ಬೆಟ್ಟದ ತುದಿಯಲ್ಲಿ ಸುಣ್ಣ ಅಥವಾ ಸುರಮ ಅದೃಶ್ಯ ರೀತಿಯಲ್ಲಿ ಬೆಟ್ಟದ ತುದಿಯಲ್ಲಿ ಹೊಳೆಯುವುದರಿಂದ ಈ ಭಾಗದ ರೈತರು ವರ್ಷದ ಮಳೆ- ಬೆಳೆಗಳನ್ನು ಅಂದಾಜಿಸುತ್ತಾರೆ.

ಗಜೇಂದ್ರಗಡ: ಭಕ್ತರ ಆರಾಧ್ಯ ದೈವ, ಪಟ್ಟಣ ಸಮೀಪದ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಾತಃಕಾಲ ಕಾಲಕಾಲೇಶ್ವರನಿಗೆ ವಿಶೇಷ ಪೂಜಾ ಕಾರ್ಯಗಳು ಸಂಭ್ರಮದಿಂದ ನಡೆದವು.

ಚೈತ್ರ ಮಾಸದ ಯುಗಾದಿ ಪ್ರತಿಪದದಂದು ಕಾಲಕಾಲೇಶ್ವರ ಗುಡ್ಡದ ಸನ್ನಿಧಾನದಲ್ಲಿ ಸುಣ್ಣ ಸುರಮ ಲೀಲೆ ಮತ್ತು ಮಳೆ, ಬೆಳೆ ಸೂಚಿಸುವ ಗಂಗಾ ಉದ್ಭವ ವೀಕ್ಷಿಸಲು ಭಕ್ತರು ಆಗಮಿಸಿದ್ದರು. ಕಾಲಕಾಲೇಶ್ವರ ಸನ್ನಿಧಾನದಲ್ಲಿ ಸುಣ್ಣ, ಸುರಮಗಳನ್ನಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು.ಬೆಟ್ಟದ ತುದಿಯಲ್ಲಿ ಸುಣ್ಣ ಅಥವಾ ಸುರಮ ಅದೃಶ್ಯ ರೀತಿಯಲ್ಲಿ ಬೆಟ್ಟದ ತುದಿಯಲ್ಲಿ ಹೊಳೆಯುವುದರಿಂದ ಈ ಭಾಗದ ರೈತರು ವರ್ಷದ ಮಳೆ- ಬೆಳೆಗಳನ್ನು ಅಂದಾಜಿಸುತ್ತಾರೆ. ಮಾಡದಿಂದ ನೀರು ಹರಿದು ಬಂದರೆ ಉತ್ತಮ ಮಳೆಗಾಲ. ಇಲ್ಲದಿದ್ದಲ್ಲಿ ಬರಗಾಲ ಎಂಬ ನಂಬಿಕೆ ರೈತರದ್ದಾಗಿದ್ದು, ಅಂದು ಬೆಳಗ್ಗೆಯೇ ಬಹುಸಂಖ್ಯೆಯಲ್ಲಿ ರೈತರು ದೇವಸ್ಥಾನಕ್ಕೆ ತೆರಳಿ ವರ್ತುಲಾಕಾರದ "ಮಾಡ "ದ ದರ್ಶನ ಮಾಡಿ ಬರುವುದು ವಾಡಿಕೆ.ಮಂಗಲಾ ದೇಶಮುಖ ಹಾಗೂ ಘೋರ್ಪಡೆ ಕುಟುಂಬಸ್ಥರಿಂದ ದವನದ ಹುಣ್ಣಿಮೆಯಂದು ನಡೆಯುವ ಕಾಲಕಾಲೇಶ್ವರ ಜಾತ್ರೆಗೆ ಯುಗಾದಿಯಂದು ತೇರಿನ ಮನೆಯಿಂದ ರಥದ ಬೀದಿಯಲ್ಲಿ ತೇರು ಹೊರತಂದು ಅರ್ಚಕರ ನೇತೃತ್ವದಲ್ಲಿ ಬೇವು- ಬೆಲ್ಲ ನೈವೇದ್ಯ ಮಾಡಿ ನಂತರ ರಥದ ಪೂಜಾ ಕಾರ್ಯ ನಡೆಸಿದರು.ನಂತರ ಪಲ್ಲಕ್ಕಿ ಉತ್ಸವ, ಸುಣ್ಣ ಸುರುಮ ಇಟ್ಟ ಸ್ಥಾನಕ್ಕೆ ಪೂಜೆ ಹಾಗೂ ತೇರಿನ ರಥ ಬೀದಿಯಲ್ಲಿ ಪಲ್ಲಕ್ಕಿ ಉತ್ಸವದೊಂದಿಗೆ ದೇವಸ್ಥಾನದ ಅರ್ಚಕರು ಹಾಗೂ ಗ್ರಾಮದ ಭಕ್ತರು ಸೇರಿ ಕಾಲಕಾಲೇಶ್ವರ ಉತ್ಸವ ಮೂರ್ತಿಯೊಂದಿಗೆ ಐದು ಹೆಜ್ಜೆಯಷ್ಟು ಬೋಳು ತೇರನ್ನು ಎಳೆಯಲಾಯಿತು. ಬಳಿಕ ಕಾಲಕಾಲೇಶ್ವರ ಸ್ವಾಮಿಗೆ ಮಹಾ ಮಂಗಳಾರತಿ ಇನ್ನಿತರ ವಿಶೇಷ ಪೂಜಾ ಕಾರ್ಯಗಳು ಸಂಭ್ರಮದಿಂದ ನಡೆಯಿತು.ಮಾಡದಲ್ಲಿ ಸಮರ್ಪಕವಾಗಿ ನೀರು ಬಂದಿದ್ದು, ಸಕಾಲಕ್ಕೆ ಮಳೆಯಾಗುತ್ತದೆ, ಅತಿವೃಷ್ಟಿಯಾಗುವುದಿಲ್ಲ. ಮುಂಗಾರು ಮಳೆಯಲ್ಲಿ ಸಿಡಿಲು, ಮಿಂಚು ಹಾಗೂ ಗಾಳಿಯ ಆರ್ಭಟ ಹೆಚ್ಚಿರಲಿದೆ ಎಂದು ತಿಳಿಸಿದರೆ, ಇತ್ತ ಗುರುವಾರ ರಾತ್ರಿ ದೇವಸ್ಥಾನ ಮುಂಭಾಗದಲ್ಲಿಟ್ಟದ್ದ ಸುಣ್ಣ ಹಾಗೂ ಸುರಮ ಸಮ ಪ್ರಮಾಣದಲ್ಲಿ ಬೆಟ್ಟದಲ್ಲಿ ಹಚ್ಚಿಕೊಂಡಿದ್ದು, ಮಳೆಗಾಲದಲ್ಲಿ ಮಳೆ ಸಮರ್ಪಕವಾಗಿರಲಿದ್ದು, ಬಿಳಿ ಕಾಳು ಫಸಲಿಗೆ ಬಲ ಇದೆ ಎಂದು ತಿಳಿಸಿದರು.

ಈ ವೇಳೆ ಧರ್ಮದರ್ಶಿಗಳಾದ ಯಶರಾಜ್ ಘೋರ್ಪಡೆ, ಮಂಗಲಾ ದೇಶಮುಖ, ಕೀರ್ತಿ ಘೋರ್ಪಡೆ, ಅರ್ಚಕರಾದ ರಾಜನಾರಾಯಣ ಭಟ್ ಪೂಜಾರ, ಮಲ್ಲಯ್ಯ ಪೂಜಾರ, ರಾಜೇಂದ್ರಸ್ವಾಮಿ ಹಿರೇಮಠ, ಶಶಿಧರ ಹೂಗಾರ, ಅಜಿತ ವಂದಕುದರಿ ಸೇರಿ ಗಜೇಂದ್ರಗಡ ಹಾಗೂ ಮ್ಯಾಗೇರಿ ಗ್ರಾಮ ಭೋವಿ ಸಮಾಜದ ಮುಖಂಡರಿದ್ದರು.