು.